ಗೋ.ಮಧುಸೂದನ್ ಸಂದರ್ಶನ : ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ
Recommended Video
ಮೈಸೂರು, ನವೆಂಬರ್ 21 : 'ಅಂಬೇಡ್ಕರ್ ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ, ಅದೊಂದು ಸುಳ್ಳಿನ ಕಂತೆ' ಎಂಬ ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋ.ಮಧುಸೂದನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಗೋ. ಮಧುಸೂದನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ (ನ.22) ರಂದು ದಲಿತ ಮತ್ತು ವಿವಿಧ ಸಂಘಟನೆಗಳು ಮೈಸೂರು ಬಂದ್ಗೆ ಕರೆ ನೀಡಿವೆ. ತಮ್ಮ ಹೇಳಿಕೆ ಕುರಿತು ಗೋ.ಮಧುಸೂದನ್ ಅವರು ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದು, ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದಾರೆ.
'ನನ್ನ ಹೇಳಿಕೆ ಬಗ್ಗೆ ಗೊಂದಲ ಸೃಷ್ಟಿಸಿ ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ನಾಯಕರು ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಗೋ.ಮಧುಸೂದನ್ ಆರೋಪಿಸಿದರು.
ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ನಿಜವೇ?
'ಅಂಬೇಡ್ಕರ್ ಅವರು ಆರ್ಎಸ್ಎಸ್ ಸಂಘಟನೆಗೆ ಪ್ರಾತಃ ಸ್ಮರಣೀಯರು. ಅಂತಹವರ ಮಧ್ಯೆ ಬೆಳೆದವನು ನಾನು. ಅಂಬೇಡ್ಕರ್ ಅವರನ್ನು ಅವಮಾನಿಸುವ ಪ್ರಶ್ನೆಯೇ ಇಲ್ಲ. ಪೂಜಿಸುವ ಮನೋಭಾವನೆಯಿಂದ ಕಾಣುತ್ತೇನೆ ಹೊರತು, ದ್ವೇಷಿಸುವ ಬುದ್ಧಿ ನನ್ನದಲ್ಲ'.
ವಿವಾದ ಮಾಡಿದ್ದು ಷಡ್ಯಂತ್ರವೇ?
'ಖಂಡಿತಾ ಹೌದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದಾಗಿ ಆರೋಪಿಸುತ್ತಾ, ನಾನು ಆಡದೇ ಇರುವ ಮಾತುಗಳನ್ನು ಸೇರಿಸಿ ಅಪಪ್ರಚಾರ ಮಾಡುತ್ತಿರುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ'.
'ನೋವಾಗಿದ್ದರೆ ವಿಷಾದಿಸುವೆ'
'ನಾನು ಏನು ಹೇಳಿದರೂ ಅದಕ್ಕೆ ಬಣ್ಣ ಲೇಪನವಾಗುತ್ತಿದೆ. ಹೋಗಲಿ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾಧಿಸುವೆ. ವೈಯಕ್ತಿಕವಾಗಿ ಕ್ಷಮೆ ಯಾಚಿಸುವೆ'.
'ನಿಮ್ಮ ವಿರುದ್ಧ ದೂರಿನಲ್ಲಿ ಏನಿದೆ ?'
'ಅಂಬೇಡ್ಕರ್ ಕೀಳುಜಾತಿಯಲ್ಲಿ ಹುಟ್ಟಿದವರಾದ್ದರಿಂದ ಅವರು ಬರೆದ ಸಂವಿಧಾನವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದವರಿಗೆ ಆ ಬಗ್ಗೆ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ. ವಾಸ್ತವ ಏನೆಂದರೆ ನಾನು ಎಲ್ಲಿಯೂ ಆ ರೀತಿ ಹೇಳಿಯೇ ಇಲ್ಲ ಸುದ್ದಿವಾಹಿನಿಯಲ್ಲಿ ಈ ಹಿಂದೆ ನಡೆದ ಚರ್ಚೆಯ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಲಭ್ಯವಿವೆ. ಆದರಲ್ಲಿ ಹೀಗೆ ಮಾತನಾಡಿದ ದೃಶ್ಯಗಳಿಲ್ಲ'
ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ
'ಗೊಂದಲ ಸೃಷ್ಟಿಸಿ ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ನಾಯಕರು ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ನನ್ನ ವಿರುದ್ಧದ ಪ್ರತಿಭಟನೆಗೆ ಈಗ ಎಸ್ಡಿಪಿಐ ಸಂಘಟನೆಯೂ ಪ್ರವೇಶಿಸಿದೆ. ಇದರಿಂದ ಹಿಂಸೆ ಪ್ರಚೋದಿಸುವ ಮತ್ತು ದೇಶ ವಿರೋಧಿ ಶಕ್ತಿಗಳು ಪತಿಭಟನೆಗೆ ಕುಮ್ಮಕ್ಕು ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ'