ಪಿರಿಯಾಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಂಚಿಕೆ!
ಮೈಸೂರು, ಮೇ 05: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ.ವೆಂಕಟೇಶ್ ಅವರು ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹಣ ಹಂಚುತ್ತಿರುವ ಚಿತ್ರಗಳು ಎಲ್ಲೆಡೆ ಹರಿದಾಡತೊಡಗಿದೆ.
ಇದನ್ನು ಕ್ಷೇತ್ರದ ಪ್ರತಿಸ್ಪರ್ಧಿಗಳಾದ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್ ಗಂಭೀರವಾಗಿ ಪರಿಗಣಿಸಿದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಾಸಕ ವೆಂಕಟೇಶ್ ಅವರು ಈಗಾಗಲೇ ತಾಲೂಕಿನ ಗೊರಹಳ್ಳಿ ಅಲ್ಪನಾಯ್ಕನ ಹಳ್ಳಿ ಚಪ್ಪರದಹಳ್ಳಿ, ಸೇರಿದಂತೆ ಸುತ್ತ ಮುತ್ತಲ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಮತದಾರರಿಗೆ ಹಣ ಹಂಚುತ್ತಿರುವುದು ಕಂಡು ಬಂದಿದ್ದು, ಹಣ ಕೊಟ್ಟು ಮತ ಪಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮತ್ತು ಶಾಸಕರು ಆಗಿರುವ ಕೆ.ವೆಂಕಟೇಶ್ ತಮ್ಮ ಅಧಿಕಾರ ಮತ್ತು ಅಧಿಕಾರಿಗಳನ್ನು ದುರುಪಯೋಗÀ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಸ್ಪರ್ಧಿಯಾಗಿರುವ ಅಭ್ಯರ್ಥಿಗಳು ಜಿಲ್ಲಾ ಮತ್ತು ತಾಲ್ಲೂಕು ಚುನಾವಣಾ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ಮತ ಯಾಚಿಸುವ ಸಂದರ್ಭದಲ್ಲಿ ಚುನಾವಣಾ ಜಾಗೃತಿ ದಳ ನಿಗಾವಹಿಸುವುದು ನಿಯಮವಾಗಿದೆ. ಆದರೆ ಶಾಸಕ ಕೆ.ವೆಂಕಟೇಶ್ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಅವರು ಮತದಾರರಿಗೆ ನೀಡುತ್ತಿರುವ ಹಣದ ಫೋಟೋಗಳು ಸಾಕ್ಷಿಯಾಗಿದ್ದು, ಚುನಾವಣಾಧಿಕಾರಿಗಳು ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications