ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ಜಾಗದಲ್ಲೇ ಸ್ಮಾರಕ ನಿರ್ಮಿಸಲು ಒತ್ತಾಯ
ಮೈಸೂರು, ಫೆಬ್ರವರಿ 19: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಯೋಧ ಗುರು ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿಯೇ ಸ್ಮಾರಕ ಹಾಗೂ ಉದ್ಯಾನವನ್ನು ನಿರ್ಮಾಣ ಮಾಡುವುದು ಉತ್ತಮ ಎಂದು ಗುಡಿಗೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈಗಾಗಲೇ ಸರ್ಕಾರ ಹಾಗೂ ಸಾರಿಗೆ ಸಚಿವ ಡಿ. ಸಿ ತಮ್ಮಣ್ಣ ಅವರು ಗುಡಿಗೆರೆ ಬಳಿಯೇ 10 ಗುಂಟೆ ಜಮೀನಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಮಳವಳ್ಳಿ - ಮದ್ದೂರು ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸ್ಥಳ ಉತ್ತಮವಾಗಿದ್ದು, ಯೋಧ ಗುರುವಿನ ಸ್ಮಾರಕ ಹಾಗೂ ಉದ್ಯಾನವನ್ನು ನಿರ್ಮಾಣ ಮಾಡಿದರೆ ವಾಹನ ಸವಾರರು ಪ್ರಯಾಣಿಕರು ಹಾಗೂ ಪ್ರವಾಸಿಗರು ಯೋಧನ ದರ್ಶನ ಪಡೆದು ವಿಶ್ರಮಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಪುತ್ರ ಶೋಕಂ ನಿರಂತರಂ ಎಂಬಂತೆ ಮಗನನ್ನು ಕಳೆದುಕೊಂಡಿರುವ ತಂದೆ ಹೊನ್ನಯ್ಯ ಹಾಗೂ ತಾಯಿ ಚಿಕ್ಕೋಳಮ್ಮ ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಪತ್ನಿಯಂತೂ ಪತಿಯ ನೆನಪಿನಲ್ಲಿ ಕಾಲ ದೂಡುತ್ತಿದ್ದಾರೆ. ಪ್ರತಿದಿನ ಮಗನ ಚಿತಾಭಸ್ಮ ಇರುವ ಸ್ಥಳಕ್ಕೆ ಹೋಗಿ ಸ್ವಲ್ಪ ಹೊತ್ತು ಕುಳಿತು ಮನಸ್ಸು ಸಮಾಧಾನ ಪಡಿಸಿಕೊಳ್ಳುತ್ತಿದ್ದಾರೆ ಗುರು ಪೋಷಕರು.

ಇತ್ತ ಪ್ರತಿ ದಿನ ಹುತಾತ್ಮ ಯೋಧ ಗುರು ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ತಂಡೋಪತಂಡವಾಗಿ ಆಗಮಿಸಿ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸುತ್ತಿದ್ದಾರೆ. ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಯೋಧನ ಚಿತಾಭಸ್ಮಕ್ಕೆ ನಮಿಸಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ದೇಶಾಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಯೋಧನ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಇತ್ತ ಯೋಧ ಗುರು ಕುಟುಂಬಕ್ಕೆ ನೆರವಿನ ಪೂರ ಹರಿದು ಬರುತ್ತಿದೆ. ವಿವಿಧೆಡೆಗಳಿಂದ ಆಗಮಿಸಿದ ಸಂಘ ಸಂಸ್ಥೆಗಳು, ದಾನಿಗಳು ನೆರವಿನ ಸಹಾಯ ಹಸ್ತ ಚಾಚಿದ್ದಾರೆ.

ಇನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಸಮಾನ ಮನಸ್ಕ ಯುವಕರ ವೇದಿಕೆಯ ಕಾರ್ಯಕರ್ತರು ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲು ಯೋಧ ಗುರು ಆಸ್ತಿಯನ್ನು ಸಂಗ್ರಹಿಸಿಕೊಂಡು ಹೋದದ್ದು ವಿಶೇಷವಾಗಿತ್ತು.












Click it and Unblock the Notifications