ಜೆಡಿಎಸ್-ಕಾಂಗ್ರೆಸ್ ಜಟಾಪಟಿಗೆ ಮೈಸೂರು ದಸರಾ ವೇದಿಕೆ ಆಯ್ತಾ?

ಮೈಸೂರು, ಅಕ್ಟೋಬರ್.15: ಈ ಬಾರಿಯ ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹೊರಗುಳಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಮೈತ್ರಿಗೆ ಇಲ್ಲಿಂದಲೇ ವಿಘ್ನ ಆರಂಭವಾದರೆ ಅಚ್ಚರಿಪಡಬೇಕಾಗಿಲ್ಲ. ಇಷ್ಟಕ್ಕೂ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳಾಗಿದ್ದು, ಇಲ್ಲಿ ತೀವ್ರ ಪ್ರತಿಸ್ಪರ್ಧೆಯಿದೆ.

ರಾಜ್ಯಮಟ್ಟದಲ್ಲಿ ನಾಯಕರು ಒಂದಾಗಿ ಸರ್ಕಾರ ರಚಿಸಿದ್ದರೂ ಸ್ಥಳೀಯ ಶಾಸಕರಾಗಲೀ, ನಾಯಕರಾಗಲೀ ನಮ್ಮ ಸರ್ಕಾರ ಎಂಬ ಭಾವನೆಯನ್ನು ತೋರ್ಪಡಿಸಿದಂತೆ ಎಲ್ಲೂ ಕಂಡು ಬರುತ್ತಿಲ್ಲ. ಸದ್ಯ ಮೇಲ್ನೋಟಕ್ಕೆ ಎಚ್.ಡಿ.ಕುಮಾರಸ್ವಾಮಿ ಸರ್ಕಾರದಂತೆ ಗೋಚರವಾಗುತ್ತಿದೆ.

ಇದೆಲ್ಲದರ ನಡುವೆ ಮೈಸೂರು ದಸರಾದಲ್ಲಂತೂ ಜೆಡಿಎಸ್ ನ ಸಚಿವರು, ಶಾಸಕರು, ನಾಯಕರ ದರ್ಬಾರ್ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ. ಮೈಸೂರು ವಿಭಾಗದಲ್ಲಿ ಕಾಂಗ್ರೆಸ್‌ನ ಯಾವ ಸಚಿವರು ಇಲ್ಲದಿರುವುದು ಇನ್ನೂ ಅನುಕೂಲವಾದಂತಾಗಿದೆ.

ದಸರಾ ಸಮಿತಿಗಳಲ್ಲಿ ಸರ್ಕಾರದ ಪಾಲುದಾರವಾಗಿರುವ ಕಾಂಗ್ರೆಸ್‌ಗೆ ಯಾವುದೇ ರೀತಿಯಲ್ಲೂ ಪಾಲುದಾರಿಕೆ ನೀಡದಿರುವುದು ಸ್ಥಳೀಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರಾದ ಜಿ.ಟಿ.ದೇವೇಗೌಡರು ಮತ್ತು ಸಾರಾ ಮಹೇಶ್ ಅವರದ್ದೇ ಕಾರುಬಾರವಾಗಿದ್ದು, ಇದರಿಂದ ನೊಂದ ಕಾಂಗ್ರೆಸ್ ನಾಯಕರು ದಸರಾದಿಂದ ದೂರ ಉಳಿದಿದ್ದು, ಮುಂದಿನ ಯಾವುದೇ ಕಾರ್ಯಕ್ರಮಗಳಲ್ಲೂ ಭಾಗಿಯಾಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ತಮ್ಮ ಆಕ್ರೋಶವನ್ನು ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಂದೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

 ಕಾಂಗ್ರೆಸ್ ನಾಯಕರ ಕಡೆಗಣನೆ

ಕಾಂಗ್ರೆಸ್ ನಾಯಕರ ಕಡೆಗಣನೆ

ಸದ್ಯಕ್ಕೆ ಪರಮೇಶ್ವರ್ ಅವರ ಯಾವ ಮಾತುಗಳು ನಡೆಯುತ್ತಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಈಗ ಸಿಕ್ಕಿರುವ ಉಪ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಂಡರೆ ಸಾಕು ಎಂಬಂತಿರುವ ಅವರು ಸ್ಥಳೀಯ ನಾಯಕರ ಆಕ್ರೋಶಕ್ಕೆ ಧ್ವನಿಯಾಗಿ ಜೆಡಿಎಸ್ ಮುಂದೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವರು ಸ್ವಪಕ್ಷದ ನಾಯಕರನ್ನು ಸಮಧಾನಪಡಿಸಲು ಮುಂದಾಗಿದ್ದಾರಷ್ಟೆ.

 ಆಕ್ರೋಶಗೊಂಡ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ

ಆಕ್ರೋಶಗೊಂಡ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ

ಜೆಡಿಎಸ್ ನಾಯಕರ ಕಡೆಗಣನೆಯಿಂದ ಆಕ್ರೋಶಗೊಂಡಿರುವ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಅವರು ಪರಮೇಶ್ವರ್ ಅವರ ಸಮ್ಮುಖದಲ್ಲಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನಲಾಗಿದ್ದು, ಈ ಬಾರಿ ದಸರಾದಲ್ಲಿ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿದೆ. ಉಪ ಸಮಿತಿಯನ್ನು ನೇಮಕ ಮಾಡದೇ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಪ್ರಾತಿನಿಧ್ಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರನ್ನು ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಭೇಟಿ ಮಾಡಿ ವಿವರಿಸಿದರೂ ಅವರು ಅದಕ್ಕೆ ಸೊಪ್ಪು ಹಾಕಿಲ್ಲ. ಇದರಿಂದ ನಮಗೆ ನೋವಾಗಿದೆ. ಹೀಗಾಗಿ ಇದುವರೆಗೆ ದಸರಾದಲ್ಲಿ ನಾವು ಭಾಗವಹಿಸಿಲ್ಲ. ಮುಂದೆಯೂ ಭಾಗವಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

 ತಿರುಗೇಟು ನೀಡಿದ ಸ್ಥಳೀಯ ನಾಯಕರು

ತಿರುಗೇಟು ನೀಡಿದ ಸ್ಥಳೀಯ ನಾಯಕರು

ಆದರೆ ಇವರ ಮಾತು ಕೇಳಿದ ಪರಮೇಶ್ವರ್ ನಮ್ಮದು ಸಮ್ಮಿಶ್ರ ಸರ್ಕಾರ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಅದನ್ನೆಲ್ಲ ಸರಿಪಡಿಸಿಕೊಂಡು ಹೋಗೋಣ. ಭಿನ್ನಾಭಿಪ್ರಾಯ ಬೇಡ, ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವುದು ಬೇಡ.

ದಯವಿಟ್ಟು ಎಲ್ಲರೂ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದ್ದು, ಇದಕ್ಕೆ ಸ್ಥಳೀಯ ನಾಯಕರು ಆಕ್ರೋಶಗೊಂಡು ನೀವು ಬೇಕಾದರೆ ದಸರಾದಲ್ಲಿ ಭಾಗವಹಿಸಿ. ಆದರೆ ನಾವು ಭಾಗವಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.

 ಮೈತ್ರಿ ಸರ್ಕಾರಕ್ಕೆ ಕಂಟಕ

ಮೈತ್ರಿ ಸರ್ಕಾರಕ್ಕೆ ಕಂಟಕ

ಸದ್ಯ ಪರಮೇಶ್ವರ್ ಪೀಕಲಾಟಕ್ಕೆ ಸಿಲುಕಿದ್ದು, ಅಸಮಾಧಾನಗೊಂಡಿರುವ ಸ್ಥಳೀಯ ನಾಯಕರನ್ನು ಸಮಾಧಾನಪಡಿಸುವಲ್ಲಿ ವಿಫಲವಾಗಿರುವುದು ಕಂಡು ಬಂದಿದ್ದು, ಇದು ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳನ್ನು ಹುಟ್ಟು ಹಾಕಿದೆ.

ಮೈಸೂರು ದಸರಾದಲ್ಲಿನ ಜೆಡಿಎಸ್ ಸಚಿವರ ಸರ್ವಾಧಿಕಾರಿ ವರ್ತನೆ, ಕಾಂಗ್ರೆಸ್‌ ನಾಯಕರ ಕಡೆಗಣನೆಯ ಬೇಸರ ಎಲ್ಲವೂ ಮುಂದಿನ ದಿನಗಳಲ್ಲಿ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಒಡಕನ್ನು ಹುಟ್ಟು ಹಾಕಿದರೆ ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಗೊತ್ತಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+