'I am trapped' ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಹಿಂದಿನ ಅರ್ಥವೇನು?
ಬೆಂಗಳೂರು, 05: ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ, ಮೈತ್ರಿ ಸರ್ಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾಸ್ವಾಮಿ ಅವರು, ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಎಚ್ಡಿಕೆ ಕೊಟ್ಟಿರುವ ಹೇಳಿಕೆಯಲ್ಲಿ ಎರಡು ಪ್ರಮುಖ ವಿಚಾರಗಳು ಮಹತ್ವ ಪಡೆದುಕೊಂಡಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಎಚ್ಡಿಕೆ ಕೊಟ್ಟಿರುವ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸೃಷ್ಟಿಸುವ ಸಾಧ್ಯತೆಗಳಿವೆ. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕುಮಾರಸ್ವಾಮಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುರಿತು ಹೇಳಿರುವ ಮಾತು ಹಾಗೂ ಬಿಜೆಪಿಯವರು ನನಗೆ ಇಷ್ಟೊಂದು ತೊಂದರೆ ಕೊಟ್ಟಿರಲಿಲ್ಲ ಎಂಬ ಹೇಳಿಕೆ ಕುತೂಹಲಕ್ಕೆ ಕಾರಣವಾಗಿವೆ.
ಅಷ್ಟಕ್ಕೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಟ್ರ್ಯಾಪ್ ಆಗಿದ್ದು ಹೇಗೆ? ಟ್ರ್ಯಾಪ್ ಆಗಿದ್ದು ಯಾಕೆ? ಎಲ್ಲದರ ಕುರಿತು ಇಲ್ಲಿದೆ ಮಾಹಿತಿ.
ನಾನು ಟ್ರ್ಯಾಪ್ ಆಗಿದ್ದೇನೆ!
ರಾಜ್ಯ ಬಿಜೆಪಿ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿರುವ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡುವ ಸಾಧ್ಯತೆಯಿದೆ. ಇದೇ ಸಂರ್ಭದಲ್ಲಿ, ನನ್ನನ್ನು ಟ್ರ್ಯಾಪ್ ಮಾಡಲಾಗಿದೆ. I am trapped ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗೆ ಹೇಳುವುದಕ್ಕೂ ಅವರು ದೊಡ್ಡ ಕಾರಣ ಕೊಟ್ಟಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಎಮೋಶನಲ್ ಟ್ರ್ಯಾಪ್ ಜೆಡಿಎಸ್ ಶಕ್ತಿ ಕಡಿಮೆಯಾಗಲು ಕಾರಣ ಎಂದು ಎಚ್ಡಿಕೆ ಹೊಸ ಬಾಂಬ್ ಹಾಕಿದ್ದಾರೆ. ಜಾತ್ಯತೀತ ಶಕ್ತಿಗಳೊಂದಿಗೆ ಹೋಗಲು ದೇವೇಗೌಡರು ತಮ್ಮ ಮೇಲೆ ಒತ್ತಡ ಹಾಕಿದ್ದರು. ಅದರಿಂದಾಗಿ ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಬೇಕಾಯ್ತು. ಮುಂದೆ ಅದೇ ನಮ್ಮ ಪಕ್ಷದ ಶಕ್ತಿ ಕಡಿಮೆಯಾಗಲು ಕಾರಣವಾಯಿತು ಎಂಬುದು ಕುಮಾರಸ್ವಾಮಿ ಅವರ ಹೇಳಿಕೆಯ ಅರ್ಥ ಎಂದು ವಿಶ್ಲೇಷಣೆ ಮಾಡಲಾಗಿದೆ.
ಕಣ್ಣೀರು ಹಾಕಿದ್ದೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುನ್ನಾರದಿಂದ ನಾನು ಟ್ರ್ಯಾಪ್ ಆಗಿದ್ದೇನೆಂದು ಎಚ್ಡಿಕೆ ಹೇಳಿದ್ದಾರೆ. ತಮ್ಮ ಹೆಸರು ಕೆಡಿಸಲೆಂದೆ ಸಿದ್ದರಾಮಯ್ಯ ಅವರು ಹುನ್ನಾರ ಮಾಡಿದ್ದರು. ಹೀಗಾಗಿಯೇ ಮೈತ್ರಿ ಸರ್ಕಾರ ರಚಿಸಿದ ಒಂದು ತಿಂಗಳಿನಲ್ಲಿಯೇ ನಾನು ಕಣ್ಣೀರು ಹಾಕಿದ್ದು.
ಹಿಂದೆ ಬಿಜೆಪಿಯವರು ಆ ಮಟ್ಟಿನ ದ್ರೋಹವನ್ನು ನನಗೆ ಮಾಡಿರಲಿಲ್ಲ. ಅಷ್ಟೊಂದು ದ್ರೋಹವನ್ನು ಸಿದ್ದರಾಮಯ್ಯ ಅವರು ನನಗೆ ಮಾಡಿದ್ದಾರೆ. ಬಿಜೆಪಿಯೊಂದಿಗೆ ಹೋಗಿದ್ದರೆ ನಾನು ಇಂದಿಗೂ ಮುಖ್ಯಮಂತ್ರಿ ಆಗಿಯೇ ಇರುತ್ತಿದ್ದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ಸಿದ್ದರಾಮಯ್ಯ ಹುನ್ನಾರ
ಕುಮಾರಸ್ವಾಮಿ ಸಿಎಂ ಆಗಿದ್ದರೆ ನಮಗೇನೂ ಸಿಗುವುದಿಲ್ಲ. ಯಡಿಯೂರಪ್ಪ ಅವರು ಸಿಎಂ ಆದಲ್ಲಿ ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರು. ಮೈತ್ರಿ ಸರ್ಕಾರ ಕೆಡವಿ ಆರು ತಿಂಗಳಲ್ಲಿ ತಾವೇ ಸಿಎಂ ಆಗಬೇಕು ಎಂಬುದು ಸಿದ್ದರಾಮಯ್ಯ ಅವರ ಯೋಜನೆಯಾಗಿತ್ತು. ಅದಕ್ಕಾಗಿಯೇ ಮೈತ್ರಿ ಸರ್ಕಾರ ಪತನವಾಯ್ತು. ಆದರೆ ಸರ್ಕಾರ ಪತನವಾಗುವುದಕ್ಕೂ ಮೊದಲು ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಟ್ಟಿದ್ದೆ ಎಂದು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.
ಕದ್ದು ಮುಚ್ಚಿ ಸಿದ್ದು ಭೇಟಿ
ಕಳೆದ 12 ವರ್ಷಗಳಲ್ಲಿ ಗಳಿಸಿಕೊಂಡಿದ್ದ ಗೌರವವನ್ನು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡುವ ಮೂಲಕ ಹಾಳು ಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಯಾರನ್ನು ಕದ್ದುಮುಚ್ಚಿ ಭೇಟಿ ಮಾಡಿದ್ದಾರೆ? ಯಾವಾಗ ಭೇಟಿ ಮಾಡಿದ್ದಾರೆ? ಎಂಬುದು ನನಗೆ ಗೊತ್ತಿಲ್ಲವೇ? ನಾನು ಎಲ್ಲರನ್ನೂ ನೇರವಾಗಿ ಭೇಟಿ ಮಾಡುತ್ತೇನೆ.
ಬೆಳಗ್ಗೆಯೆ ನೇರವಾಗಿ ಎಲ್ಲರ ಮುಂದೆ ಭೇಟಿ ಮಾಡುತ್ತೇನೆ. ಆದರೆ ಸಿದ್ದರಾಮಯ್ಯ ಅವರ ರೀತಿ ಕದ್ದುಮುಚ್ಚಿ ಭೇಟಿ ಮಾಡಲ್ಲ. ಮಾಡೋದು ನಿಲ್ಲ ಎಂದು ತಮ್ಮ ಹಾಗೂ ಯಡಿಯೂರಪ್ಪ ಅವರ ಭೇಟಿ ಕುರಿತು ಕುಮಾರಸ್ವಾಮಿ ಮಾತನಾಡಿದ್ದಾರೆ.
ಒಟ್ಟಾರೆ ಬರುವ ಸಂಕ್ರಾಂತಿ ಹೊತ್ತಿಗೆ ಜೆಡಿಎಸ್ ಪಕ್ಷವನ್ನು ಮತ್ತೆ ಹೊಸದಾಗಿ ಸಂಘಟನೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.