ಗೌರಿ ಲಂಕೇಶ್ ಅಂದ್ರೆ ಯಾರಂತ ಗೊತ್ತಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್
ಮೈಸೂರು, ಸೆಪ್ಟೆಂಬರ್ 13: "ನನಗೆ ಗೌರಿಯಾಗಲಿ, ಅವರ ತಂದೆಯಾಗಲಿ ಯಾರು ಎಂದು ತಿಳಿದಿಲ್ಲ" ಎಂದು ಆರ್ ಎಸ್ ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರನ್ನು ಗೌರಿ ಲಂಕೇಶ್ ಹತ್ಯೆ ಕುರಿತು ಪತ್ರಕರ್ತರು ಕೇಳಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ.
ಬೆಂಗಳೂರಿನಲ್ಲಿ ಮೊಳಗಿದ 'ನಾನು ಗೌರಿ, ನಾವೆಲ್ಲಾ ಗೌರಿ' ಘೋಷಣೆ
"ನನಗೆ ಗೌರಿಯಾಗಲಿ ಅವರ ತಂದೆಯಾಗಲಿ ಯಾರು ಎಂದು ತಿಳಿದಿಲ್ಲ. ಗೌರಿ ಒಂದು ವಿಚಾರಗಳನ್ನು ಇಟ್ಟುಕೊಂಡು ಬರೆಯುತ್ತಿದ್ದು, ಅದಕ್ಕೂ ನನಗೂ ಸಂಬಂಧ ಇಲ್ಲ. ಗೌರಿ ನನ್ನ ಬಗ್ಗೆ ಬರೆದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾರೇ ಆಗಲಿ ಹಿಂಸೆಯನ್ನು ಸಹಿಸಲ್ಲ. ಅದರಲ್ಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂಸೆಯನ್ನು ಸಹಿಸಲ್ಲ. ಎಲ್ಲರಿಗೂ ಬರೆಯುವ ಸ್ವಾತಂತ್ರ್ಯವಿದೆ. ಆದರೆ ಚಾರಿತ್ರ್ಯ ಹನನವಾಗುವ ರೀತಿಯಲ್ಲಿ ಯಾರೂ ಬರೆಯಬಾರದು."
"ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೈಚಾರಿಕ ಹೋರಾಟವನ್ನು ನಡೆಸುತ್ತದೆಯೇ ಹೊರತು ದೈಹಿಕ ಹೋರಾಟವನ್ನು ಒಪ್ಪುವುದಿಲ್ಲ. ನಮ್ಮದು ಎಡವೂ ಅಲ್ಲ ಬಲವೂ ಅಲ್ಲ, ಕೇವಲ ರಾಷ್ಟ್ರೀಯ ವಾದವೊಂದೇ. ದೇಶದ, ಜನರ ಹಿತಕ್ಕಾಗಿ ನಾವು ಏನು ಬೇಕಿದ್ದರೂ ಮಾಡುತ್ತೇವೆ. ಬುದ್ಧಿ ಜೀವಿಗಳು ದೇಶದ ಹಿತ ಮರೆತು ವಿದೇಶ ಸಂಸ್ಕೃತಿ ಬೆಳೆಸಲು ಹೋಗುತ್ತಾರೆ" ಎಂದರು.
ಮಕ್ಕಳ ಬಿಸಿಯೂಟಕ್ಕೆ ಕೊಳ್ಳಿಯಿಟ್ಟದ್ದು ಸಿದ್ದರಾಮಯ್ಯ
ಮಕ್ಕಳ ತುತ್ತು ಅನ್ನಕ್ಕೂ ಕಲ್ಲು ಹಾಕಿ, ಅವರ ಬಿಸಿಯೂಟಕ್ಕೆ ಕೊಳ್ಳಿಯಿಟ್ಟ ಸಿಎಂ ಸಿದ್ದರಾಮಯ್ಯ ಎಂದಿಗೂ ಅಭಿವೃದ್ಧಿ ಕಾಣುವುದಿಲ್ಲ. ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ವಿಚಾರದಲ್ಲಿ ಆಟವಾಡಬಾರದು ಎಂದು ಸಹ ಅವರು ಪ್ರತಿಕ್ರಿಯಿಸಿದರು..
'ಭಿಕ್ಷಾಂದೇಹಿ' ಎಂಬ ಸಾಮಾಜಿಕ ಅಭಿಯಾನದ ಮೂಲಕ ಹಲವಾರು ನಾಗರಿಕರಿಂದ 555ಕ್ಕೂ ಅಧಿಕ ಅಕ್ಕಿ ಚೀಲಗಳನ್ನು ಸಂಗ್ರಹಿಸಲಾಗಿದ್ದು, ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಶಾಲಾ ಆಡಳಿತಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ಕಾರ ಮೂಕಾಂಬಿಕಾ ದೇವಸ್ಥಾನದ ನಿಧಿಯಿಂದ ಮಕ್ಕಳ ಬಿಸಿಯೂಟಕ್ಕೆ ಬರುತ್ತಿದ್ದ ಅಕ್ಕಿಯನ್ನು ನಿಲ್ಲಿಸಿರುವುದು ಅಕ್ಷಮ್ಯ ಅಪರಾಧ. ಎಲ್ಲರಿಗೂ ಭಾಗ್ಯ ಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಚಿಕ್ಕ ಮಕ್ಕಳಿಗೆ ಅನ್ನ ನೀಡುವುದನ್ನೇ ನಿಲ್ಲಿಸಿದೆ. ಇದು ಸರಿಯಲ್ಲ ಎಂದರು.
ದೇವಸ್ಥಾನದಲ್ಲಿ ಭಕ್ತರು ನೀಡಿದ್ದ ಒಂದು ನಿಧಿಯಲ್ಲಿ ಬೇರೆಯವರಿಗೆ ನೀಡುವ ಕುರಿತ ಅನುಮತಿಯಿದ್ದು, ಶಾಲೆಗೆ ಬಿಸಿಯೂಟಕ್ಕೆ ಅಕ್ಕಿ ನೀಡುತ್ತಿತ್ತು. ಅದರಲ್ಲೂ ಶಿಕ್ಷಣದ ಪಾತ್ರ ಸಮಾಜದಲ್ಲಿ ದೊಡ್ಡದು. ಶಿಕ್ಷಣಕ್ಕಾಗಿ ಬರುವ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ ಮೂಲಕ ತಪ್ಪಿನ ಹೆಜ್ಜೆಯನ್ನಿರಿಸಿದೆ ಇದನ್ನು ಯಾರೂ ಒಪ್ಪಲ್ಲ ಎಂದರು.