ಕಾಂಗ್ರೆಸ್ ಟಿಕೆಟ್ ಗಾಗಿ ಕೊನೆಯವರೆಗೂ ಕಾಯುತ್ತೇನೆ:ಸುಮಲತಾ ಅಂಬರೀಶ್
ಮೈಸೂರು, ಮಾರ್ಚ್ 8: ಕಾಂಗ್ರೆಸ್ ಟಿಕೆಟ್ ಗಾಗಿ ನಾನು ಕೊನೆ ಕ್ಷಣದವರೆಗೂ ಕಾಯುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಅವರು, ಲೋಕಸಭಾ ಚುನಾವಣೆಯ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಟೆಂಪಲ್ ರನ್ ಸಹ ಆರಂಭಿಸಿದ್ದಾರೆ. ಇದೇ ವೇಳೆ ಮಾತನಾಡಿ, ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಸಾಧ್ಯ. ನಾನು ಟಿಕೆಟ್ ವಿಚಾರವಾಗಿ ಯಾರನ್ನೂ ಕೂಡ ಭೇಟಿ ಮಾಡಿಲ್ಲ. ಒಂದೊಂದೇ ಹೆಜ್ಜೆ ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ. ಹೆಜ್ಜೆಗಳನ್ನು ನೋಡಿಕೊಂಡಿಯೇ ಇಡುತ್ತಿದ್ದೇನೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಬರುವುದನ್ನು ನಾನು ತಡೆಯುವುದಕ್ಕೆ ಆಗುವುದಿಲ್ಲ. ಯಾರಿಗೂ ನೋವಾಗುವಂತಹ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತುಗಳನ್ನು ಆಡಬೇಡಿ. ಇಂದು ವಿಶ್ವ ಮಹಿಳೆಯರ ದಿನ. ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ. ತಾಯಿಗೆ ನೋವಾಗುವಂತಹ ಮಾತುಗಳು ಬೇಡ. ಅಭಿಮಾನಿಗಳೇ ವೈಯಕ್ತಿಕ ಟೀಕೆ ಬೇಡ ಎಂದು ಮನವಿ ಮಾಡಿದರು.

ಅಲ್ಲಿ ಒಬ್ಬರು ತಾಯಿ ಇದ್ದಾರೆ. ಅವರಿಗೂ ನೋವಾಗುತ್ತದೆ. ನಿಖಿಲ್ ಜಾಗದಲ್ಲಿ ನನ್ನ ಮಗನನ್ನು ನಿಲ್ಲಿಸಿ ನೋಡುತ್ತೇನೆ. ನನ್ನ ಮಗನಿಗೆ ಬೈದಾಗ ಹೇಗೆ ನೋವಾಗುತ್ತದೋ ಅಷ್ಟೇ ನನಗೂ ಆಗುತ್ತದೆ ಎಂದು ಪರೋಕ್ಷವಾಗಿ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಪರ ನಿಂತರು.
ಇನ್ನು ಮಂಡ್ಯದಲ್ಲಿ ನನ್ನನ್ನು ಮನೆ ಸೊಸೆಯಂತೆ ಜನರು ನೋಡುತ್ತಿದ್ದಾರೆ. ಈವರೆಗೂ ನಾನು ಜನರನ್ನು ಚುನಾವಣೆ ದೃಷ್ಟಿಯಿಂದ ಭೇಟಿ ಮಾಡಿಲ್ಲ. ಸ್ವಯಂಪ್ರೇರಿತವಾಗಿ ಜನ ಬರುತ್ತಿರುವುದು ಖುಷಿ ತರುತ್ತದೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವುದರಿಂದ ನೆಮ್ಮದಿ ಸಿಕ್ಕಿದೆ. ಚಿಕ್ಕ ವಯಸ್ಸಿನಿಂದಲೂ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಇಂದು ತಾಯಿಯ ದರ್ಶನ ಮಾಡಿದ್ದು, ಮನಸ್ಸಿಗೆ ಸಮಾಧಾನ ತರಿಸಿದೆ ಎಂದರು.
ಇನ್ನು ಮಂಡ್ಯ ಜಿಲ್ಲೆಯ ಪ್ರವಾಸದ ಬಳಿಕ ಸುಮಲತಾ ಮೈಸೂರಿನಲ್ಲಿಯೇ ತಂಗುತ್ತಿದ್ದಾರೆ. ಜೆಡಿಎಸ್ ಎಂಎಲ್ಸಿಗೆ ಸೇರಿದ ಖಾಸಗಿ ಹೋಟೆಲ್ ನಲ್ಲಿಯೇ ವಾಸ್ತವ್ಯ ಹೂಡುತ್ತಿದ್ದಾರೆ.












Click it and Unblock the Notifications