ಕಾಂಗ್ರೆಸ್ ಸೇರಲು ಹೊಸ ಷರತ್ತು ಹಾಕಿದ ಜಿ. ಟಿ. ದೇವೇಗೌಡ!
ಮೈಸೂರು, ಮಾರ್ಚ್ 12: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಲವಾರು ದಿನದಿಂದ ಹರಿದಾಡುತ್ತಿದೆ. ಈಗ ಶಾಸಕರು ಪಕ್ಷ ಸೇರಲು ಹೊಸ ಷರತ್ತು ಹಾಕಿದ್ದಾರೆ.
ಮೈಸೂರಿನಲ್ಲಿ ಶನಿವಾರ ಮಾತನಾಡಿದ ಜಿ. ಟಿ. ದೇವೇಗೌಡರು, "ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಮಾತ್ರ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಮೊದಲು ನನ್ನ ಮಗ ಹರೀಶ್ ಗೌಡ ವಿಚಾರದಲ್ಲಿ ಕಾಂಗ್ರೆಸ್ ತನ್ನ ತೀರ್ಮಾನ ಹೇಳಿದ ಮೇಲೆ ಉಳಿದ ಮಾತುಕತೆ ನಡೆಸುತ್ತೇನೆ" ಎಂದರು.

"ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಇಬ್ಬರಿಗೂ ನಾನು ಈ ವಿಷಯನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರ್ಧಾರ ತಿಳಿಸಿದರೆ ನಂತರ ನನ್ನ ತೀರ್ಮಾನ ಹೇಳುತ್ತೇನೆ" ಎಂದು ತಿಳಿಸಿದರು.
ಮೂರು ಕ್ಷೇತ್ರದಲ್ಲಿ ಒಂದು; "ಹಾಗೇ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳ ಬಗ್ಗೆ ನನಗೆ ವಿಶ್ವಾಸವಿದೆ. ಹುಣಸೂರು ಕ್ಷೇತ್ರಕ್ಕೆ ನನ್ನ ಮೊದಲ ಆದ್ಯತೆ, ಕೆ. ಆರ್. ನಗರ ಕ್ಷೇತ್ರಕ್ಕೆ ಎರಡನೇ ಆದ್ಯತೆ ನೀಡಿದ್ದೇನೆ. ಚಾಮರಾಜ ಕ್ಷೇತ್ರ ಮೂರನೇ ಆದ್ಯತೆ" ಇದೆ ಎಂದು ಜಿ. ಟಿ. ದೇವೇಗೌಡ ಹೇಳಿದರು.
"ಈ ಮೂರು ಕ್ಷೇತ್ರದಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ನೀಡಲಿ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ" ಎಂದು ಜಿ. ಟಿ. ದೇವೇಗೌಡ ಸ್ಪಷ್ಟಪಡಿಸಿದರು.
"ಈ ನಡುವೆ ಬಿಜೆಪಿ ಅವರು ಕೂಡ ನಮ್ಮ ಜೊತೆ ಇರಿ ಎಂದು ಕೇಳುತ್ತಿದ್ದಾರೆ. ಅವರು ತಂದೆ - ಮಗ ಇಬ್ಬರಿಗೂ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ನಾನು ಸದ್ಯಕ್ಕೆ ಯಾವ ನಿರ್ಧಾರ ಮಾಡಿಲ್ಲ. ಇನ್ನೂ 6 ತಿಂಗಳ ನಂತರ ಚಾಮುಂಡಿ ತಾಯಿಯ ನಿರ್ಣಯದಂತೆ ನಾನು ನಿರ್ಧಾರ ಕೈಗೊಳ್ಳುತ್ತೇನೆ" ಎಂದರು.
"ಚಾಮುಂಡಿ ದೇವಿ ಅಂದು ಏನೂ ಅನುಗ್ರಹಿಸುತ್ತೋ ಅದೇ ನಿರ್ಧಾರ ನನ್ನದ್ದು. ಎಲ್ಲಾ ನಿರ್ಧಾರ ತಾಯಿಗೆ ಬಿಟ್ಟಿದ್ದೇನೆ. ಜೆಡಿಎಸ್ನವರು ಇದುವರೆಗೂ ನನ್ನನ್ನು ಸಂಪರ್ಕಿಸಿಲ್ಲ.
ಪಕ್ಷದ ಯಾವ ಸಭೆ, ಸಮಾರಂಭಕ್ಕೂ ಕರೆಯುತ್ತಿಲ್ಲ" ಎಂದು ತಿಳಿಸಿದರು.
"ಮುಖ್ಯಮಂತ್ರಿ ಸ್ಥಾನದಿಂದ ಎಚ್. ಡಿ. ಕುಮಾರಸ್ವಾಮಿ ಕೆಳಗಿಳಿದ ನಂತರದ ದಿನದಿಂದ ನನ್ನ ಜೊತೆ ಜೆಡಿಎಸ್ನವರು ಸಂಪರ್ಕದಲ್ಲಿ ಇಲ್ಲ" ಎಂದು ಹೇಳಿದ ಜಿ. ಟಿ. ದೇವೇಗೌಡರು ಮತ್ತೆ ಜೆಡಿಎಸ್ಗೆ ಹೋಗುವ ಪ್ರಸ್ತಾಪವನ್ನು ತಳ್ಳಿಹಾಕಿದರು.
ಸಿದ್ದರಾಮಯ್ಯ ಸೋಲಿಸಿದ್ದ ಜಿಟಿಡಿ; 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ. ಟಿ. ದೇವೇಗೌಡ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.
ಆದರೆ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಜಿ. ಟಿ. ದೇವೇಗೌಡರು ಜೆಡಿಎಸ್ನಿಂದ ಅಂತರ ಕಾಯ್ದುಕೊಂಡದರು. ಪಕ್ಷದ ಸಭೆಗಳಿಂದ ದೂರವುಳಿದರು, ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ಬಹಿರಂಗವಾಗಿ ಹಲವು ಬಾರಿ ಹೊಗಳಿದ ಜಿ. ಟಿ. ದೇವೇಗೌಡರು ಬಿಜೆಪಿ ಸೇರುತ್ತಾರೆಯೇ? ಎಂಬ ಅನುಮಾನ ಉಂಟಾಗಿತ್ತು. ಆದರೆ ಅವರು ಜೆಡಿಎಸ್ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡಿಲ್ಲ.
ಜಿ. ಟಿ. ದೇವೇಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿದೆ. ಸಿದ್ದರಾಮಯ್ಯ ಜೊತೆ ಹಲವು ಬಾರಿ ಅವರು ವೇದಿಕೆ ಹಂಚಿಕೆ ಕೊಂಡಿದ್ದಾರೆ. ಆದರೆ ಪಕ್ಷ ಯಾವಾಗ ಸೇರಲಿದ್ದಾರೆ? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.












Click it and Unblock the Notifications