ಮೈಸೂರಿನಲ್ಲಿ ನಡೆಯುತ್ತಾ ಮಾಯಾವತಿ ಮ್ಯಾಜಿಕ್?
ಮೈಸೂರು, ಏಪ್ರಿಲ್ 26: ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ ಪಿ ನಾಯಕಿ ಮಾಯಾವತಿ ಮ್ಯಾಜಿಕ್ ಮಾಡುತ್ತಾರಾ? ಬಿಎಸ್ ಪಿ(ಬಹುಜನ ಸಮಾಜವಾದಿ ಪಕ್ಷ) ಈಗಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಮಾಯಾವತಿ ನಿರ್ಧಾರ ಕಾಂಗ್ರೆಸ್ ಗೆ ರುಚಿಸದು ಎಂಬುದು ಗೊತ್ತಿದ್ದರೂ ಇವಕ್ಕೆಲ್ಲ ಕ್ಯಾರೇ ಎನ್ನದ ಮಾಯಾವತಿ ಜೆಡಿಎಸ್ ಜೊತೆ ಕೈಜೋಡಿಸಿ, ಪ್ರಚಾರಕ್ಕೂ ಆಗಮಿಸಿದ್ದಾರೆ.
ನಿನ್ನೆ(ಏ.25) ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ನಿರೀಕ್ಷಿಸಿದಷ್ಟು ಜನರು ಆಗಮಿಸದಿದ್ದುದು ಉಭಯ ಪಕ್ಷದ ನಾಯಕರಿಗೂ ಇರಿಸುಮುರಿಸುಂಟು ಮಾಡಿತ್ತು!

ಮಾಯಾವತಿ ಕುರಿತು ಹಬ್ಬಿದ ವದಂತಿ
ಸಭೆಗೆ ಮಾಯಾವತಿ ಸಮಯಕ್ಕೆ ಸರಿಯಾಗಿ ಆಗಮಿಸದಿದ್ದುದು ಸಹ ಹಲವು ಊಹಾಪೋಹಗಳಿಗೆ ಹಾದಿಮಾಡಿಕೊಟ್ಟಿತ್ತು. ನಿರೀಕ್ಷಿಸಿದಷ್ಟು ಜನ ಸೇರಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಬ್ಬರೂ ತಲೆಕೆಡಿಸಿಕೊಳ್ಳುತ್ತಿದ್ದರೆ, ಇತ್ತ ಇಬ್ಬರು ನಾಯಕರ ಭಾಷಣ ಮುಗಿಯುವವರೆಗೂ ಮಾಯಾವತಿ ಸಭೆಗೆ ಆಗಮಿಸದಿದ್ದುದು ಮತ್ತಷ್ಟು ಅನುಮಾನ ಹುಟ್ಟುಹಾಕಿತ್ತು. ಬಹುಶಃ ಮಾಯಾವತಿ ಕೈಕೊಡುತ್ತಾರೆ ಎಂದುಕೊಂದಿದ್ದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಮಾಯಾವತಿ ಸಭೆಗೆ ತಡವಾಗಿ ಆಗಮಿಸಿದರು.

ಮಾಯಾವತಿಗೆ ಮುನಿಸು?
"ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂಬೆಲ್ಲ ಸುದ್ದಿ ಹಬ್ಬಿದ್ದು ಮಾಯಾವತಿ ಅವರಿಗೂ ನೋವನ್ನುಂಟುಮಾಡಿದೆ. ಆದ್ದರಿಂದ ಅವರು ಜೆಡಿಎಸ್ ಜೊತೆ ಮುನಿಸಿಕೊಂಡಿದ್ದಾರೆ. ಅದಕ್ಕೆಂದೇ ಅವರು ಸಭೆಗೆ ಆಗಮಿಸುತ್ತಿಲ್ಲ" ಎಂದು ಜನರ ನಡುವಲ್ಲಿ ಗುಸುಗುಸು ಎದ್ದಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೂ ಮಾಯಾವತಿ ಆಗಮನ ತೆರೆ ಎಳೆದಿತ್ತು.

ಬಿಜೆಪಿ ಕಾಂಗ್ರೆಸ್ ಮೇಲೆ ಟೀಕೆಯ ಸುರಿಮಳೆ
ಭಾಷಣ ಆರಂಬಿಸಿದ ಮಾಯಾವತಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಟೀಕೆಯ ಮಳೆ ಸುರಿಸಿದರು. "ಬಿಜೆಪಿ ಕಾಂಗ್ರೆಸ್ಸಿಗರು ಯಾವತ್ತಿದ್ದರೂ ದಲಿತ ವಿರೋಧಿಗಳು, ಅವರು ದಲಿತರ ಹಿತಾಸಕ್ತಿಯನ್ನು ಕಾಪಾಡಲು ಎಂದಿಗೂ ಬದ್ಧರಾಗಿಲ್ಲ. ಆದ್ದರಿಂದ ಜೆಡಿಎಸ್- ಬಿಎಸ್ಪಿಗೆ ಮತ ಹಾಕಿ" ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ನಿನ್ನೆ ಅಪರಾಹ್ನ 4 ಗಂಟೆಗೆ ಸಮಾವೇಶ ನಡೆಯಿತು. ಸಮಾವೇಶದ ನಂತರ ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಮತ್ತು ಮಾಯಾವತಿ ಚರ್ಚೆ ನಡೆಸಿದರು.

ಬಿಎಸ್ಪಿಯಿಂದ 20 ಅಭ್ಯರ್ಥಿಗಳು
2008 ಮತ್ತು 2013ರ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಮೈಸೂರಿಗೆ ಆಗಮಿಸಿದ್ದ ಮಾಯಾವತಿ ಇದೀಗ ಮೂರನೇ ಬಾರಿ ಮೈಸೂರಿಗೆ ಆಗಮಿಸಿದ್ದಾರೆ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15 ರಂದು ಹೊರಬೀಳಲಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಎಸ್ ಪಿ ತನ್ನ 20 ಅಭ್ಯರ್ಥಿಗಳನ್ನು ಕರ್ನಾಟಕದಲ್ಲಿ ಕಣಕ್ಕಿಳಿಸಿದೆ.












Click it and Unblock the Notifications