ಆಸ್ಪತ್ರೆಯಲ್ಲಿ ಮಾಜಿ ಹಾಗೂ ಹಾಲಿ ಕಾಂಗ್ರೆಸ್ ನಾಯಕರ ಆಕಸ್ಮಿಕ ಭೇಟಿ
ಮೈಸೂರು, ನವೆಂಬರ್ 19: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಹಿನ್ನೆಲೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಇದೇ ಸಂದರ್ಭ ಭೇಟಿ ನೀಡಿದ ಮಾಜಿ ಸಂಸದ ಆರ್. ಧ್ರುವನಾರಾಯಣ್, ಸ್ವಪಕ್ಷದ ಶಾಸಕನ ಆರೋಗ್ಯ ವಿಚಾರಿಸಿದರು. ಹುಣಸೂರು ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್, ಚುನಾವಣೆಯ ಒತ್ತಡದ ನಡುವೆಯೂ ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಯೋಗ ಕ್ಷೇಮ ವಿಚಾರಿಸಿದರು.
ಮಾಜಿ ಹಾಗೂ ಹಾಲಿ ಕಾಂಗ್ರೆಸ್ ನಾಯಕರ ಆಕಸ್ಮಿಕ ಭೇಟಿ, ಕುತೂಹಲದ ಜೊತೆಗೆ ಒಂದಿಷ್ಟು ವಿಷಯಗಳನ್ನು ಬಹಿರಂಗಪಡಿಸಿತು.

ಮಾಜಿ ಸಂಸದ ಧ್ರುವನಾರಾಯಣ್ ಹಾಗೂ ಎಚ್. ವಿಶ್ವನಾಥ್ ಆಸ್ಪತ್ರೆಯಲ್ಲಿ ಪರಸ್ಪರ ಮುಖಾಮುಖಿಯಾದಾಗ ಉಭಯ ಕುಶಲೋಪರಿಯಾಗಿ ಮಾತನಾಡಿದರು. ನಂತರ ಮಾತನಾಡಿದ ಧ್ರುವನಾರಾಯಣ್, ನಾನು ನಿಮಗೆ ಕಾಂಗ್ರೆಸ್ ಪಕ್ಷ ಬಿಡದಂತೆ ಮನವಿ ಮಾಡಿದ್ದೆ, ಆದರೂ ನೀವು ಪಕ್ಷದಿಂದ ಹೊರ ಹೋದ್ರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಾರಪ್ಪ ಪಕ್ಷ ಬಿಟ್ಟಿದ್ದು, ನಾನಲ್ಲ ಸಿದ್ದರಾಮಯ್ಯ ಪಕ್ಷ ಬಿಡಿಸಿದ್ದು. ಕಾಂಗ್ರೆಸ್ ಪಕ್ಷ ನಿಮ್ಮ ಸಿದ್ದರಾಮಯ್ಯನದು ಅಲ್ವೇನಪ್ಪ. ನಾನು ಪಕ್ಷ ಬಿಡಲಿಲ್ಲ, ಸಿದ್ದರಾಮಯ್ಯ ಬಿಡಿಸಿದರು, ಸಿದ್ದರಾಮಯ್ಯ ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು ಎಂದು ಕುಟುಕಿದರು.












Click it and Unblock the Notifications