ಸ್ವರ್ಣ ಲೇಪನ ಹಗರಣ, ಸುಬ್ರಮಣ್ಯ ಅಮಾನತಿಗೆ ತಡೆ
ಬೆಂಗಳೂರು, ಜೂ.04 : ಅಂಬಾ ವಿಲಾಸ ಅರಮನೆಯ ಸ್ವರ್ಣ ಲೇಪನ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾತನುಗೊಂಡಿದ್ದ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರನ್ನು ಸೇವೆಯಲ್ಲಿ ಮುಂದುವರೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಕೆಲವು ದಿನಗಳ ಹಿಂದೆ ಮೈಸೂರು ಅರಮನೆ ಮಂಡಳಿ ಅಧ್ಯಕ್ಷೆ ಮತ್ತು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಟಿ.ಎಸ್.ಸುಬ್ರಮಣ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಸುಬ್ರಮಣ್ಯ ಅವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೇಟ್ಟಿಲೇರಿದ್ದರು. [ಟಿ.ಎಸ್.ಸುಬ್ರಮಣ್ಯ ಅಮಾನತು]

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಅಮಾನತು ಆದೇಶಕ್ಕೆ ತಡೆ ನೀಡಿದ್ದು, ಸುಬ್ರಮಣ್ಯ ಅವರನ್ನು ಸೇವೆಯಲ್ಲಿ ಮುಂದುವರೆಸುವಂತೆ ಆದೇಶ ನೀಡಿದೆ. ಸ್ವರ್ಣ ಲೇಪನ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. [ಅಂಬಾವಿಲಾಸ ಅರಮನೆ ಚಿನ್ನದ ಲೇಪನದಲ್ಲಿ ಅಕ್ರಮ]
ಪ್ರಕರಣದ ವಿವರ : ಅಂಬಾವಿಲಾಸ ಅರಮನೆಯ ಒಳಭಾಗದಲ್ಲಿ 2011ರಲ್ಲಿ ಸ್ವರ್ಣ ಲೇಪನ ಕಾಮಗಾರಿಗೆ 55 ಲಕ್ಷ, 2012 ರಲ್ಲಿ 24 ಲಕ್ಷ ಮತ್ತು 2013ರಲ್ಲಿ 3.65 ಕೋಟಿ ಪಾವತಿ ಮಾಡಲಾಗಿದೆ. ಆದರೆ, ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಅರಮನೆ ಮಂಡಳಿಯ ಅಧಿಕಾರಿಗಳು ಕಾಮಗಾರಿ ಸಮರ್ಪಕವಾಗಿ ನಡೆದಿದೆ ಎಂದು ಹಣ ಬಿಡುಗಡೆ ಮಾಡಿದ್ದರು.
ಲಖನೌದಲ್ಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಸಂಶೋಧನೆ ಮತ್ತು ಸಂರಕ್ಷಣಾ ಪ್ರಯೋಗಾಲಯ ಸ್ವರ್ಣ ಲೇಪನ ಕಾಮಗಾರಿ ಕಳಪೆಯಾಗಿದೆ ಎಂದು ವರದಿ ನೀಡಿತ್ತು. ಈ ಪ್ರಕರಣದ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications