ದಸರಾ ಆನೆ ಮಾವುತ, ಕಾವಾಡಿಗರ ಆರೋಗ್ಯ ತಪಾಸಣೆ
ಮೈಸೂರು, ಸೆಪ್ಟೆಂಬರ್ 6: ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಮಾವುತ, ಕಾವಾಡಿ ಮತ್ತು ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಮೈಸೂರು ಕನ್ನಡ ವೇದಿಕೆ ಮತ್ತು ಜೀವನ್ ಧಾರಣ ಟ್ರಸ್ಟ್ ವತಿಯಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಮಾವುತರು, ಕಾವಾಡಿಗಳು ಹಾಗೂ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು. ಯಾವುದಾದರೂ ಕಾಯಿಲೆಗಳಿವೆಯೇ ಎಂಬುದನ್ನೂ ಪರೀಕ್ಷಿಸಲಾಯಿತು.[ಕವಿ ಚನ್ನವೀರ ಕಣವಿರವರಿಗೆ ಮೈಸೂರು ದಸರಾಗೆ ಆಹ್ವಾನ]

ಪ್ರತಿ ವರ್ಷವೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಆನೆ ಮಾವುತರು ಹಾಗೂ ಕಾವಾಡಿಗಳು ತಮ್ಮ ಆರೋಗ್ಯಕ್ಕಿಂತ ಹೆಚ್ಚಾಗಿ ಆನೆಗಳ ಯೋಗಕ್ಷೇಮದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಾರೆ. ಇದರಿಂದ ಅವರ ಆರೋಗ್ಯ ಹದಗೆಡುವುದಲ್ಲದೆ, ತಮ್ಮ ಮಕ್ಕಳನ್ನೂ ರೋಗಿಗಳನ್ನಾಗಿ ಮಾಡುತ್ತಾರೆ ಎಂದರು.
ಸದಾ ಕಾಡಿನಲ್ಲಿರುವ ಅವರು ನಗರಕ್ಕೆ ಬಂದಾಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದನ್ನು ಮನಗಂಡು ಅವರ ಆರೋಗ್ಯ ತಪಾಸಣೆ ನಡೆಸಲಾಗುದೆ ಎಂದು ಹೇಳಿದರು. ಐದಾರು ವರ್ಷಗಳಿಂದ ಮಾವುತರಿಗಾಗಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಅವರು ಕಾಡಿಗೆ ಮರಳಿದ ಬಳಿಕವೂ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು.[ಏನು ತಿಂತೀರಿ, ಎಷ್ಟು ತಿಂತೀರಿ, ದಸರಾ ಆಹಾರ ಮೇಳಕ್ಕೆ ಬನ್ರೀ..]
ಬೃಂದಾವನ ಆಸ್ಪತ್ರೆಯ ವೈದ್ಯ ಮನು ಅವರು ಕಾವಾಡಿ ಹಾಗೂ ಮಾವುತರಿಗೆ ಬಿಪಿ, ಮಧುಮೇಹ ಮತ್ತಿತರ ಸಾಮಾನ್ಯ ತಪಾಸಣೆ ಮಾಡಿದರು, ಮಾವುತರಾದ ವಸಂತ, ಅಂಬಾರಿ ಹೊರುವ ಆನೆಯ ಮಾವುತ ಸಣ್ಣಪ್ಪ ಹಾಗೂ ಮಕ್ಕಳಿಗೆ ತಪಾಸಣೆ ಮಾಡಿ, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ. ರಾಜು ಅವರು ಮಕ್ಕಳಿಗೆ ಸಿಹಿ ಹಂಚಿದರು. ಸಾಮಾಜಿಕ ನ್ಯಾಯಸ್ಥಾಯಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಮಾಯಕಾರ ಗುರುಕುಲ ಸಂಸ್ಥಾಪಕ ಮೂಗೂರು ಮಧುದೀಕ್ಷಿತ್ ಗುರೂಜಿ, ಬೃಂದಾವನ ಆಸ್ಪತ್ರೆಯ ವೈದ್ಯೆ ಗೀತಾ, ವಕೀಲ ಆರ್.ಡಿ.ಕುಮಾರ್, ಜೀವನ್ ಧಾರಣ ಟ್ರಸ್ಟ್ ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷ ಡಾ.ಮಂಜುನಾಥ್ ತಪಾಸಣಾ ವೇಳೆ ಇದ್ದರು.











Click it and Unblock the Notifications