'ಅವರಪ್ಪ ಸಿದ್ದರಾಮಯ್ಯನ್ನೇ ಸೋಲಿಸಿದ್ದೇನೆ, ಈ ಪೆದ್ದು ಮಗ ಯಾವ ಲೆಕ್ಕ?'
ಮೈಸೂರು, ನವೆಂಬರ್ 20 : ಸಿದ್ದರಾಮಯ್ಯನಿಗೆ ನನ್ನ ಸಾಮರ್ಥ್ಯ ತೋರಿಸಿದ್ದೇನೆ. ಮುಖ್ಯಮಂತ್ರಿ ಹಾಗೂ ಮೈಸೂರು, ಚಾಮರಾಜನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಸೋತರು. ಅಪರಪ್ಪನನ್ನೇ ಸೋಲಿಸಿದ ನಮಗೆ ವರುಣಾ ಕ್ಷೇತ್ರದಲ್ಲಿ ಅವರ ಪೆದ್ದು ಮಗನನ್ನು ಸೋಲಿಸುವುದು ಕಷ್ಟಕರವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ನನ್ನ ಮಾತು ಕೇಳಿದ್ದರೆ ಚಾಮರಾಜನಗರ, ಹನೂರು, ವರುಣಾ ಕ್ಷೇತ್ರವನ್ನು ಗೆಲ್ಲಬಹುದಿತ್ತು. 16 ಲಕ್ಷ ಮತದಾರರನ್ನು ಹೊಂದಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿಯ ಆಯ್ಕೆಯನ್ನು 8 ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರು ಸೇರಿ ತೀರ್ಮಾನಿಸಬೇಕು ಎಂದಿದ್ದಾರೆ.
ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡಿ, ರಾಜ್ಯ ಸಮಿತಿಗೆ ತಿಳಿಸಬೇಕು. ಪಕ್ಷ ಹಾಗೂ ಮುಖಂಡರು ಆಯ್ಕೆ ಮಾಡಿದ ಅಭ್ಯರ್ಥಿ ಪರ ಕೆಲಸ ಮಾಡಿ, ಅವರ ಗೆಲುವಿಗಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ಸಂಸದರು ಬಲಾಢ್ಯರೇನಲ್ಲ. ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 28 ಸಾವಿರ ಮತಗಳಿಂದ, ಜಿಲ್ಲಾ ಉಸ್ತುವಾರಿ ಸಚಿವ 18 ಸಾವಿರ ಮತಗಳಿಂದ ಸೋಲಲಿಲ್ಲವೆ!? ಜನರು ಮನಸ್ಸು ಮಾಡಿದರೆ ಯಾರ ಪ್ರಭಾವವೂ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಸಂಸದ ಆರ್.ಧ್ರುವನಾರಾಯಣರಿಗೆ ಟಾಂಗ್ ನೀಡಿದರು.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ, "ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ ಎನ್ನುತ್ತಾರೆ. ಹೆಣ ಎಲ್ಲಿಯಾದರೂ ಪಕ್ಷ ಸೇರುತ್ತಾ, ಜೀವವಿದ್ದವರು ಪಕ್ಷ ಸೇರುತ್ತಾರೆ" ಎಂದು ಎಚ್.ಸಿ.ಮಹದೇವಪ್ಪ ಅವರ ಹೆಸರು ಹೇಳದೆ ಟೀಕಿಸಿದರು.












Click it and Unblock the Notifications