ಗುಂಡಿಮುಚ್ಚಲು ಮೈಸೂರಿನಲ್ಲಿ ರಸ್ತೆಗಿಳಿದ ರೋಡ್ ಡಾಕ್ಟರ್ಸ್
ಮೈಸೂರು, ನವೆಂಬರ್ 2 : ಗುಂಡಿಬಿದ್ದ ರಸ್ತೆಗಳಿಂದ ಸಾವು ನೋವುಗಳಾಗುತ್ತಿರುವ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಸಜ್ಜಾಗಿರುವ ಮೈಸೂರು ಮಹಾನಗರ ಪಾಲಿಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದು ಮಹಾನಗರ ಪಾಲಿಕೆ ಮನಸ್ಸು ಮಾಡಿ, ಸರ್ಕಾರ ಅನುಮತಿ ನೀಡಿದರೆ ಪಾಟ್ ಹೋಲ್ ಬಸ್ಟರ್ಸ್ ಹೆಸರಿನಲ್ಲಿ 'ರೋಡ್ ಡಾಕ್ಟರ್ಸ್' ಶೀಘ್ರದಲ್ಲೇ ರಸ್ತೆಗಿಳಿಯಲಿದ್ದಾರೆ.
ಅತ್ಯಾಧುನಿಕ ತಂತಜ್ಞಾನ ಒಳಗೊಂಡಿರುವ ಪರಿಸರ ಸ್ನೇಹಿ ಯೋಜನೆ ಇದಾಗಿದ್ದು, ದಿಲ್ಲಿ ಮೂಲದ ಕ್ಯಾಮ್ ಅವಿಡಾ ಎಂಬ ಸಂಸ್ಥೆ ಇದನ್ನು ಪರಿಚಯಿಸಿದೆ. ಈಗಾಗಲೇ ದಿಲ್ಲಿ, ಪೂನಾ ಮತ್ತು ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ತೋರಿಸಿರುವ 'ರೋಡ್ ಡಾಕ್ಟರ್' ನಗರಕ್ಕೆ ಆಗಮಿಸಿದ್ದು ರಸ್ತೆಗಳಿಗೆ 'ಚಿಕಿತ್ಸೆ' ನೀಡುವ ವಿಧಾನವನ್ನು ಪರಿಚಯಿಸಿತು.

ನಗರದ ಮೃಗಾಲಯ ರಸ್ತೆ- ಲೋಕರಂಜನ್ ಮಹಲ್ ರಸ್ತೆ ಜಂಕ್ಷನ್ ನಲ್ಲಿ ಅತ್ಯಾಧುನಿಕ ತಂತಜ್ಞಾನದ ಮೂಲಕ ಗುಂಡಿಯನ್ನು ಮುಚ್ಚುವ ಪ್ರಾತ್ಯಕ್ಷಿಕೆಯನ್ನು ನೀಡಿದ 'ರೋಡ್ ಡಾಕ್ಟರ್' ಪ್ರಸ್ತುತ ಮಾನವ ಶಕ್ತಿ ಬಳಸಿ ಲಭ್ಯವಿರುವ ಉಪಕರಣಗಳಲ್ಲಿ ಗುಂಡಿ ಮುಚ್ಚುತ್ತಿರುವ ವಿಧಾನಕ್ಕೂ ಇದಕ್ಕೂ ಇರುವ ವ್ಯತ್ಯಾಸವನ್ನು ತೋರಿಸಿದರು.

ಪರಿಸರ ಸ್ನೇಹಿ
ಹೊಸ ತಂತ್ರಜ್ಞಾನ, ಪರಿಸರ ಸ್ನೇಹಿಯಾಗಿದ್ದು, ರಸ್ತೆ ಸಂಚಾರದ ಅಡಚಣೆಯನ್ನು ಕಡಿತಗೊಳಿಸುವ ಜತೆಗೆ ದೀರ್ಘಕಾಲ ಬಾಳಿಕೆ ಬರಲಿದೆ ಎಂದು ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ಸುರೇಶ್ ಬಾಬು ತಿಳಿಸಿದರು.
ವೆಚ್ಚ ಸ್ವಲ್ಪ ದುಬಾರಿ
ಪ್ರಸ್ತುತ ನಾವು ಗುಂಡಿ ಮುಚ್ಚುವ ಕಾರ್ಯಕ್ಕೆ ಮಾಡುತ್ತಿರುವ ವೆಚ್ಚಕ್ಕೆ ಹೋಲಿಸಿದರೆ ಇದು ಶೇ.50ರಷ್ಟು ಹೆಚ್ಚಾಗಲಿದೆ. ನಾವೇ ಸ್ವಂತವಾಗಿ ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡರೂ ಶೇ.10ರಷ್ಟು ಹೆಚ್ಚಾಗಲಿದೆ. ಒಂದು ಚದರ ಮೀ. ಗುಂಡಿ ಮುಚ್ಚಲು 1,500 ರೂ. ಗಿಂತಲೂ ಹೆಚ್ಚು ವೆಚ್ಚವಾಗಲಿದೆ. ಆದರೆ ಇನ್ನೂ ದರ ಅಂತಿಮವಾಗಿಲ್ಲ.












Click it and Unblock the Notifications