ಮೈಸೂರು ಅರಸರಿಗೆ ಅಲಮೇಲಮ್ಮನ ಶಾಪ ವಿಮೋಚನೆ ಆಗಿದೆಯಾ, ಇಲ್ಲಿದೆ ಉತ್ತರ
ಮೈಸೂರು, ಜೂನ್ 16: ಮೈಸೂರಿನ ಅರಮನೆಯಲ್ಲೀಗ ಸಂಭ್ರಮವೋ ಸಂಭ್ರಮ. ಇದಕ್ಕೆ ಕಾರಣ ಸುಮಾರು ಆರು ದಶಕಗಳ ಬಳಿಕ ಯದುವಂಶದ ಕುಡಿಯೊಂದು ಮಹಾರಾಣಿ ತ್ರಿಷಿಕಾ ಒಡೆಯರ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ.
ಕಳೆದ ವರ್ಷ ಇದೇ ವೇಳೆಯಲ್ಲಿ ಅರಮನೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಹಾಗೂ ರಾಜಸ್ತಾನದ ರಾಜಮನೆತನದ ತ್ರಿಷಿಕಾಕುಮಾರಿ ಸಿಂಗ್ ವಿವಾಹ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.
ಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯ
ವಿವಾಹವಾದ ಒಂದು ವರ್ಷದಲ್ಲಿ ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭ ಧರಿಸಿರುವ ಸುದ್ದಿ ಹರಿದಾಡುತ್ತಿದ್ದು, ಅರಮನೆಯ ರಾಜವಂಶಸ್ಥರಿಗೆ ಮಾತ್ರವಲ್ಲ, ಜನ ಸಾಮಾನ್ಯರು ಕೂಡ ಸಂತಸಪಡುತ್ತಿದ್ದಾರೆ.
ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೇಕೆ ಪೂಜೆ?
ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭವತಿಯಾಗಿರುವ ಬಗ್ಗೆ ಅರಮನೆ ಮೂಲಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅರಮನೆ ಜ್ಯೋತಿಷಿಗಳು ಸ್ಪಷ್ಟಪಡಿಸಿದ್ದಾರೆ. ತ್ರಿಷಿಕಾ ಇದೀಗ ಐದು ತಿಂಗಳ ಗರ್ಭವತಿಯಾಗಿದ್ದು, ದಸರಾ ನಂತರದ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.
ದತ್ತುಪುತ್ರರಿಗೆ ತಟ್ಟಲ್ಲ ಅಲಮೇಲಮ್ಮನ ಶಾಪ!
ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭವತಿಯಾಗಿರುವ ಸುದ್ದಿ ಹೊರಬರುತ್ತಿದ್ದಂತೆಯೇ ಮೈಸೂರು ರಾಜವಂಶಸ್ಥರಿಗೆ ತಟ್ಟಿದ ಶಾಪ ವಿಮೋಚನೆಯಾಯಿತು ಎಂಬಂತಹ ಮಾತುಗಳು ಕೇಳಿ ಬರುತ್ತಿವೆ.
ಆದರೆ ಮೈಸೂರು ರಾಜವಂಶಸ್ಥರ ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ದೇ ಆದರೆ ಅಲಮೇಲಮ್ಮನ ಶಾಪ ದತ್ತುಪುತ್ರರಿಗೆ ತಟ್ಟಿಲ್ಲ ಎಂಬುದು ತಿಳಿದು ಬರುತ್ತದೆ. ಆದರೆ ಅವರಿಗೆ ಹುಟ್ಟಿದ ಮಕ್ಕಳಿಗೆ ಮಾತ್ರ ಮಕ್ಕಳಾಗದೆ, ದತ್ತು ಪಡೆಯುತ್ತಾ ಸಾಗಿರುವುದು ರಾಜವಂಶಸ್ಥರ ಇತಿಹಾಸದುದ್ದಕ್ಕೂ ಕಾಣಲು ಸಿಗುತ್ತದೆ.
ಅಲಮೇಲಮ್ಮನ ಶಾಪದ್ ಬಗ್ಗೆ ಹರಿದಾಡುವ ಕಥೆ
ಇಷ್ಟಕ್ಕೂ ಅಲಮೇಲಮ್ಮನ ಶಾಪಕ್ಕೂ ಮೈಸೂರು ರಾಜರಿಗೆ ಮಕ್ಕಳಾಗದಿರುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಕಾಡಬಹುದು. ಇವತ್ತಿಗೂ ಮೈಸೂರು ಪ್ರಾಂತ್ಯದ ಜನರ ಬಾಯಲ್ಲಿ ಹರಿದಾಡುತ್ತಿರುವ ಕಥೆಗಳನ್ನು ಗಮನಿಸಿದರೆ ಮೈಸೂರು ಅರಸರಿಗೆ ಮಕ್ಕಳಾಗದಿರುವುದು, ಮಾಲಂಗಿ ಮಡುವಾಗಿರುವುದು, ತಲಕಾಡು ಮರಳಾಗಿರುವುದು ಎಲ್ಲದಕ್ಕೂ ನೇರಾನೇರ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ.
ರಾಜಒಡೆಯರ್ ಕಾಲದಲ್ಲಿ ಶಾಪ!
1423ರಲ್ಲಿ ಮೈಸೂರಿನ ಯದುವಂಶದ ಉದಯವಾದರೂ ಕೆಲ ಶತಮಾನಗಳ ಬಳಿಕ ಅಂದರೆ ರಾಜ ಒಡೆಯರ್ ಕಾಲದಲ್ಲಿ ಮೈಸೂರು ಅರಸರಿಗೆ ಅಲಮೇಲಮ್ಮ ಶಾಪ ನೀಡಿದ್ದು, ಅದು ಮುಂದಿನ ಅರಸರ ಮೇಲೆ ಪರಿಣಾಮ ಬೀರಿತು ಎಂಬುದನ್ನು ಕಾಣಬಹುದು.
ಶ್ರೀರಂಗಪಟ್ಟಣದ ಮೇಲೆ ದಾಳಿ
ಪ್ರಚಲಿತದಲ್ಲಿರುವ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜಾಡಳಿತ ನಡೆಸುತ್ತಿದ್ದ ಶ್ರೀರಂಗರಾಯನಿಗೆ ಬೆನ್ನುಪಣಿ ಎಂಬ ರೋಗ ಬರುತ್ತದೆ. ಅದರ ನಿವಾರಣೆಗಾಗಿ ಆತ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಾನೆ. ಇದನ್ನು ಅರಿತ ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳಲು ಇದೇ ಸೂಕ್ತ ಸಮಯ ಎಂದು ನಿರ್ಧರಿಸಿ ಶ್ರೀರಂಗಪಟ್ಟಣದ ಮೆಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ.
ಶಾಪ ನೀಡಿ ದೇಹತ್ಯಾಗ ಮಾಡಿದ ಅಲಮೇಲಮ್ಮ
ಶ್ರೀರಂಗರಾಯ ತಲಕಾಡಿನಲ್ಲಿಯೇ ಸಾವನ್ನಪ್ಪುತ್ತಾನೆ. ಬಳಿಕ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ವಜ್ರದ ಮುತ್ತಿನ ಮೂಗುತಿ ಸೇರಿದಂತೆ ಬಹಳಷ್ಟು ಒಡವೆಗಳು ಅವಳ ಬಳಿ ಇದ್ದು, ಅವುಗಳನ್ನು ವಶಪಡಿಸಿಕೊಳ್ಳಲು ರಾಜಒಡೆಯರು ಭಟರನ್ನು ಕಳುಹಿಸುತ್ತಾರೆ. ಇದನ್ನು ಅರಿತ ಅಲಮೇಲಮ್ಮ ಕೋಪಗೊಂಡು ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.
ಶಾಪಕ್ಕೆ ಪರಿಹಾರ ಏನು?
ಅಲಮೇಲಮ್ಮ ಶಾಪ ಹಾಕಿರುವುದು ರಾಜ ಒಡೆಯರ್ ಗೆ ತಿಳಿದ ಬಳಿಕ ಅರಮನೆ ಜ್ಯೋತಿಷಿಗಳನ್ನ್ ಕರೆಸಿ ಶಾಪಕ್ಕೆ ಏನಾದರೂ ಪರಿಹಾರ ಇದೆಯಾ ಎಂದು ಕೇಳುತ್ತಾರೆ. ಆಗ ಜ್ಯೋತಿಷಿಗಳು ನೀಡಿದ ಪರಿಹಾರದಂತೆ ಅರಮನೆ ಬಳಿ ಅಲಮೇಲಮ್ಮ ಮೂರ್ತಿ ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯ ನೆರವೇರಿಸುವಂತೆ ಸಲಹೆ ನೀಡುತ್ತಾರೆ. ಅದರಂತೆ ಪೂಜಾ ಕಾರ್ಯಗಳು ನಡೆಯುತ್ತಾ ಬರುತ್ತಿವೆ.
ದತ್ತುರಾಜರಿಗೆ ಮಾತ್ರ ಸಂತಾನ ಭಾಗ್ಯ
ಅಲಮೇಲಮ್ಮನ ಶಾಪದ ಬಳಿಕ ತಲಕಾಡು ಮರಳುಮಯವಾಗಿ, ಮಾಲಂಗಿ ಈಗಲೂ ಮಡುವಾಗಿದೆ. ಈಗಲೂ ಕಾಣುತ್ತಿದೆ. ಇನ್ನು ಶಾಪದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜರ ಇತಿಹಾಸವನ್ನು ನೋಡಿದರೆ ರಾಜರು ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ. ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು.
ಶಾಪ ವಿಮೋಚನೆ ಎಂದು ಒಪ್ಪಲಾಗುವುದಿಲ್ಲ
ಉದಾಹರಣೆಗೆ ಜಯಚಾಮರಾಜೇಂದ್ರ ಒಡೆಯರ್ ಗೆ ಶ್ರೀಕಂಠದತ್ತ ಒಡೆಯರ್ ಜನಿಸಿದರಾದರೂ ಅವರಿಗೆ ಮಕ್ಕಳಾಗಲಿಲ್ಲ. ಈಗ ಅವರ ನಂತರ ಯದುವೀರ್ ಒಡೆಯರ್ ಅವರನ್ನು ದತ್ತು ಪಡೆದಿರುವುದರಿಂದ ಅವರಿಗೆ ಸಂತಾನ ಪ್ರಾಪ್ತಿಯಾಗಿದೆ.
ಮುಂದೆ ಅವರಿಗೆ ಪುತ್ರನಾದರೆ ಆತನಿಗೆ ಮಕ್ಕಳಾಗುವುದಿಲ್ಲ. ಆಗ ಆತ ದತ್ತು ಪಡೆಯಬೇಕಾಗುತ್ತದೆ. ಇದನ್ನು ಗಮನಿಸಿದರೆ ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಒಡೆಯರ್ ಗರ್ಭವತಿ ಆಗಿರುವುದರಿಂದ ಶಾಪ ವಿಮೋಚನೆ ಆಯಿತು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.