ಚುನಾವಣಾ ರಾಜಕೀಯ ಸಾಕಾಗಿದೆ, ಮತ್ತೆ ಬರಲ್ಲ ಎಂದ ವಿಶ್ವನಾಥ್
ಮೈಸೂರು, ಆಗಸ್ಟ್ 3: ಹುಣಸೂರು ಮಾಜಿ ಶಾಸಕ ಅಡಗೂರು ವಿಶ್ವನಾಥ್ ಇನ್ನು ಮುಂದೆ ತಾವು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಚುನಾವಣೆಯೆಲ್ಲ ನನಗೆ ಸಾಕಾಗಿದೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಇದು ರಾಜಕೀಯ ನಿವೃತ್ತಿಯಲ್ಲ. ಜನತೆ ನೀಡಿರುವ ರಾಜಕೀಯ ಅನುಭವಗಳನ್ನು ಸದ್ಬಳಕೆ ಮಾಡಿಕೊಳ್ಳಲು ರಾಜಕೀಯ ರಂಗದಲ್ಲಿ ಮುಂದುವರೆಯುತ್ತೇನೆ. ಈ ಹಿಂದೆ ನಾನು ತಿಳಿಸಿದಂತೆ ಅಂತರರಾಷ್ಟ್ರೀಯ ರಾಜಕೀಯ ಅಕಾಡೆಮಿ ಸ್ಥಾಪನೆಯತ್ತಲೂ ಗಮನಹರಿಸಿ ಅದಕ್ಕಾಗಿ ರಾಜಕಾರಣ ಬಳಸಿಕೊಳ್ಳುವೆ" ಎಂದು ತಿಳಿಸಿದರು.
"ಬಿಜೆಪಿ ಸೇರುವ ವಿಚಾರವನ್ನು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ್ದರೆ ಅವರನ್ನೇ ಪ್ರಶ್ನಿಸಬೇಕು. ನಾನು ಬಿಜೆಪಿ ಸೇರುವ ಬಗ್ಗೆ ವಿಚಾರವನ್ನೇ ಮಾಡಿಲ್ಲ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಸ್ಪರ್ಧೆ ಮಾಡುತ್ತಾರೆ ಎಂಬುದೂ ಊಹಾಪೋಹ" ಎಂದರು.

ರಾಜ್ಯಪಾಲರನ್ನಾಗಿ ಮಾಡುತ್ತಾರೆ ಎಂಬ ಗುಮಾನಿಗೆ ಪ್ರತಿಕ್ರಿಯಿಸಿ, "ನನಗೆ ಇನ್ನು ಅಷ್ಟು ವಯಸ್ಸಾಗಿಲ್ಲ" ಎಂದರು. ಇದೇ ಸಂದರ್ಭ, ಜೆಡಿಎಸ್ ನಿಂದ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಪ್ರಪಂಚ ವಿಶಾಲವಾಗಿದೆ. ಅತೃಪ್ತ ಶಾಸಕರೇ ಸೇರಿ ಒಂದು ಪಕ್ಷವನ್ನು ಕಟ್ಟಿದರೆ ಆಗುತ್ತೆ ಬಿಡಿ. ಹೊಸ ಪಕ್ಷ ಕಟ್ಟಬೇಕಿದೆ. ನಾನು ಚುನಾವಣೆಯಿಂದ ದೂರ ಉಳಿಯಲು ನಿರ್ಧಸಿದ್ದೇನೆ. ಆದರೆ ಇದು ರಾಜಕೀಯ ನಿವೃತ್ತಿಯಲ್ಲ" ಎಂದು ಮತ್ತೆ ಹೇಳಿ ನಗೆ ಬೀರಿದರು.
"ನಾಳೆ ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಉದ್ದೇಶಿಸಿದ್ದೇನೆ. ನನ್ನ ಜೆಡಿಎಸ್ ಸೇರ್ಪಡೆ, ನಂತರದ ಬೆಳವಣಿಗೆಗಳು, ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ, ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ, ಈ ಎಲ್ಲದರ ಬಗೆಗೂ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತೇನೆ" ಎಂದರು.












Click it and Unblock the Notifications