Get Updates
Get notified of breaking news, exclusive insights, and must-see stories!

ನರಸಿಂಹರಾಜ: ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಶಾಲಾ –ಕಾಲೇಜುಗಳಿಲ್ಲ!

ಮೈಸೂರು, ಏಪ್ರಿಲ್ 19 : ಶಿಕ್ಷಣ ಸಚಿವರ ಕ್ಷೇತ್ರವೆಂದರೆ ಅಲ್ಲಿ ಶಿಕ್ಷಣಕ್ಕೆ ಒತ್ತು ಕೊಡಬೇಕಾಗಿರುವುದು ಸಾಮಾನ್ಯ. ಆದರೆ ಮೈಸೂರಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ರ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳೇ ಇಲ್ಲ ಎಂಬುದು ನಂಬಲೇಬೇಕಾದ ಸತ್ಯ. ಇಲ್ಲಿನ ವಿದ್ಯಾರ್ಥಿಗಳು ವಿಧಿಯಿಲ್ಲದೇ ಖಾಸಗಿ ಕಾಲೇಜು ಸೇರಬೇಕು ಇಲ್ಲವೇ ಪಕ್ಕದ ಕ್ಷೇತ್ರಗಳಿಗೆ ಹೋಗಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು ನರಸಿಂಹರಾಜ ಕ್ಷೇತ್ರದ ಎದುರಾಗಿರುವ ಬಹುದೊಡ್ಡ ಸಮಸ್ಯೆ ಇದು. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿದ್ದರೂ ಇಲ್ಲಿನ ಜನರಿಗೆ ಪೂರ್ಣಪ್ರಮಾಣದ ಶಿಕ್ಷಣವನ್ನು ನೀಡಲು ಈವರೆಗೂ ಆಳಿರುವ ಶಾಸಕರು ಮನಸು ಮಾಡಿಲ್ಲ. ಅಜೀಜ್ ಸೇಠ್ ಹಾಗೂ ಅವರ ಪುತ್ರ ತನ್ವೀರ್ ಸೇಠ್ ಸತತವಾಗಿ ಇಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಬ್ಬರಿಂದ ಕಾಲೇಜುಗಳನ್ನು ಸ್ಥಾಪಿಸುವ ಗಂಭೀರ ಪ್ರಯತ್ನಗಳೇ ನಡೆಯದಿರುವುದುಇಲ್ಲಿನ ಜನ ಇನ್ನೂ ಅನಕ್ಷರತೆಯಿಂದಲೇ ಬದುಕುವಂತೆ ಆಗಿದೆ ಎನ್ನುವುದು ಇಲ್ಲಿನ ನಿವಾಸಿಗಳ ಆರೋಪ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕ್ಷೇತ್ರದಲ್ಲಿ 90 ಸಾವಿರಕ್ಕೂ ಹೆಚ್ಚು ಮುಸ್ಲಿಮರೇ ಇದ್ದಾರೆ. ಇವರಲ್ಲಿ ಬಹುತೇಕರು ಶಿಕ್ಷಣ ವಂಚಿತರು. ಹೆಚ್ಚಿನವರು ಒಂದಲ್ಲ ಒಂದು ವಾಣಿಜ್ಯೋದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಬಿರಿಯಾನಿ ತಯಾರಿಸುವವರಿಂದ ಹಿಡಿದು, ಬಟ್ಟೆ ಅಂಗಡಿಯ ಬಹುತೇಕ ವರ್ತಕರೆಲ್ಲರೂ ಮುಸ್ಲಿಮರೇ. ಇವರೆಲ್ಲ ತಲೆತಲಾಂತರಗಳಿಂದ ವ್ಯಾಪಾರ ಮಾಡುತ್ತಿದ್ದಾರೆ.

ಶಿಕ್ಷಣಕ್ಕೆ ಕಟ್ಟಡವಿಲ್ಲ!

ಶಿಕ್ಷಣಕ್ಕೆ ಕಟ್ಟಡವಿಲ್ಲ!

ಶಾಲೆಗಳನ್ನು ಪಿಯು ಕಾಲೇಜಾಗಿ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಈಚೆಗೆ ನಡೆದಿದೆ. ಕೆಸರೆ, ಕಲ್ಯಾಣಗಿರಿ, ರಾಜೀವನಗರಗಳಲ್ಲಿ ಹಾಲಿ ಇರುವ ಶಾಲೆಗಳನ್ನೇ ಪಿಯು ಕಾಲೇಜಾಗಿ ಮೇಲ್ದರ್ಜೆಗೆ ಏರಿಸಲು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿರುವ ತನ್ವೀರ್ ಸೇಠ್ ಮುಂದಾಗಿದ್ದಾರೆ. ಪಿಯು ಶಿಕ್ಷಣಕ್ಕಾಗಿ ಇಲ್ಲಿ ಕಟ್ಟಡವಿಲ್ಲ. ಕೆಲವೆಡೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಮಿಕ್ಕಂತೆ ನಿವೇಶನಕ್ಕಾಗಿ ಮುಡಾಗೆ ಅರ್ಜಿ ಹಾಕಲಾಗಿದೆ.

ಆಸ್ಪತ್ರೆಯದ್ದು ಬಹುದೊಡ್ಡ ಸಮಸ್ಯೆ

ಆಸ್ಪತ್ರೆಯದ್ದು ಬಹುದೊಡ್ಡ ಸಮಸ್ಯೆ

ಆಸ್ಪತ್ರೆಗಳು ಇಲ್ಲ ಶಿಕ್ಷಣದ ಜೊತೆಗೆ ಆರೋಗ್ಯವೂ ಇಲ್ಲಿ ಪ್ರಮುಖವಾದ ಸಮಸ್ಯೆ ಹಾಸಿಗೆಗಳಿರುವ ಒಂದೇ ಒಂದು ಆಸ್ಪತ್ರೆಯೂ ಇಲ್ಲಿಲ್ಲ. ವಿಧಿಯಿಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಬೇಕು. ಹೆರಿಗೆ ಆಸ್ಪತ್ರೆಗಳು ಇಲ್ಲದೇ ಮಹಿಳೆಯರು ದುಬಾರಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿದೆ. ಚಾಮರಾಜ ಕ್ಷೇತ್ರಕ್ಕೆ ಬರುವ ವಿವಿ ಪುರಂ ಹಾಗೂ ಕೃಷ್ಣರಾಜ ಕ್ಷೇತ್ರಕ್ಕೆ ಬರುವ ಜಯನಗರದಲ್ಲಿ ಮಾತ್ರ ಸರಕಾರಿ ಆಸ್ಪತ್ರೆಗಳಿವೆ. ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರನ್ನು ದಾಖಲಿಸಿಕೊಳ್ಳಲು ಇವು ಸಜ್ಜಾಗಿವೆ. ಆದರೆ ಇಂಥಹ ಆಸ್ಪತ್ರೆಯೊಂದು ಬೇಕೆಂಬುದು ದಶಕಗಳಿಂದ ನರಸಿಂಹರಾಜ ಕ್ಷೇತ್ರದ ಜನರು ಬೇಡಿಕೊಳ್ಳುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.

ಕಿಷ್ಕಿಂದೆಯಂತಿದೆ ರಸ್ತೆಗಳು

ಕಿಷ್ಕಿಂದೆಯಂತಿದೆ ರಸ್ತೆಗಳು

ಮೂಲ ಸೌಲಭ್ಯಗಳು ಕ್ಷೇತ್ರದಲ್ಲಿ ಅಷ್ಟಕ್ಕಷ್ಟೇ ಇಲ್ಲಿನ ರಸ್ತೆಗಳೆಲ್ಲವೂ ಕಿಷ್ಕಿಂದೆಯಂತಿದೆ. ಒಳ ಚರಂಡಿ ಇಲ್ಲದೆ ಗಲೀಜು ರಸ್ತೆಯಲ್ಲೇ ಹರಿಯುತ್ತಿರುತ್ತದೆ. ಇಲ್ಲಿನ ಸಾಡೇ ರಸ್ತೆಯಲ್ಲಿ ಸಾಕಷ್ಟು ಮಾಂಸಾಹಾರಿ ಹೋಟೆಲ್ ಗಳಿವೆ. ಆದರೆ ಶುಚಿತ್ವ ಇಲ್ಲದೇ ರೋಗಗಳು ಹರಡುವುದಕ್ಕೆ ಇಲ್ಲಿನ ವಾತಾವರಣ ಪೂರಕವಾದಂತಿದೆ. ಇಲ್ಲಿ ಕೊಳೆಗೇರಿಗಳೇ ಹೆಚ್ಚು. ನಗರದಲ್ಲಿ ಅತೀ ಹೆಚ್ಚು ಕೊಳಗೇರಿ ಪ್ರದೇಶಗಳು ಎಲ್ಲಿವೆ ಎಂದು ಕೇಳಿದರೆ, ನರಸಿಂಹರಾಜ ಕ್ಷೇತ್ರದ ಕಡೆಗೆ ಬರಲು ತೋರಿಸುವಂತಿದೆ. ಇಲ್ಲಿ ಹದಿನೈದು ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿವೆ. ಕೊಳೆಗೇರಿಗಳ ಸ್ವರೂಪದಲ್ಲೇ ಇವೆಲ್ಲವೂ ಹೆಚ್ಚಾಗಿ ಕಾಣಸಿಗುತ್ತವೆ.

ಶಾಸಕರು ಏನಂತಾರೆ?

ಶಾಸಕರು ಏನಂತಾರೆ?

ಈ ಕುರಿತಾಗಿ ಶಾಸಕ ತನ್ವೀರ್ ಸೇಠ್ ರನ್ನು ಸಂಪರ್ಕಿಸಿದರೆ, ಅನಧಿಕೃತ ಬಡಾವಣೆಗಳಿಗೆ ಮೂಲ ಸೌಕರ್ಯ ನೀಡುವುದು ನನ್ನ ಮುಂದಿನ ದೊಡ್ಡ ಸವಾಲಾಗಿತ್ತು. ಇಲ್ಲಿ ನೀರು ಹಾಗೂ ಒಳಚರಂಡಿ ಸೌಲಭ್ಯಗಳು ಇರಲಿಲ್ಲ. ಈಗ ಬಹುತೇಕ ಹತೋಟಿಗೆ ಬಂದಿದೆ. ಜೋಡಿ ರಸ್ತೆ ಎಂದರೆ ಮೈಸೂರಿನಲ್ಲಿ ಚಾಮರಾಜ ಜೋಡಿ ರಸ್ತೆ ಎನ್ನುವ ಕಾಲವಿತ್ತು. ಈಗ ನಗರದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆ ಜೋಡಿ ರಸ್ತೆಗಳು ನರಸಿಂಹರಾಜ ಕ್ಷೇತ್ರದಲ್ಲಿವೆ. ನಗರದ ಅತಿ ದೊಡ್ಡ ರಾಜ್ ಕುಮಾರ್ ರಸ್ತೆ ಉದಯಗಿರಿಯಲ್ಲಿದೆ. ಮುಂದಿನ ಸವಾಲುಗಳ ಪೈಕಿ ಗುಡಿಸಲು ಮುಕ್ತ ನಗರ ನಿರ್ಮಾಣಕ್ಕೆ ಸಜ್ಜಾಗಬೇಕಿದೆ. ಇದಕ್ಕಾಗಿ ನಿವೇಶನಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಮುಂದಿನ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ.

ಉಳಿದ ಮುಖಂಡರ ಮಾತು

ಉಳಿದ ಮುಖಂಡರ ಮಾತು

ಇನ್ನು ಬಿಜೆಪಿ ಮುಖಂಡ ಸಂದೇಶ ಸ್ವಾಮಿ ಅವರನ್ನು ಸಂಪರ್ಕಿಸಿದರೆ, ಇಪ್ಪತ್ತು ವರ್ಷ ಶಾಸಕರಾಗಿ ಕೆಲಸ ಮಾಡಿ ಈಗ ಶಿಕ್ಷಣ ಸಚಿವರಾಗಿದ್ದರೂ ಕ್ಷೇತ್ರದಲ್ಲಿ ಶೈಕ್ಷಣಿಕ ಸೌಲಭ್ಯ ನೀಡಲು ತನ್ವೀರ್ ಮನಸ್ಸು ಮಾಡಿಲ್ಲ. ಇಡೀ ರಾಜ್ಯದಲ್ಲಿ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಕ್ಷೇತ್ರ ಇದಾಗಿದೆ. ಶಿಕ್ಷಣ ನೀಡದೇ ವಂಚಿಸಿರುವ ಕಾಂಗ್ರೆಸ್ ನಾಯಕರ ಮೇಲೆ ಇಲ್ಲಿನ ಜನ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನುತ್ತಾರೆ. ಈ ಕುರಿತಾಗಿ ಎಸ್ ಡಿಪಿಐ ಆಕಾಂಕ್ಷಿ ಅಬ್ದುಲ್ ಮಜೀದ್ ಹೇಳಿದ್ದಿಷ್ಟು, ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ಕ್ಷೇತ್ರದ ಜನರನ್ನು ಅಜ್ಞಾನದಲ್ಲಿ ತಾವು ಬೆಳೆಯುವುದನ್ನು ಮಾತ್ರ ನೋಡಿಕೊಂಡಿದ್ದಾರೆ. ಶಿಕ್ಷಣ ಆರೋಗ್ಯ ಉದ್ಯೋಗದಿಂದ ದೂರವಿಡಲಾಗಿದೆ. ಜನರಿಗೆ ಹತ್ತಿರವಾಗಿದ್ದುಕೊಂಡು ಜನಸಂಪರ್ಕ ಸಭೆಗಳನ್ನು ನಡೆಸಬೇಕು. ಅಧಿಕಾರಿಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಶಾಸಕರಾದವರು ನಗರ ಪಾಲಿಕೆ ಸದಸ್ಯರನ್ನು ಒಳಗೊಂಡು ಕ್ಷೇತ್ರವನ್ನು ಬೆಳೆಸಬೇಕು ಎನ್ನುತ್ತಾರೆ. ಒಟ್ಟಾರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಈ ರೀತಿ ಸಮಸ್ಯೆ ಎದುರಾಗಿರುವುದು ವಿಪರ್ಯಾಸವೇ ಸರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+