ದಸರಾ ಉದ್ಘಾಟನೆ: ಡಾ. ಮಂಜುನಾಥ್ ಅವರಿಗೆ ಆಹ್ವಾನ
ಬೆಂಗಳೂರು, ಅ. 12: ನಾಡಹಬ್ಬ ದಸರಾ ಉದ್ಘಾಟನೆಗೆ ಜಯದೇವ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಇಂದು ಅಧಿಕೃತವಾಗಿ ಆಹ್ವಾನ ನೀಡಲಾಗುತ್ತಿದೆ. ಮೈಸೂರು ದಸರಾ ಸ್ವಾಗತ ಸಮಿತಿ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿ ಆಹ್ವಾನ ನೀಡಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ನೇತೃತ್ವದಲ್ಲಿ ತೆರಳಿ ತಾಂಬೂಲ ನೀಡಿ ಆಹ್ವಾನಿಸಲಿದ್ದು, ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ ಹಾಗು ಸ್ವಾಗತ ಸಮಿತಿ ಸದಸ್ಯರು ಉಪಸ್ಥಿತರಿಲಿದ್ದಾರೆ.
ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಜಯದೇವದ ಡಾ. ಸಿ.ಎನ್. ಮಂಜುನಾಥ್
ಇದೇ ಅಕ್ಟೋಬರ್ 17 ರಿಂದ 26ರ ವರೆಗೆ ನಾಡಹಬ್ಬ ಮೈಸೂರು ದಸರಾ ಆಚರಣೆ ನಡೆಯಲಿದೆ. ಅ. 17 ರಂದು ನಾಡಹಬ್ಬವನ್ನು ಡಾ. ಮಂಜುನಾಥ್ ಉದ್ಘಾಟನೆ ಮಾಡಲಿದ್ದು, ಕೊರೊನಾ ವಾರಿಯರ್ಸ್ಗಳಾದ ಮೈಸೂರಿನ ಪೌರ ಕಾರ್ಮಿಕ ಮರಗಮ್ಮ, ವೈದ್ಯಾಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಪೊಲೀಸ್ ಕಾನ್ಸ್ಟೆಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತ ಆಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲು ತೀರ್ಮಾನ ಮಾಡಲಾಗಿದೆ.
ನಿನ್ನೆ (ಅ. 12) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ಕೋವಿಡ್ 19 ಹರಡದಂತೆ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆದಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ಕೆ.ಅನಿಲ್ ಕುಮಾರ್ ಉಪಸ್ಥಿತರಿದ್ದರು.