ಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿ
ಮೈಸೂರು, ಆಗಸ್ಟ್ 24 : ನಾಡಹಬ್ಬ ದಸರೆಯು ಸೆಪ್ಟೆಂಬರ್ 29ಕ್ಕೆ ಚಾಮುಂಡಿ ಬೆಟ್ಟದಲ್ಲಿ 9:30 ರಿಂದ 10:20 ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಚಾಲನೆ ಸಿಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದರು. ಸೆ.29ರಿಂದ ಅ,8ರವರೆಗೆ ನಡೆಯಲಿರುವ ದಸರೆ ಕಾರ್ಯಕ್ರಮ ನಡೆಯಲಿದೆ. ಸೆ.29ರಂದು ಚಾಮುಂಡಿಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು.

ಅ.8ರ ವಿಜಯದಶಮಿಯಂದು ಮಧ್ಯಾಹ್ನ 2:15 ರಿಂದ 2:58ರೊಳಗೆ ಸಲ್ಲುವ ಶುಭಲಗ್ನದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಂಜೆ 4:30ರಿಂದ 4:58ರಲ್ಲಿ ಸಲ್ಲುವ ಮಕರ ಶುಭಲಗ್ನದಲ್ಲಿ ದಸರಾ ಉದ್ಘಾಟಕರಾದ ಎಸ್ ಎಲ್ ಭೈರಪ್ಪ ಹಾಗೂ ಮುಖ್ಯಮಂತ್ರಿಗಳಿಂದ ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಬಾರಿಯ ದಸರಾದಲ್ಲಿ ವಿಭಿನ್ನ ಕಾರ್ಯಕ್ರಮ ಅಳವಡಿಕೆ ಮಾಡಲಾಗುತ್ತದೆ. ಇದೇ ದಸರೆಯ ಕುರಿತು ಸೋಮವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ನಡೆಸುತ್ತೇನೆ. ಸ್ಥಳೀಯ ಶಾಸಕರು, ಪಾಲಿಕೆ, ಜಿಪಂ ಸದಸ್ಯರ ಸಭೆ ನಡೆಸಿ ಇದೇ ವೇಳೆ ಚರ್ಚಿಸುತ್ತೇನೆ ಎಂದರು.

ಪ್ರತಿ ವರ್ಷ ಗೊಂದಲದ ಗೂಡಾಗುವ ದಸರಾ ಪಾಸ್ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಹತ್ತು ದಿನಗಳಲ್ಲಿ ದಸರಾ ಪಾಸ್ ರೆಡಿಯಾಗಲಿದೆ. ದಸರಾ ಸಂಬಂದ ಗೊಂದಲ ನಿವಾರಣೆಗೆ ಕಾಲ್ ಸೆಂಟರ್ ತೆರೆಯಲಾಗುತ್ತದೆ. ದಸರೆಗೆ ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳನ್ನು ನಾನೇ ಫಲ ತಾಂಬೂಲ ಕೊಟ್ಟು ಆಹ್ವಾನ ಮಾಡುತ್ತೇನೆ. ಎಲ್ಲಾ ಜನಪ್ರತಿನಿಧಿಗಳನ್ನ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಅರಮನೆಗೆ ತೆರಳಿ ರಾಜಮನೆತನದವರಿಗೂ ಆಹ್ವಾನ ನೀಡುತ್ತೇವೆ. ಪ್ರತಿ ಕಾರ್ಯಕ್ರಮಗಳಲ್ಲಿಯೂ ರಾಜಮನೆತನ ಭಾಗಿಯಾಗಲು ಕೋರುತ್ತೇನೆ. ಮೈಸೂರಿನ ಎಲ್ಲಾ ಮಠ- ಮಂದಿರ ಚರ್ಚ್, ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿಗಳ ಭೇಟಿ ಮಾಡಿ ಆಹ್ವಾನ ನೀಡಲಾಗುತ್ತದೆ ಎಂದರು.
ಆನೆಗಳ ಜತೆ ಬಂದಿರುವ ಮಾವುತರು, ಕವಾಡಿಗಳಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಒಂದು ದಿನ ಮೈಸೂರು ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸುತ್ತೇವೆ. ದಸರಾ ಉದ್ಘಾಟಕರಾದ ಎಸ್ ಎಲ್ ಭೈರಪ್ಪ ಅವರ ಸಲಹೆ ಕೂಡ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.
ನಾಡಹಬ್ಬದ ಪ್ರಮುಖ ಆಕರ್ಷಣೆ ಝಗಮಗಿಸುವ ವಿದ್ಯುದ್ದೀಪಗಳು. ಹಾಗಾಗಿ ಈ ಬಾರಿ ದಸರಾ ಮುಗಿದು 15 ದಿನಗಳವರೆಗೂ ದೀಪಗಳಿಂದ ರಂಗೇರಲಿದೆ ಎಂದರು.

ಅಲ್ಲದೇ ವರ್ಷ ಪೂರ್ತಿ ದಸರಾ ವೆಬ್ ಸೈಟ್ ಕಾರ್ಯ ನಿರ್ವಹಿಸಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ ನೀಡಲಾಗುತ್ತದೆ. ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ದೇಶದಲ್ಲೂ ದಸರೆ ಪ್ರಚಾರ ಮಾಡಲಾಗುತ್ತದೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಸಭೆಗೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್, ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸೇರಿ ಹಲವು ಶಾಸಕರು ಗೈರಾಗಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದ ಮೊದಲ ಸಚಿವ ಸಂಪುಟದಲ್ಲಿ ಹಳೆ ಮೈಸೂರು ಭಾಗ ಕಡೆಗಣನೆ ಮಾಡಲಾಗಿದ್ದು, ಈ ಹಿನ್ನೆಲೆ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಸಭೆಯಲ್ಲಿ ಗೊಂದಲವುಂಟಾಗಿದೆ ಎಂಬುದು ಕೇಳಿಬರುತ್ತಿತ್ತು.












Click it and Unblock the Notifications