ಮೈಸೂರಿಗೆ ಬರುವ ಪ್ರವಾಸಿಗರು ನೋಡಲೇಬೇಕಾದ ತಾಣಗಳು ಇವು!
ಮೈಸೂರು, ಸೆಪ್ಟೆಂಬರ್ 18 : ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಮೈಸೂರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದೇಶವಿದೇಶದ ಜನರು ಇಲ್ಲಿಗೆ ಭೇಟಿ ನೀಡಿ ಖುಷಿಯಿಂದ ಹಿಂತಿರುಗುತ್ತಾರೆ. ಇಲ್ಲಿನ ವಾತಾವರಣ, ತಿಂಡಿ ತಿನಿಸುಗಳು. ಪ್ರವಾಸಿ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಇನ್ನು ಮೈಸೂರು ಸಂಸ್ಥಾನವನ್ನಾಳಿದ ಅರಸರು ಇಲ್ಲಿಗೆ ನೀಡಿರುವ ಕೊಡುಗೆ ಅಪಾರ. ಅಂತಹ ಮೈಸೂರಿನ ಸುತ್ತಮುತ್ತ ಕೆಲವು ಜಾಗಗಳ ಪರಿಚಯ ಇಲ್ಲಿದೆ.
ಕೃಷ್ಣರಾಜಸಾಗರ:
ಕೃಷ್ಣ ರಾಜ ಸಾಗರವನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದನ್ನು ನಿರ್ಮಿಸುವ ಸಮಯದಲ್ಲಿ ಮೈಸೂರು ದಿವಾನರೂ ಆಗಿದ್ದು ಸರ್. ಎಂ.ವಿಶ್ವೇಶ್ವರಯ್ಯ ನವರು ಸಾಗರದ ಹಿಂಭಾಗದಲ್ಲಿ ಸಸ್ಯೋದ್ಯಾನವನ ಮತ್ತು ಸಂಗೀತ ಕಾರಂಜಿಯನ್ನು 1927 ರಲ್ಲಿಯೇ ಪ್ರಾರಂಭಿಸಿ 1932 ರಲ್ಲಿ ಪೂರ್ಣಗೊಳಿಸಿರುತ್ತಾರೆ.
ಈ ಸಸ್ಯತೋಟವು 3 ಹಂತಗಳ ನೀರಿನ ಹಾಗೂ ಕಾರಂಜಿ ಗಳಿಂದ ಕೂಡಿರುತ್ತದೆ ಮತ್ತು ಫಿಕಸ್ ಮರಗಳು, ಘೋಲಿಯೇಜ್ ಪ್ಲಾಂಟ್ ಗಳೊಳಗೊಂಡಂತೆ ಪ್ಲಮೇರಿಯಾ ಮತ್ತು ಯ್ಯೂಫೋರ್ಬಿಯಾ ಹಾಗೂ ಹೂಗಳು ನೃತ್ಯ ಕಾರಂಜಿಗಳಿಂದ ಕೂಡಿರುತ್ತದೆ. ಈ ಸಂಗೀತ ಕಾರಂಜಿಯು ಬಣ್ಣ ಬಣ್ಣಗಳಿಂದ ಕೂಡಿದ್ದು ಬಹಳ ರಮಣೀಯವಾಗಿ ಪ್ರೇಕ್ಷಕರ ಆಕರ್ಷಿತವಾಗಿದೆ. ಮತ್ತು ಸಂಜೆಯ ವೇಳೆ ಈ ಬೃಂದಾವನಕ್ಕೆ ಒಳ್ಳೆಯ ದೀಪಾಲಂಕಾರಗೊಳಿಸಲಾಗಿರುತ್ತದೆ.

ರಂಗನತಿಟ್ಟು ಪಕ್ಷಿಧಾಮ
ರಂಗನ ತಿಟ್ಟು ಪಕ್ಷಿಧಾಮವು ಮೈಸೂರಿನಿಂದ 19 ಕಿ.ಮೀ ಮತ್ತು ಶ್ರೀರಂಗ ಪಟ್ಟಣದಿಂದ 4 ಕಿ.ಮಿ ದೂರದಲ್ಲಿದೆ. ಹಿಂದೂ ದೇವರಾದ ಶ್ರೀ ಮಹಾ ವಿಷ್ಣುವ ಅಪರಾವತಾರವಾದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಹಾಯಾರ್ಥವಾಗಿ ಈ ಪಕ್ಷಿದಾಮವನ್ನು ಕಾವೇರಿ ನದಿಯ ದಡದಲ್ಲಿ ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಆರು ದ್ವೀಪಗಳ ಮಾದರಿಯಲ್ಲಿ 1940 ರಲ್ಲಿ ನಿರ್ಮಿಸಲಾಗಿದೆ.

ತರಹೇವಾರಿ ಪಕ್ಷಿಗಳು
ಈ ಪಕ್ಷಿಧಾಮವು ವಿವಿಧ ಜಾತಿಯ ಮಮ್ಮಲ್ಸ್ ಮತ್ತು ಆಗಂತುಕ ಪಕ್ಷಿಗಳನ್ನೊಳಗೊಂಡಿರುತ್ತದೆ. ಇವುಗಳನ್ನು ಬೊನ್ನೆಟ್ ಮಾಕ್ಯೆ ಮತ್ತು ಇಂಡಿಯನ್ ಗ್ರೇ ಮೂಂಗೂಸ್ ಮಾದರಿಯ ಸಾಮಾನ್ಯ ಸಣ್ಣ ಮಮ್ಮಲ್ಸ್, ಮಾನಿಟರ್ ಹಲ್ಲಿಗಳು ಮತ್ತು ಸಿವೆಟ್. ಮಾರ್ಷ ಮೊಸಳೆಯನ್ನು ಮಗ್ಗರ್ ಮೊಸಳೆಗಳು ಒಲಸೇ ಬಂದಿರುವ ನೀರಿನ ಪಕ್ಷಿಗಳು ಮತ್ತು ಬಣ್ಣ ಬಣ್ಣದ ಸ್ವಾರ್ಕ್, ಏಷ್ಯನ್ ಒಪನ್ ಬಿಲ್ ಸ್ವಾರ್ಕ್, ಕಾಮನ್ ಸ್ವೂನ್ ಬಿಲ್, ಕಪ್ಪು ತಲೆಯ ಇಬಿಸ್, ಬಿಳಿ ಇಬಿಸ್, ಸಣ್ಣ ಸೀಟಿ ಬಾತು ಕೋಳಿ, ಇಂಡಿಯನ್ ಶ್ಯಾಗ್, ಸ್ವಾರ್ಕ್ ಬಿಲ್ ಡ್ ಕಿಂಗ್ ಫಿಷರ್ ಮತ್ತು ಸಾಮಾನ್ಯ ಪಕ್ಷಿಗಳಾದ ಇಗ್ರೆಟ್ಸ್, ಕಾರವೊರೆಂಟ್ಸ್, ಓರಿಯೆಂಟಲ್ ಡಾರ್ಟರ್ ಮತ್ತು ಹೆರಾನ್ಸ್ ಮುಂತಾದವುಗಳು ಈ ಪಕ್ಷಿದಾಮದಲ್ಲಿ ಪ್ರೇಕ್ಷಕರ ಮನಸ್ಸಿಗೆ ಬಹಳ ಮುದ ನೀಡುತ್ತವೆ.

ಬಂಡೀಪುರ
ಗುಂಡ್ಲುಪೇಟೆ ತಾಲ್ಲೂಕಿನ ಒಂದು ಗುಂಡ್ಲು ಗ್ರಾಮ. ಇದು 1941 ರಿಂದ ವೇಣುಗೋಪಾಲ ವನ್ಯಮೃಗ ಉದ್ಯಾನವನದ ಒಂದು ಭಾಗವಾಗಿ ಪರಿಗಣಿತವಾಗಿದೆ. ಸ್ವಾಭಾವಿಕವಾಗಿ ಎಲೆ ಉದುರುವ ಮರದ ಕಾಡು ಇಲ್ಲಿಯ ಮುಖ್ಯ ಸಸ್ಯವರ್ಗ. ಸವನ್ನ ಕಾಡಿನಲ್ಲಿರುವ ಹಾಗೆ ಇಲ್ಲಿ ತೇಗ, ಮತ್ತಿ, ದಿಂಡಲು, ಹೊನ್ನೆ, ಜಾಲಾರಿ, ಯತಿಗ, ಬೀಟೆ, ತಡಸಲು, ನೇರಳೆ, ಬೂರುಗ ಮತ್ತು ತಾರೆ ಮರಗಳು ಅಲ್ಲಲ್ಲಿ ಗುಂಪಾಗಿ ಬೆಳೆದು ಕಾಡಿನ ಬಹುಭಾಗವನ್ನು ಆಕ್ರಮಿಸಿವೆ.

ಬಂಡೀಪುರದ ವನ್ಯಮೃಗಗಳು
ಕಾಡಾನೆಗಳು ಬಂಡೀಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಕೆಸರುಗುಂಡಿಯ ಮತ್ತು ಸಣ್ಣ ಝರಿಗಳ ಅಂಚಿನಲ್ಲಿ ದಟ್ಟವಾಗಿ ಬೆಳೆದಿರುವ ಬಿದಿರುಮೆಳೆ ಸಣ್ಣ ಪ್ರಾಣಿಗಳಿಗೆ ವಾಸಸ್ಥಾನ. ಬಂಡೀಪುರದ ವನ್ಯ ಮೃಗಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವುದು ಆನೆ, ಕಾಡು ಕೋಣ, ಚುಕ್ಕೆಜಿಂಕೆ, ಬಗಳುವ ಜಿಂಕೆ, ಕಾಡುಹಂದಿ, ಕಾಡುನಾಯಿ, ನರಿ, ಮುಂಗುಸಿ, ಕಪ್ಪು ಮುಖದ ಮುಸುವ. ಆಗಾಗ ಕಾಣಿಸಿಕೊಳ್ಳುವ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡುಕುರಿ, ಕರಡಿ, ಕಾಡುಬೆಕ್ಕು ಮುಖ್ಯವಾದವು. ಜೊತೆಗೆ ನವಿಲು, ಹಸಿರು ಪಾರಿವಾಳ, ಮುಳ್ಳುಹಂದಿ, ಹೆಬ್ಬಾವು, ನಾಗರಹಾವು, ಹಸಿರು ಹಾವು, ಮಂಡಲದ ಹಾವು ಮೊದಲಾದವನ್ನು ಕಾಣಬಹುದು.

ಬಿಳಿಗಿರಿರಂಗನ ಬೆಟ್ಟ
ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯ ಪ್ರಕೃತಿ ಎಂದೆಂದೂ ಮನಕ್ಕೆ ಮುದ ನೀಡುತ್ತದೆ. ಅದರಲ್ಲೂ ದಟ್ಟ ಹಸಿರಿನ ಕಾನನ ಇನ್ನೂ ಸೊಗಸು. ಬನ್ನಿ, ಕಣ್ಣಿಗೆ ತಂಪನ್ನೀಯುವ ಅಂದ-ಚಂದದ ಬಿಳಿಗಿರಿರಂಗನ ಬೆಟ್ಟವನ್ನೂ, ಮನಕ್ಕೆ ನೆಮ್ಮದಿ ನೀಡುವ ಬಿಳಿಗಿರಿ ರಂಗನಾಥಸ್ವಾಮಿಯನ್ನು ನೆನೆಯೋಣ. ಇಲ್ಲಿನ ಕಾಡಿನ ಬಯಲಿನಷ್ಟೇ ದೇವಾಲಯವೂ ಸುಂದರ. ಕಾಡಿನಲ್ಲಿರುವ ಈ ಗುಡಿಯು ಪ್ರಕೃತಿ ತಾಣವಾಗಿ ಬಯಲಿನಂತೆಯೇ ಇದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಆಗ್ನೇಯಕ್ಕೆ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿ ಇರುವ ಬೆಟ್ಟ. ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರವಿದೆ. ಈ ಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲ ಬೆಟ್ಟ, ಶ್ವೇತಾದ್ರಿ ಎಂದೂ ಕರೆಯುತ್ತಾರೆ. ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿ ದೇವಾಲಯವಿದ್ದು ಪುಣ್ಯಕ್ಷೇತ್ರವೆನಿಸಿದೆ.

ಮಹದೇಶ್ವರ ಬೆಟ್ಟ
ಕೊಳ್ಳೇಗಾಲಕ್ಕೆ 80 ಕಿ ಮೀ ಹಾಗೂ ಮೈಸೂರಿನಿಂದ 150 ಕಿ ಮೀ ದೂರದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ. ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ.












Click it and Unblock the Notifications