ಸಿದ್ದು ತವರು ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಮೈಸೂರು, ಫೆ.10 : ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿ ಸಿಎಂ ತವರು ನೆಲದಲ್ಲಿ ಅವರಿಗೆ ಸೆಡ್ಡು ಹೊಡೆದಿದೆ.
ಭಾನುವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ, ಶಾಸಕರಾದ ಮಧು ಬಂಗಾರಪ್ಪ, ಚೆಲುವರಾಯಸ್ವಾಮಿ, ಎಂ.ಸಿ.ನಾಣಯ್ಯ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ, ಅಬ್ದುಲ್ ಅಜೀಂ ಮುಂತಾದವ ನಾಯಕರು ಭಾಗವಹಿಸಿದ್ದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕರ್ನಾಟಕ ಉಳಿಯಬೇಕಾದರೆ, ಜೆಡಿಎಸ್ ಪಕ್ಷ ಉಳಿಯಬೇಕು. ತಮ್ಮಲ್ಲಿ ಭಿಕ್ಷೆ ಬೇಡುತ್ತೇನೆ, ಪಕ್ಷ ಉಳಿಸಿ, ಇಲ್ಲವಾದಲ್ಲಿ ಕರ್ನಾಟಕ ಉಳಿಯದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ತಾವು ಜೈಲಿಗೆ ಹೋದ ದಿನವನ್ನು ನೆನೆದು ಕಣ್ಣೀರಿಟ್ಟರು. [ಸಿದ್ದು ತವರಲ್ಲಿ ಕಣ್ಣೀರಿಟ್ಟ ದೇವೇಗೌಡ]
ಕೆಲವು ದಿನಗಳ ಹಿಂದೆ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಸಮಾವೇಶದ ಚಿತ್ರಗಳು

ನಾನು ಪ್ರಧಾನಿಯಾಗುವುದಿಲ್ಲ
ಸಮಾವೇಶ ಉದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡ ತಾವು ಮತ್ತೆ ಪ್ರಧಾನಿ ಆಗಲು ಹಾತೊರೆಯುತ್ತಿಲ್ಲ. ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಜಯಲಲಿತಾ ಯಾರು ಬೇಕಾದರೂ ಪ್ರಧಾನಿ ಆಗಲಿ. ತಮಿಳಿನಾಡಿನ ಅಮ್ಮ ಜಯಲಲಿತಾ ಪ್ರಧಾನಿ ಆದರೆ ದೇಶಕ್ಕೆ ಅಮ್ಮ ಆಗುತ್ತಾಳೆ. ಆಗ ಬಾಯಾರಿದ ರಾಜ್ಯಕ್ಕೆ ನೀರು ಕೊಡಮ್ಮ ಎಂದು ಕೇಳಬಹುದು ಎಂದು ಹೇಳುವ ಮೂಲಕ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಜಯಲಲಿತಾ ಎಂಬ ಸುಳಿವು ನೀಡಿದರು.

ಸಿದ್ದುಗೆ ಗುದ್ದು
ಜೆಡಿಎಸ್ ಪಕ್ಷದಿಂದ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸಹ ಆಗಿದ್ದಾರೆ. ಆದರೆ, ಇಂದು ಮುಖ್ಯಮಂತ್ರಿ ಆದ ಮೇಲೆ ಜೆಡಿಎಸ್ ಪಕ್ಷದ ವಿರುದ್ಧ ಮನಬಂದಂತೆ ಟೀಕಿಸುವುದು ಸರಿಯಲ್ಲ ಎಂದು ಸಮಾವೇಶದಲ್ಲಿ ಭಾವಹಿಸಿದ ವಿವಿಧ ನಾಯಕರು ಹೇಳಿದರು.

ಕುಮಾರಸ್ವಾಮಿ ಹೇಳಿದ್ದೇನು
ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ರೈತರನ್ನು ಒಕ್ಕೆಲೆಬ್ಬಿಸಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನೂರಾರು ಪೊಲೀಸರನ್ನು ನೇಮಕಮಾಡಿ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ, ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾರು ತಪ್ಪು ಮಾಡಿದ್ದಾರೆ
ಹಿಂದುಳಿದ ವರ್ಗದ ಹಲವಾರು ನಾಯಕರನ್ನು ದೇವೇಗೌಡರು ಬೆಳೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ದಶಮಾನೋತ್ಸವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯಾವ ಯೋಜನೆ ಘೋಷಿಸಿದರು. ಅಹಿಂದ ವರ್ಗದ ಜನರಿಗೆ ಜೆಡಿಎಸ್ ಅಗತ್ಯ ಸೌಲಭ್ಯವನ್ನು ಒದಗಿಸಿದೆ. ತಪ್ಪು ಮಾಡಿರುವವರು ಯಾರು? ಎಂದು ನೀವು ನಿರ್ಧರಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಎರಡು ರಾಷ್ಟ್ರೀಯ ಪಕ್ಷದ ನಾಯಕರು ದೇಶದ ಜನರ ಲಕ್ಷಾಂತರ ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಮಂತ್ರಿ ಗಿರಾಕಿ ಗೂಳಿಹಟ್ಟಿ
ಜೆಡಿಎಸ್ ಸೇರಿದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬಗ್ಗೆ ಮಾತನಾಡಿದ ವೈ.ಎಸ್.ವಿ.ದತ್ತಾ, ಗೂಳಿಹಟ್ಟಿ ಶೇಖರ್ ತನ್ನ ಶಿಷ್ಯ, ತನಗಿಂತ ಮೊದಲೇ ಮಂತ್ರಿಯಾದ ಗಿರಾಕಿ, ತಾನು ಅವನಿಗೆ ಗಣಿತದೊಂದಿಗೆ ರಾಜಕೀಯ ಪಾಠವನ್ನೂ ಹೇಳಿದ್ದೇನೆ. ಯಾವ ಕಾರಣಕ್ಕೂ ಜೆಡಿಎಸ್ ಬಿಡದಂತೆ ಹೇಳಿದ್ದೇನೆ ಎಂದರು.

ಜಾತಿವಾರು ಗಣತಿ ಕಾಂಗ್ರೆಸ್ ಸಾಧನೆಯಲ್ಲ
ಸಮಾವೇಶದಲ್ಲಿ ಭಾಗವಹಿಸಿದ್ದ ಕಡೂರು ಶಾಸಕ ವೈ.ಎಸ್.ವಿ.ದತ್ತಾ, ಜಾತಿವಾರು ಜನಗಣತಿ ಮಾಡಲು ಆದೇಶಿಸಿರುವುದು ಕಾಂಗ್ರೆಸ್ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, 1974ರಲ್ಲಿ ದೇವೇಗೌಡರು ಪ್ರತಿಪಕ್ಷ ನಾಯಕರಾಗಿದ್ದಾಗ, ಜಾತಿವಾರು ಜನಗಣತಿ ಪ್ರಯೋಜನ, ಕಲ್ಪನೆ ವಿವರಿಸಿದ್ದರು ಆ ಕುರಿತು ತಮ್ಮಲ್ಲಿ ದಾಖಲೆಗಳಿವೆ ಎಂದು ಹೇಳಿದರು.

ಕಣ್ಣೀರಿಟ್ಟ ಗೌಡರು
52 ವರ್ಷದ ರಾಜಕೀಯದಲ್ಲಿ ಸಾಕಷ್ಟು ನೋವುಂಡಿದ್ದೇನೆ. ತಾವು ಜೈಲು ಸೇರಿದಾಗ ಪತ್ನಿಗೆ ಗರ್ಭಕೋಶ ಕ್ಯಾನ್ಸರ್, ಮಗ ರೇವಣ್ಣ ಓದು ತೊರೆದು ತಾಯಿಯನ್ನು ನೋಡಿಕೊಂಡ ಘಟನೆಯನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟರು.












Click it and Unblock the Notifications