ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಮಾವು – ಹಲಸು ಮೇಳ
ಮೈಸೂರು, ಜೂನ್ 1 : ಈಗ ಎಲ್ಲೆಲ್ಲೂ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ. ಬಾಯಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಉತ್ತಮವಾದ ಈ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಇತ್ತೀಚೆಗೆ ಕೆಮಿಕಲ್ ಕಾಟ, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.
ಇದನ್ನು ತಪ್ಪಿಸಿ ಮಧ್ಯವರ್ತಿಗಳಿಗೆ ಅವಕಾಶ ಕೊಡದೆ ರೈತರಿಂದ ಗ್ರಾಹಕರಿಗೆ ನೇರ ಶುಚಿ ಮತ್ತು ರುಚಿಯಾದ ಹಣ್ಣನ್ನು ತಲುಪಿಸುವ ದೃಷ್ಟಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾವಿನ ಮೇಳ ನಡೆಸಲಾಗುತ್ತಿದೆ.
ಈ ವರ್ಷ ಮಾವು ಬಲು ದುಬಾರಿ: ಮೇಳಕ್ಕೂ ನೀತಿ ಸಂಹಿತೆ ಅಡ್ಡಿ
ತೋಟಗಾರಿಕಾ ಇಲಾಖೆ ವತಿಯಿಂದ ಇಂದಿನಿಂದ ಅರಮನೆಯ ಬಳಿಯ ಕರ್ಜನ್ ಪಾರ್ಕ್ ಆವರಣದಲ್ಲಿ ಮಾವು ಹಾಗೂ ಹಲಸು ಮೇಳ ಆರಂಭಿಸಲಾಗಿದೆ.
ಬಾದಾಮಿ, ರಸಪೂರಿ, ಸಿಂಧೂರ, ಮಲಗೋವ, ಮಲ್ಲಿಕಾ, ನೀಲಂ, ಬಂಗನಪಲ್ಲಿ, ಬೆನಿಷಾ, ಕೇಸರ್, ಐಶ್ವರ್ಯ, ಸಕ್ಕರ ಬುತ್ತಿ ಹಾಗೂ ಸಕ್ಕರೆ ಗೂಟ್ಲಾ, ಸೀಬಾ ಸೇರಿದಂತೆ 15ಕ್ಕೂ ಹೆಚ್ಚು ತಳಿಯ ಹಳ್ಳಿಗಳು ಮೇಳದಲ್ಲಿ ಗ್ರಾಹಕರನ್ನ ಕೈಬಿಸಿ ಕರೆಯುತ್ತಿವೆ.
ಒಂದೇ ಸೂರಿನಡಿ ತರಹೇವಾರಿ ಮಾವನ್ನು ಖರೀದಿಸಲು ಗ್ರಾಹಕರು ಸಹ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಪ್ರವಾಸಿಗರು ಕೂಡಾ ಮೇಳದತ್ತ ಆಕರ್ಷಿತರಾಗುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.
ಅಂದಹಾಗೆ ಮಾವು ಬೆಳೆಯಲ್ಲಿ ವಿಶ್ವದಲ್ಲಿಯೇ ಭಾರತ ದ್ವಿತೀಯ ಸ್ಥಾನದಲ್ಲಿದ್ದು, ಭಾರತದಲ್ಲಿ ಸುಮಾರು 4 ಸಾವಿರ ವರ್ಷಗಳಿಂದಲೂ ಮಾವು ಬೆಳೆಯಲಾಗುತ್ತಿದೆ. ಇನ್ನು ನೂರೈವತ್ತಕ್ಕೂ ಹೆಚ್ಚು ತಳಿಯ ಹಣ್ಣುಗಳಿಗೆ ತವರೂರಾಗಿದೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲೆಗಳ ಮಾವು ತಳಿಗಳ ಜೊತೆಯಲ್ಲಿ ಬೇರೆ ರಾಜ್ಯದ ಮಾವುಗಳನ್ನು ಕೂಡ ಈ ಮೇಳದಲ್ಲಿ ಕಾಣಬಹುದಾಗಿದೆ. ಸೀಜನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರ ಮೂಲಕ ಮಾವು ಬೆಳಗಾರರಿಗೆ ನೆರವಾಗಬೇಕು ಎಂದು ಹೇಳಿದರು.
ನಿಪಾಹ್ ವೈರಸ್ ಬಗ್ಗೆ ಎಲ್ಲ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅತಂಕವಿಲ್ಲದೆ ಜನತೆ ಮಾವು ಸೇವನೆ ಮಾಡಬಹುದಾಗಿದೆ. ಕೃತಕವಾಗಿ ಮಾವುಗಳನ್ನು ಮಾಗಿಸದೆ ಮಾವುಗಳನ್ನು ನೈಸರ್ಗಿಕವಾಗಿ ಮಾಗಿಸಲಾಗಿದ್ದು ಕೃತಕವಾಗಿ ಮಾಗಿಸಿ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ನಿಪಾಹ್ ವೈರಸ್ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಮಾವಿನ ಹಣ್ಣಿನ ಜೊತೆ -ಜೊತೆಗೆ ಮೂಗಿಗೆ ಘಮ್ಮೆನಿಸುವ ಹಲಸು ಹಾಗೂ ಅದರಿಂದ ತಯಾರಿಸಲ್ಪಡುವ ಹಪ್ಪಳ, ಚಿಪ್ಸ್ ಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿತ್ತು.