ಬಾಗಿನ ಅರ್ಪಣೆಗೆ ಸಿಂಗಾರಗೊಳ್ಳುತ್ತಿರುವ ಕಬಿನಿ ಜಲಾಶಯ!
ಮೈಸೂರು, ಆಗಸ್ಟ್ 09: ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯವಾದ ಕಬಿನಿ ಈಗ ಸುಣ್ಣ ಬಣ್ಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಇದು ಬಾಗಿನ ಅರ್ಪಣೆಗೆ ಸಿದ್ಧವಾಗುತ್ತಿರುವುದರ ಸೂಚನೆಯಾಗಿದೆ.
ಕಬಿನಿ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿಗಳು ಆಗಮಿಸಿ ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಖಾತೆ ಹಂಚಿಕೆ ಹೀಗೆ ಹಲವು ರೀತಿಯ ಬೆಳವಣಿಗೆಗಳಿಂದಾಗಿ ಬಾಗಿನ ಅರ್ಪಣೆ ನಡೆದಿಲ್ಲ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಕೆಆರ್ಎಸ್ ಜಲಾಶಯವೂ ಭರ್ತಿಯಾಗದಿರುವುದು ಕೂಡ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಿಎಂ ಸ್ವಾಗತಕ್ಕೆ ಅಣಿಯಾಗುತ್ತಿರುವ ಕಬಿನಿ
ಇದೀಗ ಜಲಾಶಯಕ್ಕೆ ಬಣ್ಣಗಳನ್ನು ಬಳಿದು ಸಿಂಗಾರಗೊಳಿಸಲಾಗುತ್ತಿದ್ದು, ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರನ್ನು ಸ್ವಾಗತಿಸಲು ಸರ್ವ ರೀತಿಯಲ್ಲಿಯೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಯಾವಾಗ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.
ಕೇರಳದ ವೈನಾಡು ಮತ್ತು ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಈ ವೇಳೆ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗಿತ್ತು. ಈಗಲೂ ಹೆಚ್ಚುವರಿ ನೀರು ಬಿಡುವುದನ್ನು ತಡೆದಿದ್ದೇ ಆದರೆ ಬಹುಬೇಗ ಜಲಾಶಯ ಭರ್ತಿಯಾಗುವುದರಲ್ಲಿ ಎರಡು ಮಾತಿಲ್ಲ.
ಕೆಆರ್ಎಸ್ ಭರ್ತಿಗಾಗಿ ಕಾತರ
2284 ಅಡಿಗಳ ಕಬಿನಿ ಜಲಾಶಯದಲ್ಲಿ ಸದ್ಯ 2280 ಅಡಿಗಳಷ್ಟು ನೀರಿನ ಸಂಗ್ರಹವನ್ನಿಟ್ಟುಕೊಂಡು ಉಳಿದ ನೀರನ್ನು ಬಿಡಲಾಗುತ್ತಿದೆ. ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯ ಮತ್ತು ಕಬಿನಿ ಜಲಾಶಯಕ್ಕೆ ಒಂದೇ ದಿನ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಕೆಆರ್ಎಸ್ ಜಲಾಶಯ ಭರ್ತಿಯಾಗಲು ಇನ್ನೊಂದಷ್ಟು ದಿನಗಳು ಕಾಯಬೇಕಾಗಿದೆ. ಕೊಡಗಿನಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಅಬ್ಬರ ಹೆಚ್ಚಾದರೆ ಕೆಆರ್ಎಸ್ ಜಲಾಶಯಕ್ಕೆ ನೀರು ಹರಿದು ಬರಲಿದ್ದು, ಬಹುಬೇಗ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕೆಆರ್ಎಸ್ ಜಲಾಶಯ ಭರ್ತಿಯಾದರೆ ಮಾತ್ರ
ಒಂದು ವೇಳೆ ಕೆಆರ್ಎಸ್ ಜಲಾಶಯ ಭರ್ತಿಯಾದರೆ ಮಾತ್ರ ಕಬಿನಿಗೆ ಬಾಗಿನ ಭಾಗ್ಯ ದೊರೆಯಲಿದೆ. ಯಾವಾಗ ಬಾಗಿನ ಅರ್ಪಣೆ ಎಂಬುದು ಇನ್ನೂ ದೃಢವಾಗಿಲ್ಲದಿದ್ದರೂ, ಕಬಿನಿ ಜಲಾಶಯವನ್ನು ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸನ್ನದ್ಧಗೊಳಿಸುವ ಕಾರ್ಯ ಮಾತ್ರ ಈಗಿನಿಂದಲೇ ಮಾಡಲಾಗುತ್ತಿದೆ. ಈಗಾಗಲೇ ಸುಣ್ಣ ಬಣ್ಣ ಬಳಿದಿರುವುದರಿಂದಾಗಿ ಕಬಿನಿ ಜಲಾಶಯ ಶೃಂಗಾರಗೊಂಡ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಕಬಿನಿ ವೀಕ್ಷಿಸಲಾಗದ ಪ್ರವಾಸಿಗರಿಗೆ ನಿರಾಸೆ
ಯಾವಾಗ ಬೇಕಾದರೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇರುವುದರಿಂದಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಕಾವೇರಿ ನೀರಾವರಿ ನಿಗಮದ ಮೇಲಾಧಿಕಾರಿಗಳ ಆದೇಶದನ್ವಯ ಮಾಡಿಕೊಳ್ಳಲಾಗುತ್ತಿದೆ.
ಮೊದಲೆಲ್ಲ ಜಲಾಶಯ ತುಂಬಿ ತುಳುಕುತ್ತಿರುವ ಸಂದರ್ಭದಲ್ಲಿ ಪ್ರವಾಸಿಗರು ಜಲಾಶಯ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಈ ಬಾರಿಯೂ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕೊರೊನಾ ಸೋಂಕು ಕಾರಣ, ವೀಕೆಂಡ್ ಕರ್ಫ್ಯೂ ಕಾರಣದಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ಅದು ಏನೇ ಇರಲಿ ಸದ್ಯ ಕಬಿನಿ ಜಲಾಶಯ ಸಿಂಗಾರಗೊಂಡು ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವುದಂತು ನಿಜ.
Recommended Video
ಐದು ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ
ಇದೀಗ ಜಲಾಶಯದಿಂದ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಕೈಗೊಂಡಿರುವ ಕ್ರಮದಿಂದ ರೈತರಿಗೆ ಸಹಾಯವಾಗಿದೆ. ಆದರೆ ಭತ್ತದ ಬೆಳೆಗೆ ನೀರು ಹರಿಸುವುದು ವಿಳಂಬವಾಗಿತ್ತು. ಆ ಕಾರಣ ಕಬಿನಿ ನಿರಾಶ್ರಿತ ರೈತರು ಗೊಂದಲಕ್ಕೀಡಾಗಿದ್ದರು. ಈ ನಡುವೆ ಮಳೆಯನ್ನು ನಂಬಿ ಬೆಳೆದ ಜೋಳ ಮಳೆ ಬಾರದೆ ಒಣಗುವಂತಾಗಿದೆ. ಸದ್ಯ ಕೆರೆಗಳಿಗೆ ನೀರು ತುಂಬಿಸುವ ತೀರ್ಮಾನದಿಂದ ರೈತರಿಗೆ ಅನುಕೂಲವಾಗುವುದಂತು ಖಚಿತ. ಸದ್ಯ ಕಬಿನಿ ಜಲಾಶಯದ ನೀರಿನಲ್ಲಿ ಒಂದು ಟಿಎಂಸಿ ನೀರನ್ನು 15 ದಿನಗಳ ಅವಧಿಯಲ್ಲಿ 52 ಕೆರೆಗಳಿಗೆ ತುಂಬಿಸಲು ಹಾಗೂ ಐದು ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.