ಅಪರಾಧ ರಹಿತ ಕಾನೂನು ಸುವ್ಯವಸ್ಥೆ ಸರ್ಕಾರದ ಜವಾಬ್ದಾರಿ: ಸಿಎಂ
ಮೈಸೂರು, ನವೆಂಬರ್ 24: ಸಮಾಜದಲ್ಲಿ ಸಾರ್ವಜನಿಕರು ಯಾವುದೇ ಭೀತಿಯಿಲ್ಲದೆ ಶಾಂತಿಯಿಂದ ನೆಲೆಸುವುದಕ್ಕೆ ಅಪರಾಧರಹಿತವಾದ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಂಗಳವಾರ ಮೈಸೂರು ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಹಾಗೂ ಪೊಲೀಸ್ ಗೃಹ-2020 ಯೋಜನೆಯಡಿ ನಿರ್ಮಿಸಿರುವ 108 ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, "ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ತರವಾಗಿದೆ. ಮೈಸೂರು ನಗರದ ಪೊಲೀಸರಿಂದ ಅತ್ಯಂತ ಜನಪರವಾದ, ಗುಣಾತ್ಮಕ, ವೃತ್ತಿಪರ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾದ ಕೆಲಸವನ್ನು ಸರ್ಕಾರ ನಿರೀಕ್ಷಿಸುತ್ತಿದೆ" ಎಂದರು. ಮುಂದೆ ಓದಿ...
ಪೊಲೀಸ್ ಗೃಹ 2020 ಯೋಜನೆಯಡಿ ವಸತಿ ಸಮುಚ್ಚಯ
ಮೈಸೂರು ನಗರ ಪೊಲೀಸರ ಕಾರ್ಯಕ್ಷಮತೆಯನ್ನು ವೃದ್ಧಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಮೂಲ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಕರ್ನಾಟಕ ಪೊಲೀಸ್ ವಸತಿ ಹಾಗೂ ಮೂಲಸೌಲಭ್ಯಗಳ ಅಭಿವೃದ್ಧಿ ನಿಗಮದ ಮೂಲಕ ನೂತನ, ಆಧುನಿಕ ವಿನ್ಯಾಸದ ವಸತಿಗೃಹವನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜ್ಯೋತಿ ನಗರದಲ್ಲಿ 36 ಹಾಗೂ ಜಾಕಿ ಕ್ವಾಟ್ರಸ್ ನ 72 ವಸತಿ ಗೃಹಗಳು ಎಲ್ಲಾ ಮೂಲ ಸೌಕರ್ಯದಿಂದ ಕೂಡಿದೆ. ಪೊಲೀಸ್ ಗೃಹ 2020 ಯೋಜನೆಯಡಿ ಈ ವಸತಿ ಸಮುಚ್ಚಯ ನಿರ್ಮಾಣಕ್ಕೆ 20.31 ಕೋಟಿ ರೂ. ವೆಚ್ಚವನ್ನು ಮಾಡಲಾಗಿದೆ ಎಂದು ತಿಳಿಸಿದರು.
"ಇನ್ನು ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಸಾಧ್ಯತೆ"
184 ವಸತಿ ಗೃಹ ನಿರ್ಮಾಣದ ಉದ್ದೇಶ
ಪೊಲೀಸ್ ಗೃಹ-2025ನೇ ಯೋಜನೆಯಡಿ 184 ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಾಲದಲ್ಲಿ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪೊಲೀಸ್ ವಸತಿ ಗೃಹಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಪೊಲೀಸರ ಕಾರ್ಯ ವೈಖರಿಗೆ ಅಭಿನಂದನೆ
ಕೊರೊನಾ ಸೋಂಕಿನ ಹರಡುವಿಕೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಮೈಸೂರು ನಗರ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಿಯಂತ್ರಣದಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿರುವ ಪ್ರಶಂಸನಾ ಕಾರ್ಯವನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.
ಮೈಸೂರಿನ ಕಮಿಷನರ್ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ
ಮೈಸೂರು ಪೊಲೀಸರಿಗೆ ಗೃಹ ಸಚಿವರ ಶ್ಲಾಘನೆ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲಿ ಅತ್ಯಂತ ದಕ್ಷತೆಗೆ ಹೆಸರುವಾಸಿಯಾಗಿದೆ. ಅದರಂತೆ ಮೈಸೂರಿನಲ್ಲಿ ಇಲಾಖೆಯು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಮೈಸೂರಿನ ಪೊಲೀಸ್ ಇಲಾಖೆಯು ಕೋವಿಡ್-19 ಹಿನ್ನೆಲೆ ಜಾರಿಯಾದ ಲಾಕ್ ಡೌನ್ ಸಂದರ್ಭ ದಕ್ಷತೆಯಿಂದ ಕಾರ್ಯನಿರ್ವಹಿಸಿದೆ. ಜಿಲ್ಲೆಯ ಜನರ ಸಹಕಾರವೂ ಉತ್ತಮವಾಗಿದೆ. ಇದರಿಂದಾಗಿ ಸಾಂಸ್ಕೃತಿಕ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೊಮಶೇಖರ್, ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ ಸಿಂಹ, ಶಾಸಕ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಅಡಗೂರು ಎಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ಕೆ.ಮಹದೇವ್, ಎಲ್ ನಾಗೇಂದ್ರ, ಬಿ.ಹರ್ಷವರ್ಧನ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಂ ಇನ್ನಿತರರು ಉಪಸ್ಥಿತರಿದ್ದರು.