ಆತ್ಮಸಾಕ್ಷಿ ಇದ್ದರೆ ಸದನಕ್ಕೆ ಬನ್ನಿ; ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ ರಾ ಮಹೇಶ್
Recommended Video
ಮೈಸೂರು, ಜುಲೈ 20 : "ವಿಶ್ವನಾಥ್ ಅವರೇ ಒಂಭತ್ತು ಬಾರಿ ಚುನಾವಣೆ ಎದುರಿಸಿದ್ದೀರಿ. ಅದಕ್ಕೆ ಎಲ್ಲಿಂದ ಹಣ ತಂದಿರಿ ಎಂಬುದನ್ನು ವಿಧಾನಸಭೆಯಲ್ಲೇ ಬಹಿರಂಗಪಡಿಸುತ್ತೇನೆ. ಬನ್ನಿ ನೋಡೋಣ" ಎಂದು ಶಾಸಕ ಎಚ್.ವಿಶ್ವನಾಥ್ ಅವರಿಗೆ ಸಚಿವ ಸಾ.ರಾ ಮಹೇಶ್ ಬಹಿರಂಗ ಸವಾಲೆಸೆದಿದ್ದಾರೆ.
ಮೈಸೂರಿನ ತಮ್ಮ ಕಚೇರಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ವಿಶ್ವನಾಥ್ ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ ಹಾಗೂ ನನ್ನ ಪಕ್ಷದ ವರಿಷ್ಠರು. ಪುನರ್ ಜನ್ಮ ನೀಡಿದ ಪಕ್ಷದ ಋಣ ತೀರಿಸಬೇಕಿದ್ದರೆ ವಿಶ್ವಾಸಮತಕ್ಕೆ ಬನ್ನಿ. ಸೋಮವಾರ ಬಂದು ಸದನದಲ್ಲಿ ನಿಮ್ಮ ಹೇಳಿಕೆ ನೀಡಿ. ನನ್ನ 30 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ. ನಿಮಗೆ ಮಂತ್ರಿ ಸ್ಥಾನ ಬೇಡ, ಹಣವೂ ಬೇಡ ಅಂದಿದ್ರಿ. ಈಗ ಯಾಕೆ ಮುಂಬೈಗೆ ವಿಶೇಷ ವಿಮಾನದಲ್ಲಿ ಹೋಗಿದ್ದೀರಾ" ಎಂದು ಪ್ರಶ್ನಿಸಿದರು.
"ಜಿ.ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಜೆಡಿಎಸ್ ಗೆ ವಿಶ್ವನಾಥ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದನ್ನು ಲೆಕ್ಕಿಸದೆ ವಿಶ್ವನಾಥ್ ಅವರನ್ನು ನಾನು ಆಹ್ವಾನಿಸಿದೆ. ಹುಣಸೂರಿನಲ್ಲಿ ಪ್ರಜ್ವಲ್ ಅಥವಾ ಹರೀಶ್ ಗೌಡ ಸ್ಪರ್ಧೆ ಮಾಡಬೇಕಿತ್ತು. ಇಷ್ಟೆಲ್ಲಾ ವಿರೋಧದ ನಡುವೆ ವಿಶ್ವನಾಥ್ ಪಕ್ಷಕ್ಕೆ ಬಂದರು. ನಾನು ಎಸ್ ಅನ್ನದಿದ್ದರೆ ಅವರು ಪಕ್ಷಕ್ಕೆ ಬರುತ್ತಿರಲಿಲ್ಲ. ವಿಶ್ವನಾಥ್ ಸೇರ್ಪಡೆ ಬಗ್ಗೆ ಪಕ್ಷದ ಹೈ ಕಮಾಂಡ್ ಗೆ ನಾನೇ ಒಪ್ಪಿಗೆ ನೀಡಿದ್ದೆ. ಹಾಗಾಗಿ, ನನ್ನ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಇಂದಿನ ಇಕ್ಕಟ್ಟಿನ ಸ್ಥಿತಿಗೆ ನಾನು ಕೂಡ ಪರೋಕ್ಷ ಕಾರಣ" ಎಂದು ತಮ್ಮನ್ನು ತಾವೇ ದೂರಿಕೊಂಡರು.

"ನಿಮ್ಮನ್ನ ರಾಜ್ಯಾಧ್ಯಕ್ಷ ಮಾಡಿದ್ವಿ. ನಾವು ಜಾತಿವಾದಿಗಳ...? ನಾನು ವ್ಯವಹಾರದಲ್ಲಿ ಒಬ್ಬ ಡೆವಲಪರ್ ಆಗಿದ್ದೇನೆ. ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಕೆ.ಆರ್. ನಗರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದರಲ್ಲಿ ನಿಮ್ಮ ವಿರುದ್ಧವೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ನೀವು ಒಂಬತ್ತು ಚುನಾವಣೆ ಎದುರಿಸಿದ್ದಿರಲ್ಲಾ, ನಿಮಗೆ ಹಣ ಎಲ್ಲಿಂದ ಬಂತು?. ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಇದ್ದರೆ ಸೋಮವಾರ ಸದನಕ್ಕೆ ಬನ್ನಿ. ನಾನು ಹೇಳಿರುವ ಮಾತಿನಲ್ಲಿ ತಪ್ಪಿದ್ದರೆ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳುತ್ತೇನೆ" ಎಂದರು.
"ನಮ್ಮ ಪಕ್ಷದ ಮೂವರು ಸೇರಿ ಒಟ್ಟು 15 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ರಾಜೀನಾಮೆಗಳು ಯಾವುವೂ ಅಂಗೀಕಾರವಾಗಿಲ್ಲ. ಹೀಗಿರುವಾಗ ಸರ್ಕಾರ ಅಲ್ಪಮತಕ್ಕೆ ಕುಸಿಯುವುದಾದರೂ ಹೇಗೆ" ಎಂದು ಸಾ.ರಾ. ಮಹೇಶ್ ಪ್ರಶ್ನಿಸಿದರು. ಅಲ್ಲದೆ, ಸೋಮವಾರದ ಕಲಾಪದಲ್ಲಿ ತಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications