Muda Case: ಸೈಟು ವಾಪಸ್ ಕೊಟ್ಟರು ತನಿಖೆ ನಡೆಯಲೇಬೇಕು; ಪ್ರತಾಪ್ ಸಿಂಹ ಒತ್ತಾಯ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸಿಕೊಂಡ ಬಳಿ, ಜಾರಿ ನಿರ್ದೇಶನಾಲಯ ಕೂಡ ಇಸಿಐಆರ್ ದಾಖಲಿಸಿಕೊಂಡಿದೆ. ಈ ಮಹತ್ವದ ಬೆಳವಣಿಗೆ ನಡುವೆಯೇ ಸಿದ್ದರಾಮಯ್ಯರ ಪತ್ನಿ ಪಾರ್ವತಿ ವಿವಾದಕ್ಕೆ ಕಾರಣವಾಗಿರುವ 14 ನಿವೇಶನಗಳನ್ನು ವಾಪಸ್ ಕೊಡುವುದಾಗಿ ಮುಡಾಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ ಸೈಟು ವಾಪಸ್ ಕೊಟ್ಟರು ವಿಚಾರಣೆ ನಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡೂವರೆ ತಿಂಗಳ ಹಿಂದೆಯೇ ಮುಡಾಗೆ ಸೈಟುಗಳನ್ನು ವಾಪಸ್ ಕೊಟ್ಟಿದ್ದರೆ, ಪ್ರಾಸಿಕ್ಯೂಷನ್, ಎಫ್ಐಆರ್ ಏನೂ ಇರುತ್ತಿರಲಿಲ್ಲ, ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನವೂ ಅಪಾಯಕ್ಕೆ ಸಿಲುಕಿತ್ತಿರಲಿಲ್ಲ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಸಿದ್ದರಾಮಯ್ಯನರವ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ನಿವೇಶನಗಳು ನುಂಗಬಾರದು ಎಂದು ನಾನು ಅವತ್ತೇ ಹೇಳಿದ್ದರೆ. ಎರಡುವರೆ ತಿಂಗಳ ಮೊದಲೇ ನನ್ನ ಮಾತು ಕೇಳಿ ಸೈಟು ವಾಪಸ್ ಮಾಡಿದ್ದರೆ, ಇಂದು ಅವರಿಗೆ ಇಂತಹ ಸಂಕಷ್ಟ ಬರುತ್ತಿರಲಿಲ್ಲ ಎಂದು ಹೇಳಿದರು.
ಕೇಸ್ ಮುಗಿಯಬಾರದು
ತಮ್ಮ ಸುತ್ತ ಹೊಗಳುಭಟ್ಟರು, ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡಿರುವುದಕ್ಕೆ ಇಂದು ಸಿಎಂ ಸಿದ್ದರಾಮಯ್ಯನವರಿಗೆ ಇಂತಹ ಪರಿಸ್ಥಿತಿ ಬಂದಿದೆ. ಅಧಿಕಾರದಲ್ಲಿದ್ದಾಗ ಕುಟುಂಬವನ್ನು ಹತ್ತಿರವಿಟ್ಟುಕೊಂಡು, ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರಬಹುದು ಎನ್ನುವುದಕ್ಕೆ ಇದು ಒಂದು ಉದಾಹರಣೆ, ಕಳ್ಳ ಕದ್ದ ಒಡವೆ ವಾಪಸ್ ಕೊಟ್ಟರೆ ಪ್ರಕರಣ ಮುಗಿಯುತ್ತದಾ ಇಲ್ಲ ಅಲ್ಲವಾ ಎಂದು ಕೇಳಿದರು.
ಸಿದ್ದರಾಮಯ್ಯ ತಮ್ಮ ಸೈಟ್ಗಳಿಗೆ 64 ಕೋಟಿ ರೂಪಾಯಿ ಕೇಳಿದ ದಿನವ ಅವರ ಮೇಲಿದ್ದ ಗೌರವ, ವಿಶ್ವಾಸ ಕಳೆದುಕೊಂಡರು. ಈಗ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟರೂ ಅಷ್ಟೇ ಕೊಡದಿದ್ದರೂ ಅಷ್ಟೇ ತನಿಖೆ ನಡೆಯಲೇಬೆಕು. ವರುಣ ಚುನಾವಣೆ ಸಂದರ್ಭದಲ್ಲಿ ನನಗೆ ಈ ಸೈಟುಗಳ ಬಗ್ಗೆ ದಾಖಲೆಗಳು ಸಿಕ್ಕಿದ್ದವು, ಆದರೆ ಸಿಎಂ ಪತ್ನಿ ಹೆಸರು ಇರುವ ಕಾರಣ ವೈಯಕ್ತಿಕವಾಗಿ ದಾಳಿ ಮಾಡಬಾರದು ಎಂದು ಸುಮ್ಮನಾಗಿದ್ದೇ ಎಂದರು.
ರಾಜಕಾರಣಗಳಾದವರು ತಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು, ಈ ಹಿಂದೆ ಸಿಎಂ ಆಗಿದ್ದವರು ಕೂಡ ಜೈಲಿಗೆ ಹೋಗಿದ್ದು ತಮ್ಮ ಕುಟುಂಬದ, ಮಕ್ಕಳ ಕಾರಣದಿಂದ ಎನ್ನುವುದು ನೆನಪಿರಲು. ಈಗ ಸಿಎಂ ಪತ್ನಿ ಭಾವನಾತ್ಮಕವಾಗ ಪತ್ರ ಬರೆದರೆ ಪ್ರಯೋಜನ ಆಗುವುದಿಲ್ಲ, ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪಸ್ಸಿನ ರೀತಿಯ ರಾಜಕಾರಣಕ್ಕಿಂತ, ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು. ಸೈಟ್ ವಾಪಸ್ ಕೊಡುವುದಾಗಿದ್ದರೆ ಹೈಕೋರ್ಟ್ನಲ್ಲಿ ಯಾಕೆ ಈ ಬಗ್ಗೆ ಫೈಟ್ ಮಾಡಿದರು ಎಂದು ಕೇಳಿದರು.
ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಹೆಚ್ಚು ಭ್ರಷ್ಟರು. ಚಂದ್ರಶೇಖರ್ ಬಗ್ಗೆ ಕುಮಾರಸ್ವಾಮಿ ಅವರ ಬಳಿ ದಾಖಲೆ ಇರಬಹುದು. ಅದಕ್ಕೆ ಆರೋಪ ಮಾಡಿದ್ದಾರೆ. ಅಧಿಕಾರಿ ಚಂದ್ರಶೇಖರ್ ಪ್ರಾಮಾಣಿಕನಾಗಿದ್ದರೆ, ಕುಮಾರಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ. ಚಂದ್ರಶೇಖರ್ ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ. ಹಿಮಾಚಲಪ್ರದೇಶದ ಕೇಡರ್ ಅಧಿಕಾರಿ. ನೀವು ಯಾಕೆ ಕರ್ನಾಟಕದಲ್ಲಿದ್ದೀರಾ, ಚಂದ್ರಶೇಖರ್ ನೀವು ಈ ಕೂಡಲೇ ರಾಜ್ಯದಿಂದ ತೊಲಗಿ ಎಂದು ಕೇಳಿದರು.
ಸಿಎಂ ಹಾಗೂ ಡಿಸಿಎಂ ಗೆ ಯಾವುದೇ ಅಧಿಕಾರಿ ಹಂದಿ ಎಂದು ಕರೆದಿದ್ದರೆ ಸುಮ್ಮನೆ ಇರುತ್ತಿದ್ದರಾ? ಚಂದ್ರಶೇಖರ್ ಮೊದಲು ಸಂಸ್ಪೆಡ್ ಆಗಬೇಕು. ಕನ್ನಡಿಗ ಕುಮಾರಸ್ವಾಮಿ ಮೇಲೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡಲ್ಲ. ಚಂದ್ರಶೇಖರ್, ಭಾಷೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications