ಮೈಸೂರು ಆಯ್ತು, ಈಗ ಕೊಡಗಿನಲ್ಲೂ ಮೈತ್ರಿ ನಾಯಕರಲ್ಲಿ ಅಸಮಾಧಾನದ ಹೊಗೆ
ಮೈಸೂರು, ಏಪ್ರಿಲ್ 10:ಮಿತ್ರಪಕ್ಷದ ಅಸಹಕಾರ ಚಳವಳಿ ಮೈಸೂರಿನಲ್ಲಿ ಮಾತ್ರವಲ್ಲದೇ, ಕೊಡಗಿನಲ್ಲಿಯೂ ಕಂಡುಬಂದಿರುವುದು ನುಂಗಲಾರ ಬಿಸಿ ತುಪ್ಪದಂತಿದೆ.
ಮೈಸೂರು - ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಹಿಡಿತ ಸಾಧಿಸಿರುವ ಜಿ.ಟಿ.ದೇವೇಗೌಡರು ಮಂಡ್ಯದತ್ತ ಚಿತ್ತ ಹರಿಸಿದ್ದು, ಸಿದ್ದರಾಮಯ್ಯ ಅವರ ಮೇಲಿನ ಸಿಟ್ಟಿನಿಂದಾಗಿ. ಹಾಗಾಗಿ ಮೈಸೂರಿನಲ್ಲಿ ಇನ್ನು ಪ್ರಚಾರದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿಗೆ ಬಹಿರಂಗ ಆಕ್ಷೇಪವನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಲೋಕ ಚುನಾವಣೆ: ಮೈಸೂರು - ಕೊಡಗು ಕ್ಷೇತ್ರದಿಂದ 22 ಮಂದಿ ಕಣಕ್ಕೆ
ಮತ್ತೊಂದೆಡೆ ಸಿದ್ದರಾಮಯ್ಯ ಅವರ ಸೂಚನೆಯಂತೆ ಕೊಡಗು ಜಿಲ್ಲೆಯತ್ತ ಕೈ ನಾಯಕರು ವಿಶೇಷ ಗಮನಹರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಬಿಜೆಪಿ ಜಯ ಗಳಿಸಿತ್ತು.
ಈ ಬಾರಿ ಇದನ್ನು ತಪ್ಪಿಸಲು ವಿಭಿನ್ನ ತಂತ್ರಗಾರಿಕೆಯನ್ನು ರೂಪಿಸುವಂತೆ ಅಲ್ಲಿನ ಮುಖಂಡರಿಗೆ ಸೂಚನೆ ನೀಡಲಾಗಿದೆಯಾದರೂ ಅಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಬೇಗುದಿ ಸದ್ಯಕ್ಕೆ ಪರಿಹಾರ ಕಾಣದ ಸ್ಥಿತಿಯಲ್ಲಿರುವುದು ಹಲವರಿಗೆ ಚಿಂತೆಗೀಡು ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನು ಕೊಡಗಿನಲ್ಲಿ ದಳ ನಾಲ್ಕು ವಿಭಾಗವಾಗಿದೆ. ಮೈಸೂರು ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಜಾ.ದಳದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ನಿರುತ್ಸಾಹ ಹೊಂದಿದ್ದಾರೆ. ಹಲವು ಮಂದಿ ಕಾರ್ಯಕರ್ತರು ಪ್ರಚಾರದಿಂದ ದೂರ ಉಳಿದಿದ್ದಾರೆ. ದಳದ ಪ್ರಭಾವ ಇರುವ ಪ್ರದೇಶಗಳಲ್ಲೂ ಚುನಾವಣಾ ಕಾವು ಏರುತ್ತಿಲ್ಲ.
ಮಂಜಿನ ನಾಡು ಕೊಡಗಿನಲ್ಲಿ ಪ್ರಚಾರದ ಭರಾಟೆ ಬಿರುಸು
ಮೈಸೂರಿನಲ್ಲಿ ಇರುವ ಅಸಹಕಾರವನ್ನು ದೂರ ಮಾಡಲು ಕೈ ನಾಯಕರು ಪರದಾಡುತ್ತಿರುವಾಗ ಕೊಡಗಿನಲ್ಲೂ ದಳ ಹೋಳಾಗಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾದರೆ ಮುಂದೇನಾಗಬಹುದು? ಮುಂದೆ ಓದಿ...
ಇದು ಮೂಲ ಜೆಡಿಎಸ್ ನಾಯಕರ ಕಣ್ಣು ಕೆಂಪಾಗಿಸಿದೆ
ಚುನಾವಣಾ ಕಾಲದಲ್ಲಿಯೇ ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಗಣೇಶ್ ಅವರನ್ನು ನೇಮಿಸಲಾಗಿದೆ. ಇವರು ಮೂಲತಃ ಕಾಂಗ್ರೆಸ್ ನವರು. ವಿಶ್ವನಾಥ್ ಅವರ ಬೆಂಬಲಿಗರಾಗಿ ಜೆಡಿಎಸ್ ಸೇರ್ಪಡೆಗೊಂಡು ಅದರ ಫಲವಾಗಿ ಜಿಲ್ಲಾಧ್ಯಕ್ಷ ಹುದ್ದೆ ಪಡೆದಿದ್ದಾರೆ. ಇದು ಮೂಲ ಜನತಾದಳದ ನಾಯಕರ ಕಣ್ಣು ಕೆಂಪಾಗಿಸಿದೆ.
ಇವರ ಕೂಗನ್ನು ಕೇಳಿಸಿಕೊಳ್ಳುವವರೇ ಇಲ್ಲ
ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಗಣೇಶ್ ಅವರನ್ನು ನೇಮಿಸಿದ್ದಕ್ಕೆ ಮಾಜಿ ಸಚಿವ ಜೀ ವಿಜಯ ಅವರು ಮುನಿಸಿಕೊಂಡಿದ್ದು, ರಾಜೀನಾಮೆ ನೀಡಲು ಸಹ ಮುಂದಾಗಿದ್ದರು. ಗಣೇಶ್ ಅವರನ್ನು ಬದಲಾಯಿಸುವಂತೆ ಪಟ್ಟು ಹಿಡಿದಿದ್ದರು. ಆದರೆ ಪಕ್ಷ ಕ್ಷೇತ್ರದಲ್ಲಿ ಅಧಿಕೃತವಾಗಿ ಸ್ಪರ್ಧಿಸದ ಹಿನ್ನೆಲೆಯಲ್ಲಿ ಹಾಗೂ ನಾಯಕರು ಪ್ರಚಾರದಲ್ಲಿ ಮುಳುಗಿರುವ ಕಾರಣ ಇವರ ಕೂಗನ್ನು ಕೇಳಿಸಿಕೊಳ್ಳುವವರೇ ಇಲ್ಲ.
ಜೆಡಿಎಸ್ ತೊರೆಯಲಿದ್ದಾರೆ ಮಾಜಿ ಸಚಿವ ಬಿ.ಎ.ಜೀವಿಜಯ?
ಚುನಾವಣಾ ಹುರುಪು ಅಷ್ಟಾಗಿ ಕಂಡು ಬರುತ್ತಿಲ್ಲ
ಇನ್ನು ಮೂಲ ತಳದಲ್ಲಿ ತಟಸ್ಥವಾಗಿರುವ ಮತ್ತೊಂದು ಗುಂಪು ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಅವರ ಇನ್ನೊಂದು ಬಣ ಎಷ್ಟು ಬೇಕೋ ಅಷ್ಟರಲಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿರುವ ಕಾಂಗ್ರೆಸ್ ಹಾಗೂ ದಳದ ಕಾರ್ಯಕರ್ತರಲ್ಲಿ ಚುನಾವಣಾ ಹುರುಪು ಅಷ್ಟಾಗಿ ಕಂಡು ಬರುತ್ತಿಲ್ಲ.
ಈ ಸ್ಥಿತಿಯನ್ನು ಕಂಡು ಚಿಂತೆಗೀಡಾಗಿದ ಕೈ ಪಡೆ
ಇನ್ನು ಕೊಡಗು ಜಿಲ್ಲೆಯಲ್ಲಿ ಚುನಾವಣೆಯ ಸದ್ದು ಕೇಳಿಸುತ್ತಿಲ್ಲ. ಬಿಜೆಪಿ ಒಂದೆರಡು ಸುತ್ತಿನ ಪ್ರಚಾರ ಮುಗಿಸಿದೆ. ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಹಲವು ಕಡೆಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಒಂದಿಬ್ಬರನ್ನು ಹೊರತುಪಡಿಸಿ ಯಾರೂ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಒಂದೆರಡು ಕಡೆ ಪ್ರಚಾರ ಕಚೇರಿಯನ್ನು ತೆಗೆದರೂ ಅಂತಹ ಚಟುವಟಿಕೆಯಿಂದ ಕೂಡಿಲ್ಲ. ಹೀಗಾಗಿ ಮೈಸೂರಿನಲ್ಲಿ ಸಮನ್ವಯ ಸಾಧಿಸುವುದೇ ತಲೆನೋವಾಗಿರುವ ಸಮಯದಲ್ಲಿ ಕೊಡಗಿನಲ್ಲಿ ಈ ಸ್ಥಿತಿಯನ್ನು ಕಂಡು ಕೈ ಪಡೆ ಚಿಂತೆಗೀಡಾಗಿದೆ.