ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ
ಮೈಸೂರು, ಜನವರಿ,29: ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ವ್ಯಕ್ತಿಯೊಬ್ಬ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದು, ಯಾವುದೇ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ಮೇಲೆ ಸಿಡಿದೆದ್ದಿದ್ದಾರೆ.
ರೈತ ಮುಖಂಡ ನಂಜುಂಡಸ್ವಾಮಿ ಅವರು ಅಕ್ರಮ ಮರಳು ದಂಧೆ ನಡೆಯುತ್ತಿದ್ದ ಸ್ಥಳದಲ್ಲಿಳಿದು ಪ್ರತಿಭಟನೆ ನಡೆಸಿ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಹೊರಳವಾಡಿ ವ್ಯಾಪ್ತಿಯಲ್ಲಿ ಹರಿಯುವ ಕಪಿಲ ನದಿಯಿಂದ ಅಕ್ರಮ ಮರಳು ತೆಗೆಯುವ ಕಾರ್ಯ ಮುಂದುವರೆದ ಕಾರಣ ಈ ತೀರ್ಮಾನಕ್ಕೆ ಬಂದಿದ್ದಾರೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಈ ಕುರಿತು ಮಾತನಾಡಿದ ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಕಳೆದ ಹಲವಾರು ದಿನಗಳಿಂದ ಇಲ್ಲಿನ ಕಪಿಲಾ ನದಿಯ ದಡದ ಆಸುಪಾಸಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ವಿಚಾರವನ್ನು ಸಂಬಂಧಿಸಿದಂತೆ ತಾಲೂಕು ದಂಡಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಕಂಡು ಪ್ರಶ್ನಿಸಿದಾಗ ಸಾರ್ವಜನಿಕವಾಗಿ ಮರಳು ದಂಧೆಕೋರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಹೇಳಿದ್ದಾರೆ.[ಪುತ್ತೂರಿನಲ್ಲಿ ಫೆ. 6ಕ್ಕೆ ಕುಮ್ಕಿ ರೈತರ ಜಾಗೃತಿ ಸಮಾವೇಶ]
ಅಕ್ರಮ ಮರಳುಗಾರಿಕೆ ಹಾಗೂ ತಮ್ಮ ಮೇಲಿನ ಹಲ್ಲೆಯನ್ನು ಕುರಿತಂತೆ ಇಲಾಖೆಗೆ ದೂರು ನೀಡಲಾಗಿದೆ. ಆದ್ದರಿಂದ ತಕ್ಷಣ ಕ್ರಮ ಕೈಗೊಂಡು ಅಕ್ರಮ ಮರಳುಗಾರಿಕೆ ತಡೆಯಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.