KSET ಪರೀಕ್ಷೆಯಲ್ಲಿ ಅವ್ಯವಹಾರ: ತನಿಖೆಗೆ ಸಮಿತಿ ರಚಿಸಿದ ಸರ್ಕಾರ
ಮೈಸೂರು, ಡಿಸೆಂಬರ್ 26: ಕೆ-ಸೆಟ್ (ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರಕಾರ ಸಮಿತಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಲು ಸೂಚಿಸಿದೆ.
2019 ರಿಂದ 2021 ರವರೆಗೆ ಮೈಸೂರು ವಿವಿ ನಡೆಸಿದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಸ್ನೇಹಲ್ ಸುಧಾಕರ ಲೋಖಂಡೆ, ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ ಭಟ್ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಸಂಸದ ಪ್ರತಾಪ್ಸಿಂಹ ಅವರು, 'ಕೆ-ಸೆಟ್ ಪರೀಕ್ಷೆಯಲ್ಲಿ ಅಕ್ರಮವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ' ಪತ್ರ ಬರೆದು ಮನವಿ ಮಾಡಿದ್ದರು.
KEA ಮೂಲಕ KSET ಪರೀಕ್ಷೆ: ಪ್ರತಾಪ್ ಸಿಂಹ ಮನವಿಗೆ ಸ್ಪಂದಿಸಿದ ಸಚಿವ ಅಶ್ವತ್ಥ್ ನಾರಾಯಣ್
ಈ ಸಮಿತಿಯು 2019 ರಿಂದ 2021ರ ಅವಧಿಯಲ್ಲಿನ ಕೆ-ಸೆಟ್ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ದೂರುಗಳು ಮತ್ತು ಪತ್ರಗಳು, ಪ್ರಕಟವಾದ ಆರೋಪಗಳನ್ನು ಪರಿಶೀಲಿಸಲಿದೆ. ಈ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಂಯೋಜನಾಧಿಕಾರಿಯಿಂದ ಯುಜಿಸಿ ನಿಯಮಾವಳಿ ಹಾಗೂ ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಇನ್ನಿತರ ಅಕ್ರಮಗಳ ಕುರಿತ ಆರೋಪಗಳ ಬಗ್ಗೆ ವಿಚಾರಣೆ ನಡೆಸಬೇಕು. ಇದಲ್ಲದೇ ವಿವಿಯ ಇತರ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ವರದಿಯನ್ನು ನೀಡಲು ಸಮಿತಿಗೆ ಸೂಚಿಸಲಾಗಿದೆ.
ಸಂಸದ ಪ್ರತಾಪ್ಸಿಂಹ 'ಪರೀಕ್ಷೆ ನಡೆಸುವ ಸ್ಟೀರಿಂಗ್ ಸಮಿತಿ ಅಧ್ಯಕ್ಷ ಕುಲಪತಿ, ಪರೀಕ್ಷೆಯ ಸಂಯೋಜನಾಧಿಕಾರಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಾತ್ರವಲ್ಲದೇ ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿ ಪರೀಕ್ಷೆ ನಡೆಸಿದ್ದಾರೆ' ಎಂದು ದೂರು ನೀಡಿದ್ದರು.'ಇದಲ್ಲದೇ 2018 ರಲ್ಲಿ ಮೈಸೂರು ವಿವಿ ಕೆ-ಸೆಟ್ ಪರೀಕ್ಷೆ ನಡೆಸುವಾಗ ವಿಶೇಷ ಸಮಿತಿಯ ಮೂಲಕ ಪರೀಕ್ಷೆ ಮತ್ತು ವೌಲ್ಯಮಾಪನದ ಪ್ರತೀ ಹಂತವನ್ನು ಗಮನಿಸಲು ಕ್ರಮವಹಿಸಲಾಗಿತ್ತು. ಆದರೆ, 2020 ರಲ್ಲಿ ಈ ವ್ಯವಸ್ಥೆಯನ್ನು ಮಾಡಿಲ್ಲ. ಇದಲ್ಲದೇ ಪರೀಕ್ಷೆಯ ಒಎಂಆರ್ ಶೀಟ್ಗಳನ್ನು ಒಂದು ವರ್ಷ ಇರಿಸಿಕೊಳ್ಳುವ ಬದಲಿಗೆ ಮೂರೇ ತಿಂಗಳಿಗೆ ನಾಶ ಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇವೆಲ್ಲವೂ ನಿಯಮ ಬಾಹಿರವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಮನವಿ ಮಾಡಿದ್ದರು.
9,000 ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿಲ್ಲ: KEAಸ್ಪಷ್ಟನೆ
ನಂತರ ಮೈಸೂರು ವಿವಿ ಕುಲಪತಿಗೆ ಪತ್ರ ಬರೆದು ದೂರಿನ ಬಗ್ಗೆ ವರದಿ ಕೇಳಲಾಯಿತು. ಅದರಂತೆ ಕುಲಪತಿ ಹಾಗೂ ಪರೀಕ್ಷೆ ಸಂಯೋಜನಾಧಿಕಾರಿಗಳು ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ ಅದಕ್ಕೆ ಪೂರಕ ಮಾಹಿತಿಗಳು, ಸಾಕ್ಷ್ಯಾಧಾರಗಳು ಹಾಗೂ ಇನ್ನಿತರ ವಿವರಗಳು ಇರಲಿಲ್ಲ. ಹೀಗಾಗಿ ಸರಕಾರ ಸೂಕ್ತ ತನಿಖೆ ನಡೆಸಲು ಪ್ರತ್ಯೇಕ ಸಮಿತಿಯನ್ನು ರಚಿಸಿದೆ.