ಚಹಾ ದಿನದ ವಿಶೇಷ: ಅಮೃತತುಲ್ಯ ಮಸಾಲೆ ಚಹಾ!
ಮೈಸೂರು, ಮೇ 21: ಇಂದು (ಮೇ 21) ಚಹಾ ದಿನವಂತೆ, ಬಹಳಷ್ಟು ಜನರ ಕೆಲಸಗಳು ಒಂದು ಕಪ್ ಚಹಾದೊಂದಿಗೆ ಆರಂಭವಾಗುತ್ತವೆ. ಬಹಳಷ್ಟು ಜನಕ್ಕೆ ಚಹಾ ಕುಡಿದಿಲ್ಲವೆಂದರೆ ಯಾವುದೇ ಕೆಲಸಕ್ಕೂ ಮೂಡ್ ಬರುವುದೇ ಇಲ್ಲ. ಹಲವರಿಗೆ ಜೀವನೋತ್ಸವ ತುಂಬಿದರೆ ಮತ್ತೆ ಕೆಲವರಿಗೆ ಚಹಾವೇ ಜೀವನವಾಗಿದೆ.
ಚಹಾವನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾಡುತ್ತಾರೆ. ಹೀಗಾಗಿ ಅದರ ರುಚಿಗೆ ಮಾರು ಹೋದವರು ಟೀ ಅಂಗಡಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ನಗರಗಳಲ್ಲಿ ಟೀ ಅಂಗಡಿಯಿಟ್ಟುಕೊಂಡು ಜೀವನ ಸಾಗಿಸುವ ಸಾವಿರಾರು ಕುಟುಂಬಗಳಿವೆ. ಕೆಲವರು ಹಲವು ಬಗೆಯ ಚಹಾವನ್ನು ತಯಾರಿಸಿ ಮಾರಾಟ ಮಾಡುತ್ತಾ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.
ಇವರೆಲ್ಲರ ನಡುವೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಗಮನ ಸೆಳೆಯುತ್ತದೆ. ಮಂಗಳೂರು ಕಡೆಗೆ ಕಲ್ಲಡ್ಕ ಟೀ (ಕೆಟೀ) ಹೇಗೆ ಫೇಮಸ್ಸೋ ಹಾಗೆಯೇ ಮೈಸೂರಿನ ಕಡೆಯಲ್ಲಿ ಪುಣೇರಿ ಶ್ರೀಮಾನ್ ಅಮೃತತುಲ್ಯ ಮಸಾಲೆ ಚಹಾ ಜನಪ್ರಿಯವಾಗುತ್ತಿದೆ. ಸದ್ಯ ಮೈಸೂರು ನಗರದ ದೇವರಾಜ ಅರಸ್ ರಸ್ತೆಯ ಮೋರ್ ಮೆಗಾಸ್ಟೋರ್ಗೆ ತೆರಳುವ ಮಾರ್ಗದಲ್ಲಿರುವ ಈ ಚಹಾದ ಅಂಗಡಿ ಇತರೆಡೆಗಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ.
ಇಲ್ಲಿ ದೊರೆಯುವ ಚಹಾ ಆರೋಗ್ಯ ವರ್ಧಕಗಳಿಂದ ಸಮ್ಮಿಶ್ರಣಗೊಂಡ ಮಸಾಲೆಯಿಂದ ತಯಾರಾಗಿದ್ದು, ಇದು ಕೇವಲ ನಾಲಿಗೆಗೆ ಮಾತ್ರ ರುಚಿ ನೀಡುವುದಲ್ಲ, ಆರೋಗ್ಯಕ್ಕೂ ಹಿತವಾಗಿದೆ.
ಇದರ ಮಾಲೀಕರಾದ ಸತೀಶ್ ಭಟ್ ಅವರು ಮೂಲತಃ ಬೆಳಗಾವಿಯವರು. ಪುಣೆಗೆ ತೆರಳಿ ಈ ಚಹಾ ಮಾಡುವ ಬಗ್ಗೆ ತರಬೇತಿ ಪಡೆದು ಬಳಿಕ ಮೈಸೂರು ನಗರದಲ್ಲಿ ಚಹಾ ಅಂಗಡಿ ಆರಂಭಿಸಿದ್ದಾರೆ.
ಇಲ್ಲಿ ತಯಾರು ಮಾಡುವ ಟೀ ನಲ್ಲಿ ಶುಂಠಿ, ಪುದಿನಾ, ಏಲಕ್ಕಿ, ಇನ್ನಿತರೆ ಸ್ವದೇಶಿ ಮಸಾಲೆ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹಾಕಿ ತಯಾರಿಸಲಾಗುತ್ತದೆ. ಇದರಿಂದ ಸಾಮಾನ್ಯವಾಗಿ ಟೀ ಕುಡಿದರೆ, ಯಾವುದೇ ಅಸಿಡಿಟಿಯಾಗಲೇ ಇನ್ನಿತರೆ ತೊಂದರೆಗಳಾಗಲಿ, ಆರೋಗ್ಯದಲ್ಲಿ ಅಡ್ಡ ಪರಿಣಾಮಗಳಾಗಲಿ ಆಗುವುದಿಲ್ಲ ಎನ್ನುವುದು ಮಾಲೀಕ ಸತೀಶ್ ಭಟ್ ಅವರ ಭರವಸೆಯ ಮಾತಾಗಿದೆ.
ಈ ಟೀಯನ್ನು ಮಾಮೂಲಿನಂತೆ ತಯಾರು ಮಾಡುವುದಿಲ್ಲ, ಜತೆಗೆ ಟೀ ಪುಡಿಯನ್ನು ಕೂಡ ಉತ್ಕೃಷ್ಟ ದರ್ಜೆಯದನ್ನೇ ಬಳಸಲಾಗುತ್ತದೆ. ಮಸಾಲೆ ಪದಾರ್ಥಗಳನ್ನು ಕೂಡ ನಿಯಮಿತವಾಗಿ ಬಳಸಿ, ಹಿತ್ತಾಳೆ ಪಾತ್ರೆಯಲ್ಲಿ ಎಲ್ಲಾ ಮಿಶ್ರಣವನ್ನು ಹಾಕಿ ಅದೇ ಪಾತ್ರೆಯಲ್ಲಿ ಚಹಾ ತಯಾರಿಸುವುದರಿಂದ ಜತೆಗೆ ವೈಜ್ಞಾನಿಕ ಅಳತೆಯನ್ನು ಟೀ ಮಾಡಲು ಬಳಸುತ್ತಿರುವುದು ವಿಶೇಷವಾಗಿದೆ.