ಕೂಲಿ ನೀಡಿದ ನಂಜನಗೂಡು ಜನತೆಗೆ ಧನ್ಯವಾದ: ಸಿಎಂ
ನಂಜನಗೂಡಿನ ಜನರಲ್ಲಿ ಕೂಲಿಕೊಡುವಂತೆ ಕೇಳಿದ್ದೆ, ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕೂಲಿ ನೀಡಿದ ಜನರಿಗೆ ಧನ್ಯವಾದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಏಪ್ರಿಲ್ 27 : 'ಉಪ ಚುನಾವಣೆ ಪ್ರಚಾರದ ವೇಳೆ ನನ್ನನ್ನು ಅಯೋಗ್ಯ ಮುಖ್ಯಮಂತ್ರಿ ಎಂದು ಟೀಕಿಸುವಾಗ ನಿಮ್ಮ ಪಿತ್ತ ಎಲ್ಲಿಗೆ ಏರಿತ್ತು?' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಪಕ್ಷದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಂಜನಗೂಡಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಾನೂ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಸೋತ ಬಳಿಕ ಜನರು ಕೊಟ್ಟ ತೀರ್ಪನ್ನು ಮರ್ಯಾದೆಯಿಂದ ಒಪ್ಪಿಕೊಳ್ಳುವುದು ಸಜ್ಜನರ ಗುಣ. ಬಿಜೆಪಿಯವರು ಇಲ್ಲಿ ಸೋತಿದ್ದಾರೆ. ಆದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.[ದೇವೇಗೌಡರಿಗೆ ಮತ್ತೊಮ್ಮೆ ಸಿದ್ದು ಕೃತಜ್ಞತೆ ಹೇಳಿದ್ದೇಕೆ?]
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳೇ ಹೊರತು ಚುನಾವಣೆಗೆ ನಿಲ್ಲುವವರು, ಶಾಸಕರು, ಮಂತ್ರಿಗಳಲ್ಲ ಎಂಬ ಸಾಮಾನ್ಯ ಜ್ಞಾನವನ್ನು ರಾಜಕೀಯದಲ್ಲಿ ಅರ್ಥ ಮಾಡಿಕೊಳ್ಳಬೇಕು. ಜನರೇ ನಮ್ಮ ಮಾಲೀಕರು. ಅವರು ಕೊಡುವ ತೀರ್ಪನ್ನು ಒಪ್ಪಬೇಕು. ಅದು ಬಿಟ್ಟು ಚುನಾವಣೆಗೆ ಮುನ್ನ ಒಂದು, ಫಲಿತಾಂಶ ಬಂದ ಬಳಿಕ ಮತ್ತೊಂದು ಮಾತು ಹೇಳುವವರಿಗೆ ಮತದಾರರ ಬಗ್ಗೆ ಗೌರವ ಇರುವುದಿಲ್ಲ ಎಂದು ಸಿದ್ದರಾಮಯ್ಯ ಕಟುವಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು.[ದೇವೇಗೌಡರಿಗೆ ಮತ್ತೊಮ್ಮೆ ಸಿದ್ದು ಕೃತಜ್ಞತೆ ಹೇಳಿದ್ದೇಕೆ?]
ಯಡಿಯೂರಪ್ಪ ಮಾತೆತ್ತಿದರೆ ಮಿಷನ್ 150 ಎನ್ನುತ್ತಿದ್ದರು. ಆ ರೀತಿ ಹೇಳಲು ಶಾಸಕರು ಅವರ ಜೇಬಿನಲ್ಲಿದ್ದಾರೆಯೇ? ಹೀಗೆ ಮಾತನಾಡುವವರು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದರು.[ವಿಶ್ವನಾಥ್ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ]

ಯಡಿಯೂರಪ್ಪ ಅವರಿಗೆ ಜನ ಪಾಠ ಕಲಿಸಿದ್ದಾರೆ!
ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ. ಬಡತನ, ನಿರುದ್ಯೋಗ, ದಲಿತರು, ಹಿಂದುಳಿದವರು, ಮಹಿಳೆಯರ ಬಗ್ಗೆ ಗೌರವ ಇಲ್ಲ. ಈ ನಿಮ್ಮ ಯಡಿಯೂರಪ್ಪ ಸಿಎಂ ಆಗಬೇಕಾದರೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಆದರೆ ನಂಜನಗೂಡು ಕ್ಷೇತ್ರದ ಮತದಾರರು ಯಡಿಯೂರಪ್ಪ ನಮ್ಮವರಲ್ಲ ಎಂದು ಸಾಬೀತು ಮಾಡಿದ್ದಾರೆ, ಅವರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಮುಖ್ಯಮಂತ್ರಿಗಳು ಜನರಿಗೆ ಕೃತಜ್ಞತೆ ಅರ್ಪಿಸಿದರು.[ಮೇ 10 ರಂದು ಎಚ್.ವಿಶ್ವನಾಥ್ ಜೆಡಿಎಸ್ ಗೆ?!]

ಬಿಜೆಪಿಯವರ ಮಾತು ನೆನಪಿಸುತ್ತಿದ್ದೇನೆ
ಇದು ಸ್ವಾಭಿಮಾನ ಮತ್ತು ದುರಹಂಕಾರದ ನಡುವಣ ಚುನಾವಣೆ. ನನಗೂ ಸಿದ್ದರಾಮಯ್ಯ ಗೂ ನಡೆಯುತ್ತಿರುವ ಯುದ್ಧ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಿದ್ದರು. ಚುನಾವಣೆಯಲ್ಲಿ ಸೋತರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾದರೆ ಸಿಎಂ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು. ಅವರು ರಾಜಕೀಯದಿಂದ ನಿವೃತ್ತಿ ಆಗಲಿ ಎಂದು ನಾನು ಬಯಸುವುದಿಲ್ಲ. ಆದರೆ ಅವರ ಮಾತುಗಳನ್ನು ನೆನಪು ಮಾಡಿಕೊಡುತ್ತಿದ್ದೇನೆ ಅಷ್ಟೆ ಎಂದು ಸಹ ಸಿಎಂ ಹೇಳಿದರು.[ನಂಜನಗೂಡು: ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?]

ಮತದಾರರು ಕೂಲಿ ನೀಡಿದ್ದಾರೆ
ನಾವು ಕೆಲಸ ಮಾಡಿದ್ದೇವೆ. ಮತದ ರೂಪದಲ್ಲಿ ಕೂಲಿ ಕೊಡಿ ಎಂದು ಕೇಳಿಕೊಂಡಿದ್ದೆವು. ಕೂಲಿ ಕೊಟ್ಟಿರುವ ಮತದಾರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಈ ಚುನಾವಣೆ ಸೆಮಿಫೈನಲ್. ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದರು. ಈಗ ಅವರು ಆ ಮಾತು ಹೇಳುವುದಿಲ್ಲ. ಹಣ, ಹೆಂಡ ಹಂಚಿ ಚುನಾವಣೆ ಗೆದ್ದಿದ್ದಾರೆ ಎಂದು ಹೇಳುತ್ತಿದ್ದಾರೆ.

ಹಣದಿಂದ ಗೆಲ್ಲುವುದಾದರೆ ಟಾಟಾ. ಬಿರ್ಲಾ ಗೆಲ್ಲುತ್ತಿದ್ದರು!
ಹಣ ಪಡೆದು ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಮತದಾರರಿಗೆ ಅವಮಾನ ಮಾಡಿದ್ದಾರೆ. ಹಣ ಹಂಚಿ ಚುನಾವಣೆ ಗೆಲ್ಲುವಂತಿದ್ದರೆ ಟಾಟಾ, ಬಿರ್ಲಾ, ಅಂಬಾನಿಗಳು ಎಂದೋ ಗೆಲ್ಲುತ್ತಿದ್ದರು.

ದೇವೇಗೌಡರಿಗೆ ಧನ್ಯವಾದ
ಜಾತ್ಯತೀತ ಜನತಾದಳದ ವರಿಷ್ಠರಾದ ದೇವೇಗೌಡರು, ಪಕ್ಷದ ಸ್ಥಳೀಯ ಮುಖಂಡರು, ಬೆಂಕಿ ಮಹದೇವು ಅವರ ಪತ್ನಿ ರಾಜಮ್ಮ, ದಲಿತ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳಿಗೆ ಸಿಎಂ ಕೃತಜ್ಞತೆ ಸಲ್ಲಿಸಿದರು.












Click it and Unblock the Notifications