ಇನ್ನೂ ನಡೆದಿಲ್ಲ ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯ ಸಂಸ್ಕಾರ
ಮೈಸೂರು, ಫೆಬ್ರವರಿ 20 : ಭಾನುವಾರ (ಫೆ.18) ನಿಧನ ಹೊಂದಿದ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ಗುರುವಾರ(ಫೆ.22) ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಒಕ್ಕಲಿಗರ ಸಂಪ್ರದಾಯದಂತೆ ಗುರುವಾರ ಮಧ್ಯಾಹ್ನದ ವೇಳೆಗೆ ಕ್ಯಾತನಹಳ್ಳಿಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ನಿರ್ಧರಿಸಿದೆ. ಅವರ ಇರ್ವರು ಪುತ್ರಿಯರು ವಿದೇಶದಲ್ಲಿ ನೆಲೆಸಿರುವ ಕಾರಣ, ಅವರು ಬರುವವರೆಗೂ ಕೊನೆಯ ವಿಧಿವಿಧಾನಗಳನ್ನು ನೆರವೇರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾಗಿ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
In Pics : ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಸ್ಮಿತಾ, ಅಕ್ಷತಾ ಕೆನಡಾ ಹಾಗೂ ಸೋದರಿ ರೇಣುಕಾ ಅಮೇರಿಕಾದಲ್ಲಿರುವ ಕಾರಣ ಅವರೆಲ್ಲರೂ ಬುಧವಾರ ಆಗಮಿಸುವ ನಿರೀಕ್ಷೆ ಇದೆ. ಅಂತ್ಯಕ್ರಿಯೆ ಹಿನ್ನೆಲೆ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಯೇ ಸಂರಕ್ಷಣೆ ಮಾಡಲಾಗುತ್ತಿದೆ. ಪಾರ್ಥಿವ ಶರೀರ ಮೈಸೂರಿಗೆ ರವಾನೆಯಾದ್ದರಿಂದ ಅಂತಿಮದರ್ಶನಕ್ಕೆ ಆಗಮಿಸಿದ್ದ ಪುಟ್ಟಣ್ಣಯ್ಯ ಅವರ ಅಭಿಮಾನಿಗಳಿಗೆ ದರ್ಶನ ಸಿಗದೆ ನಿರಾಸೆಯಾಗಿದೆ.
ಇದಕ್ಕೆ ಅಭಿಮಾನಿಗಳ ಬಳಿ ಕ್ಷಮೆಕೋರಿರುವ ಶಾಸಕ ಪುಟ್ಟಣ್ಣಯ್ಯ ಕುಟುಂಬಸ್ಥರು ಗುರುವಾರದಂದು ಎಲ್ಲರಿಗೂ ಅಂತಿಮದರ್ಶನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಪಾಂಡವರಪುರದ ಕಾತ್ಯನಹಳ್ಳಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನವನ್ನು ನಿನ್ನೆ(ಫೆ.19) ಮಧ್ಯಾಹ್ನ 1 ಗಂಟೆಯ ವೇಳೆಗೂ ದರ್ಶನಕ್ಕೆ ಇಡಲಾಗಿತ್ತು.