ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಯ: ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಘೋಷಣೆ
ಮೈಸೂರು, ಡಿಸೆಂಬರ್, 21: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ನಿಶ್ಚಿತವಾಗಿದೆ. ರಾಜ್ಯದ ಐದು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಪೈಕಿ ಒಂದು ಕ್ಷೇತ್ರವನ್ನು ಈ ತಿಂಗಳ ಅಂತ್ಯಕ್ಕೆ ಪ್ರಕಟಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮೈಸೂರಿನಲ್ಲಿ ತಿಳಿಸಿದರು.
ಐದು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿಗೆ ಟಿಕೆಟ್ ಕೇಳಿದ್ದೇವೆ. ಒಂದುವೇಳೆ ಟಿಕೆಟ್ ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷೇತರವಾಗಿ ಸ್ಪರ್ಧಿಸಿದರೂ ಹಿಂದುತ್ವದ ಅಜೆಂಡಾದ ಮೂಲಕ ಗೆದ್ದು ಬರುತ್ತೇನೆ. ಬಿಜೆಪಿಯಿಂದ 25 ಟಿಕೆಟ್ ಕೇಳಿದ್ದೇವೆ. ಈ ಪೈಕಿ ಐವರು ಸ್ವಾಮೀಜಿಗಳಿಗೂ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಒಂದು ವೇಳೆ ಕೊಡದಿದ್ದರೂ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇವೆ. ಎಸ್ಸಿ, ಎಸ್ಟಿ ಮೀಸಲಾತಿ, ಮಹಿಳಾ ಮೀಸಲಾತಿ ಹಾಗೂ ಪದವೀಧರರಿಗೆ ಮೀಸಲಾತಿಯಂತೆ ಬಿಜೆಪಿಯಲ್ಲಿ ಹಿಂದುಗಳಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
Cauvery Expressway : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಕಾವೇರಿ ಎಕ್ಸ್ಪ್ರೆಸ್ವೇ ಎಂದು ಹೆಸರಿಡಲು ಮನವಿ
ಸಿದ್ದರಾಮಯ್ಯ ವಿರುದ್ಧ ಮುತಾಲಿಕ್ ಆಕ್ರೋಶ
ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣಕ್ಕೆ ಕಾಂಗ್ರೆಸ್ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಂದೇ ಒಂದು ದಿನ ಅಂಡಮಾನ್ ಜೈಲಿನಲ್ಲಿ ಇದ್ದು ಬರಲಿ. ಆಗ ಸಾವರ್ಕರ್ ಅನುಭವಿಸಿದ ಕಷ್ಟ ಏನು ಅಂತ ಅವರಿಗೆ ಅರ್ಥ ಆಗುತ್ತದೆ. ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟಗಾರ. ಪಾಕಿಸ್ತಾನದ ಅಧ್ಯಕ್ಷ ಬರುತ್ತಾನೆಂದು ಅವರನ್ನು ಬೆಳಗಾವಿಯ ಇಂಡಲಗ ಜೈಲಿನಲ್ಲಿ ಇಡಲಾಗಿತ್ತು. ಸಾವರ್ಕರ್ ನೂರು ದಿನ ಬೆಳಗಾವಿ ಜೈಲಿನಲ್ಲಿದ್ದರು. ಬೆಳಗಾವಿಗೂ ಸಾವರ್ಕರ್ಗೂ ಏನು ಸಂಬಂಧ ಎನ್ನುವ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ಫೋಟೋ ಅನಾವರಣ ಮಾಡಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವಕೀಲರೊಂದಿಗೆ ಚರ್ಚೆ ಮಾಡುತ್ತೇನೆ
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಹೀಗಿರುವಾಗ ಗಡಿ ವಿವಾದದ ಬಗ್ಗೆ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಯಾರಾದರೂ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಅವಕಾಶ ಇದೆ. ನಾನು ಕೂಡ ವಕೀಲರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಹೊಸಬರಿಗೆ ಮಣೆ ಹಾಕದ ಜೆಡಿಎಸ್
ಮುಂದಿನ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಈಗಿನಿಂದಲೇ ಸಿದ್ಧತೆ ಕೈಗೊಂಡಿದ್ದು, ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಸದ್ಯ ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಜೆಡಿಎಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಒಟ್ಟು 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ಕಹಳೆ ಮೊಳಗಿಸಿದೆ. ಗೊಂದಲ, ಅಸಮಾಧಾನ ಇರುವ ಕ್ಷೇತ್ರಗಳಿಗೆ ಕೈ ಹಾಕದ ಜೆಡಿಎಸ್ ಹಾಲಿ ಶಾಸಕರು ಇರುವ ಕ್ಷೇತ್ರಗಳಿಗೆ ಮಣೆ ಹಾಕಿದೆ. ಅಲ್ಲದೆ, ಮೈಸೂರು ಭಾಗದಲ್ಲಿ ಹೊಸ ಯುವ ನಾಯಕರಿಗೆ ಅವಕಾಶ ಕಲ್ಪಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
ಹಾಗೆ ನೋಡಿದರೆ ಜೆಡಿಎಸ್ ತನ್ನ ಅಧಿಪತ್ಯದಲ್ಲಿರುವ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ತಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ನಿಂದ ಎಚ್.ಸಿ.ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಹಾಗೂ ಬಿಜೆಪಿಯಿಂದ ಭಾರತೀಶಂಕರ್ ಟಿಕೆಟ್ಗೆ ಪ್ರಯುತ್ನಿಸುತ್ತಿದ್ದಾರೆ. ಸದ್ಯ ಹುಣಸೂರಿನಲ್ಲಿ ಕಾಂಗ್ರೆಸ್ನ ಎಚ್.ಪಿ.ಮಂಜುನಾಥ್ ಶಾಸಕರಾಗಿದ್ದಾರೆ. ಇವರಿಗೆ ಟಾಂಗ್ ನೀಡುವ ಸಲುವಾಗಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಆ ಮೂಲಕ ಜಿ.ಟಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ಮುನಿಸು ಸದ್ಯಕ್ಕೆ ನಿವಾರಣೆಯಾದಂತಾಗಿದೆ.