ಕಡೆ ಆಷಾಢ ಶುಕ್ರವಾರ: ಬೆಟ್ಟದ ತಾಯಿ ಚಾಮುಂಡಿಗೆ ವಿಶೇಷ ಪೂಜೆ
ಮೈಸೂರು, ಜುಲೈ 26: ಆಷಾಢ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ನಾಡ ಅಧಿದೇವತೆ ಬೆಟ್ಟದ ತಾಯಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು. ಗರ್ಭಗುಡಿಯಿಂದ ಮಹಾದ್ವಾರದವರೆಗೆ ಹಾಗೂ ದೇವಸ್ಥಾನದ ಆವರಣವನ್ನು ಹತ್ತಾರು ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.
ಬೆಳಗಿನ ಜಾವದಿಂದಲೇ ಗಣ್ಯರು, ಸಾರ್ವಜನಿಕರು ಬಂದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಬೆಳಗಿನ ಜಾವ 3.30ರಿಂದ ಸಹಸ್ರನಾಮ ಅರ್ಚಣೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಆರತಿ ನಡೆಯಿತು. 5.30ಕ್ಕೆ ಅಲಂಕಾರ, ಮಹಾಪೂಜೆ ಬಳಿಕ ದೇವಿಯ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಯಿತು. 9.30ಕ್ಕೆ ಮಹಾಮಂಗಳಾರತಿ ನಡೆಯಿತು. ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಕ್ತರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಅಶ್ವಾರೋಹಿ ದಳವನ್ನು ನಿಯೋಜಿಸಲಾಗಿತ್ತು. ಜನದಟ್ಟಣೆ ನಿಯಂತ್ರಿಸಲು ಹಾಗೂ ವಾಹನಗಳಿಂದಾಗುವ ಅಡಚಣೆ ತಪ್ಪಿಸಲು ಆಷಾಢದ ಪ್ರತಿ ಶುಕ್ರವಾರದಂತೆ ಖಾಸಗಿ ವಾಹನಗಳ ನಿಲುಗಡೆಗೆ ಹೆಲಿಪ್ಯಾಡ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿಂದ ಬೆಟ್ಟದಲ್ಲಿರುವ ಬಸ್ ನಿಲ್ದಾಣದವರೆಗೂ ಸಾಗಲು ಉಚಿತವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಚಾಮುಂಡಿ ದರ್ಶನ ಪಡೆಯಲು ಡಿ.ಸಿ. ತಮ್ಮಣ್ಣ ಆಗಮಿಸಿದ್ದರು.












Click it and Unblock the Notifications