ಬಿಜೆಪಿ ಬಗ್ಗೆ ಜಿ.ಟಿ.ದೇವೇಗೌಡರಿಗೆ ಇದೆಯಾ ಒಲವು?
ಮೈಸೂರು, ಆಗಸ್ಟ್ 30: ಶಾಸಕ ಜಿ.ಟಿ ದೇವೇಗೌಡರು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪರನ್ನು ಪದೇ ಪದೇ ಹೊಗಳುವ ಮೂಲಕ ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆಯೇ ಎಂಬ ಅನುಮಾನ ಮೂಡಿಸಿದ್ದಾರೆ.
ಇದಕ್ಕೆ ಪೂರಕ ಎನ್ನುವಂತೆ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಮೋದಿ ಅವರು ಈ ದೇಶಕ್ಕೆ ಬೇಕು ಎಂದು ನಾನು ಮೊದಲೇ ಹೇಳಿದ್ದೆ. ಅವರು ದೇಶದ ವ್ಯಕ್ತಿ ಹಾಗೂ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಅವರು ಕಾಶ್ಮೀರ ಸಮಸ್ಯೆಯನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದೀರಿ. ಅವರು ದೇಶದ ಅಭಿವೃದ್ಧಿಯತ್ತ ನೋಡುತ್ತಿದ್ದಾರೆ. ಅವರ ಬಗ್ಗೆ ಒಳ್ಳೆಯ ಮಾತನಾಡಿದರೆ ಬಿಜೆಪಿ ಪರ ಎಂದು ಹೇಳುತ್ತಾರೆ. ಆದರೆ ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ಒಳ್ಳೆಯದಾಗಿ ಮಾತನಾಡುತ್ತಿದ್ದೇನೆ" ಎಂದು ಕಮಲ ಪಾಳಯದ ಪರ ಬ್ಯಾಟ್ ಬೀಸಿದ್ದಾರೆ.

"ನಾನು 36 ಸಾವಿರ ಮತಗಳ ಅಂತರದಲ್ಲಿ ಗೆದ್ದು ಮಂತ್ರಿ ಸ್ಥಾನ ತೆಗೆದುಕೊಳ್ಳಲು ಒಂದು ತಿಂಗಳು ಮುನಿಸು ಕಟ್ಟಿಕೊಂಡಿದ್ದೆ. ಆದರೆ ಯಡಿಯೂರಪ್ಪ ಅವರು ನಾನು ಸೋತಾಗ ಮನೆಗೆ ಕರೆಸಿಕೊಂಡು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರು. ಗೃಹ ಮಂಡಳಿ ಅಧ್ಯಕ್ಷ ಆದಾಗ ಸೋಮಣ್ಣ ಅವರು ವಸತಿ ಸಚಿವರಾಗಿದ್ದರು. ಇದು ಕಾಕತಾಳಿಯ. ಈಗ ಅವರೇ ಉಸ್ತುವಾರಿ ಸಚಿವರಾಗಿದ್ದಾರೆ. ಅದು ನನ್ನ ಹಾಗೂ ಅವರ ಸ್ನೇಹ" ಎಂದು ಹೇಳಿದರು.
ದಸರಾ ಹಿನ್ನೆಲೆಯಲ್ಲಿ ಕಾಮಗಾರಿಗಳ ಪರಿಶೀಲನೆಗಾಗಿ ವಿ. ಸೋಮಣ್ಣ, ಪ್ರತಾಪ್ ಸಿಂಹ ಮೊದಲಾದ ಬಿಜೆಪಿ ನಾಯಕರ ಜೊತೆ ಜಿಟಿಡಿ ಕೂಡ ಕಾಣಿಸಿಕೊಂಡಿದ್ದಾರೆ.












Click it and Unblock the Notifications