ಮೈಸೂರು : ಜೆಡಿಎಸ್ಗೆ ಬಂಡಾಯದ ಬಿಸಿ!
ಮೈಸೂರು, ಡಿಸೆಂಬರ್ 03 : ಮೈಸೂರು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಹರೀಶ್ ಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಮೂಲಕ ಚಾಮರಾಜ ಕ್ಷೇತ್ರದಲ್ಲಿನ ಬಂಡಾಯದ ಬಿಸಿ ಅಂತಿಮ ಹಂತಕ್ಕೆ ತಲುಪಿದೆ.
ಎಚ್.ಡಿ.ದೇವೇಗೌಡರು ಕೆ.ಹರೀಶ್ ಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. ಅತ್ತ ಹರೀಶ್ ಗೌಡ ಬೆಂಬಲಿಗರು ಸಭೆ ಕರೆದಿದ್ದು, ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಜೋರಾಗಿದೆ.

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 'ಕುಮಾರಪರ್ವ ಸಮಾವೇಶ' ನಡೆದಾಗ, ಕ್ಷೇತ್ರದ ಮುಂದಿನ ಚುನಾವಣೆ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಬಂಡಾಯ ಆರಂಭವಾಗಿದೆ.
ಕೆ.ಹರೀಶ್ ಗೌಡ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪ್ರೊ.ಕೆ.ಎಸ್.ರಂಗಪ್ಪ ಹೆಸರು ಘೋಷಣೆ ಮಾಡುತ್ತಿದ್ದಂತೆ ಹರೀಶ್ ಗೌಡ ಬೆಂಬಲಿಗರು ಸಭೆ ನಡೆಸಿ, ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಈ ಬೆಳವಣಿಗೆ ನಡೆದ ಬಳಿಕ ಶನಿವಾರ ದೇವೇಗೌಡರು ಕೆ.ಹರೀಶ್ ಗೌಡ ಅವರನ್ನು ಮೈಸೂರು ನಗರ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. ಇದರಿಂದ ಹರೀಶ್ ಗೌಡ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಇಂದು ಸಂಜೆ 6 ಗಂಟೆಗೆ ಮೇಟಗಳ್ಳಿ ಬಸ್ ನಿಲ್ದಾಣದ ಸಮೀಪದ ಅಭಿಮಾನಿಗಳು ಪುನಃ ಸಭೆ ಕರೆದಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications