ಟಿಕೆಟ್ ಇಲ್ಲದ ಪ್ರಯಾಣ, ಕಂಡಕ್ಟರ್ ಆತ್ಮಹತ್ಯೆ

ಬಸ್ಸಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಕಂಡಕ್ಟರ್ ಮಂಜೇಗೌಡ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಹಿಡಿದ ಅಧಿಕಾರಿಗಳು ಅವರಿಗೆ ದಂಡ ವಿಧಿಸಿ, ಮಂಜೇಗೌಡ ಅವರ ವಿರುದ್ಧ ದೂರು ದಾಖಲಿಸಿದ್ದರು. ಇದರಿಂದ ಮನನೊಂದ ಮಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಏನು : ಮಂಜೇಗೌಡ ಶನಿವಾರ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು ಕೆಲಸ ಮಾಡುತ್ತಿದ್ದ ಬಸ್ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ಮೇಟಿಕೊಪ್ಪೆ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಬಸ್ ಜಿ.ಎಂ.ಹಳ್ಳಿ ಬಳಿ ಬಂದಾದ ಅದಕ್ಕೆ ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳು ಹತ್ತಿದ್ದಾರೆ. ಈ ಸಂರ್ಭದಲ್ಲಿ ನಾಲ್ವರು ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ವಿಷಯ ತಪಾಸಣೆ ಬಳಿಕ ಬೆಳಕಿಗೆ ಬಂದಿದೆ.
ನಾಲ್ವರು ಪ್ರಯಾಣಿಕರಿಗೆ ದಂಡ ವಿಧಿಸಿದ ಅಧಿಕಾರಿಗಳು, ಬಸ್ ಕಂಡಕ್ಟರ್ ಮಂಜೇಗೌಡ ವಿರುದ್ಧ ಕರ್ತವ್ಯ ಲೋಪದಡಿ ದೂರು ದಾಖಲಿಸಿದ್ದಾರೆ. ಇದರಿಂದ ಮನನೊಂದ ಮಂಜೇಗೌಡ ಎಚ್.ಡಿ.ಕೋಟೆ ಡಿಪೋದಲ್ಲಿ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜೇಗೌಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಟಿಕೆಟ್ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಇದು ನನ್ನ ತಪ್ಪಲ್ಲ, ಕಣ್ ತಪ್ಪಿನಿಂದ ಇಂತಹ ಪ್ರಮಾದವಾಗಿದೆ ಎಂದು ಮಂಜೇಗೌಡ ವಿವರಣೆ ನೀಡಿದ್ದಾರೆ. ಹಾಗೆಯೇ ಎಚ್.ಡಿ.ಕೋಟೆ ಡಿಪೋ ಮ್ಯಾನೇಜರ್ ಗೆ ಸಹ ವಿವರಣೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ದೂರು ದಾಖಲಿಸಿದ್ದರಿಂದ ಮನನೊಂದು ಮಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಕ್ಕಡಗಾತ್ರಿ ಮೂಲದ ಮಂಜೇಗೌಡ ಸುಮಾರು ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸಕ್ಕೆ ಹಾಜರಾದ ಕೆಲವೇ ತಿಂಗಳಿನಲ್ಲಿ ಆವರು ಅಧಿಕಾರಿಗಳ ಕಿರುಕುಳದಿಂದ ಸಾವನ್ನಪ್ಪಿದ್ದಾರೆ. ಎಚ್.ಡಿ.ಕೋಟೆ ಡಿಪೋದಲ್ಲಿ ಮಂಜೇಗೌಡ ಸಾವನ್ನಪ್ಪಿರುವ ಸುದ್ದಿ ತಿಳಿದ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications