ಖಾಲಿ ಹಾಳೆ ಮೇಲೆ ಬಡವರ ಅಕ್ಷರ, ಮೈಸೂರಿನಲ್ಲಿ ಗಿವ್ ಪೇಪರ್ ಬ್ಯಾಕ್ ಅಭಿಯಾನ
ಮೈಸೂರು,
ಮಾರ್ಚ್ 10: ಶಾಲಾ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಬಹುತೇಕ ಮಕ್ಕಳು ತಾವು ಬಳಸುತ್ತಿದ್ದ ನೋಟ್ ಬುಕ್ಗಳಲ್ಲಿ ಉಳಿಯುವ ಖಾಲಿ ಹಾಳೆಗಳನ್ನು ಮತ್ತೆ ಬಳಸುವುದೇ ಇಲ್ಲ. ಅವು ಉಪಯೋಗಕ್ಕೆ ಬಾರದೇ ಗುಜರಿ ಸೇರಿರುತ್ತವೆ ಇಲ್ಲವೋ ಕಸವಾಗುತ್ತವೆ. ಹೀಗೆ ಪ್ರತಿವರ್ಷ ಲೆಕ್ಕವಿಲ್ಲದಷ್ಟು ಖಾಲಿ ಹಾಳೆಗಳು ಪ್ರಯೋಜನಕ್ಕೆ ಬಾರದೇ ವ್ಯರ್ಥವಾಗಿ ಹೋಗುತ್ತವೆ. id="toptextpromo"> id='are-slot-1' class='oiad oi-axt oiadv'>ಆದರೆ
ಈ ಖಾಲಿ ಹಾಳೆಗಳು ಮತ್ತೊಬ್ಬ ವಿದ್ಯಾರ್ಥಿಗೆ ನೆರವಾಗುವುದಾದರೆ? ಇದೇ ಆಲೋಚನೆ "ಯೂತ್ ಫಾರ್ ಸೇವಾ" ಸಂಸ್ಥೆಗೆ ಹೊಳೆದದ್ದು. ಈ ರೀತಿ ನಿರುಪಯುಕ್ತವಾಗಿ ಬಿಸಾಡಲಾಗುವ ನೋಟ್ ಬುಕ್ ಹಾಳೆಗಳನ್ನು ಸಂಗ್ರಹಿಸಿ ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಮಕ್ಕಳಿಗೆ ವಿತರಿಸುವ ಅಪರೂಪದ ಕಾಯಕವನ್ನು ಈ ಸಂಸ್ಥೆ ನಡೆಸುತ್ತಿದೆ. id='are-slot-2' class='oiad oi-axt oiadv'>
ಹಾಳೆಗಳಲ್ಲೇ ನೋಟ್ ಬುಕ್ ತಯಾರಿಸಿ ಬಡಮಕ್ಕಳಿಗೆ ವಿತರಣೆ
ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರು ಸುತ್ತಮುತ್ತಲಿ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಈ ಅಭಿಯಾನವನ್ನು ಇದೇ ಮೊದಲ ಬಾರಿಗೆ ಮೈಸೂರು ಸೇರಿದಂತೆ ದೇಶದ 45 ನಗರಗಳಲ್ಲಿ ನಡೆಸಲು ಈ ಸಂಘಟನೆ ಮುಂದಾಗಿದೆ. ಸಮಾಜದಲ್ಲಿ ಓದುವ ಹಂಬಲವಿದ್ದರೂ, ಆರ್ಥಿಕ ಸಮಸ್ಯೆಗಳಿಂದಾಗಿ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಾರೆ. ಯಾರಾದರೂ ತಮ್ಮ ನೆರವಿಗೆ ಬಂದರೆ ಓದು ಮುಂದುವರಿಸಬಹುದೆಂಬ ಆಸೆಯೊಂದಿಗೆ ಅಕ್ಷರ ಕಲಿಯುವ ಅಸಂಖ್ಯಾತ ಮಕ್ಕಳಿಗೆ ಒಂದಿಷ್ಟು ಸಂಘ-ಸಂಸ್ಥೆಗಳು ನೆರವಿನ ಹಸ್ತ ನೀಡುತ್ತವೆ. ಹಾಗೆಯೇ ಯೂತ್ ಫಾರ್ ಸೇವಾ ಸಂಸ್ಥೆ, ಬಳಕೆಯಾಗದೆ ಉಳಿಯುವ ನೋಟ್ ಬುಕ್ ಹಾಳೆಗಳನ್ನು ಸಂಗ್ರಹಿಸಿ, ಹೊಸದಾಗಿ ಬೈಂಡಿಂಗ್ ಮಾಡಿಸಿ ನೋಟ್ ಬುಕ್ ತಯಾರಿಸಿ ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ವಿತರಿಸುತ್ತಾ ಬರುತ್ತಿದೆ.

"ಗಿವ್ ಪೇಪರ್ ಬ್ಯಾಕ್" ಅಭಿಯಾನ
ಬಳಸದೆ ನೋಟ್ ಬುಕ್ಗಳು ರದ್ದಿ ಸೇರಿ ವ್ಯರ್ಥವಾಗುವ ಬದಲು ಅವುಗಳನ್ನು ಸಂಗ್ರಹಿಸಿ, ಅಗತ್ಯವಿರುವ ಮಕ್ಕಳಿಗೆ ಸದುಪಯೋಗ ಮಾಡಿಕೊಡುವ ಸಾಹಸಕ್ಕೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ "ಗಿವ್ ಪೇಪರ್ ಬ್ಯಾಕ್" ಶೀರ್ಷಿಕೆಯಡಿಯಲ್ಲಿ ಅಭಿಯಾನ ನಡೆಸುತ್ತಾ ಬಂದಿದೆ. ಸಂಸ್ಥೆಯ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ಸಾವಿರಾರು ಕಾರ್ಯಕರ್ತರು ಕೈಜೋಡಿಸುತ್ತಾ ಬಂದಿದ್ದಾರೆ. ಕರ್ನಾಟಕದ ಗಡಿಯನ್ನು ದಾಟಿ ದೆಹಲಿ, ಅಸ್ಸಾಂ, ಒಡಿಶಾ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ವೈಎಫ್ ಎಸ್ ಕಾರ್ಯನಿರ್ವಹಿಸುತ್ತಿದೆ.

ವರ್ಷದಲ್ಲಿ 200 ಕೋಟಿಗೂ ಹೆಚ್ಚು ಕಾಗದ
ಸಂಸ್ಥೆಯ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ 200 ಕೋಟಿಗೂ ಹೆಚ್ಚು ಬಳಕೆಯಾಗದ ಕಾಗದದ ಹಾಳೆಗಳನ್ನು ಕಾಣಬಹುದಾಗಿದೆ. ಇನ್ನೂ ಒಂದು ಟನ್ ಕಾಗದವನ್ನು ಮರುಬಳಕೆ ಮಾಡುವುದರಿಂದ 17 ಮರಗಳು, 7000 ಗ್ಯಾಲನ್ ನೀರು, 380 ಗ್ಯಾಲನ್ ತೈಲ ಮತ್ತು 4000 ಕಿಲೋವ್ಯಾಟ್ ವಿದ್ಯುತ್ ಉಳಿಸಬಹುದು ಮತ್ತು ಪರಿಸರ ಸಂರಕ್ಷಣೆ ಮಾಡಬಹುದು. ಪ್ರಪಂಚದಲ್ಲಿ ಶೇ.25 ಮರುಬಳಕೆಯಾಗದ ಕಾಗದವನ್ನು ಕಾಣಬಹುದು ಎನ್ನಲಾಗಿದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯೂತ್ ಫಾರ್ ಸೇವಾ ಸಂಸ್ಥೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ, ಬಳಕೆಯಾಗದ ಹಾಳೆಗಳನ್ನು ಮರುಬಳಸಲು ತೀರ್ಮಾನಿಸಿ, ಈ ಅಭಿಯಾನ ಆರಂಭಿಸಿತು.

ಹಳೆ ಹಾಳೆ ಹೊಸ ಪುಸ್ತಕ
"ಹಳೆ ಹಾಳೆ ಹೊಸ ಪುಸ್ತಕ' ಎಂಬ ಹೆಸರಿನಲ್ಲಿ 2016ರಿಂದ ಈ ಅಭಿಯಾನವನ್ನು ಆರಂಭಿಸಲಾಯಿತು. ಅಭಿಯಾನದಲ್ಲಿ ಸಂಸ್ಥೆಯ ಸದಸ್ಯರು, ಸರ್ಕಾರಿ ಶಾಲೆಗಳು, ಅಪಾರ್ಟ್ ಮೆಂಟ್ಗಳಿಗೆ ತೆರಳಿ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಖಾಲಿ ಹಾಳೆಯಿರುವ ನೋಟ್ ಬುಕ್ಗಳನ್ನು ಸಂಗ್ರಹಿಸುತ್ತಾ ಬಂದಿದೆ. ಈವರೆಗೂ ಬೆಂಗಳೂರು ಹಾಗೂ ರಾಜ್ಯದ ಕೆಲವೇ ಭಾಗಗಳಲ್ಲಿ ಅಭಿಯಾನ ನಡೆಸುತ್ತಿದ್ದ ಸಂಸ್ಥೆ ಈ ಬಾರಿ ದೇಶದ 45 ನಗರಗಳಲ್ಲಿ ಅಭಿಯಾನ ನಡೆಸಲು ಮುಂದಾಗಿದೆ. ಸಂಸ್ಥೆಯ ಈ ಕೆಲಸಕ್ಕೆ ಓಎನ್ ಜಿಸಿ ಫೌಂಡೇಶನ್ ಸಹ ಸಾಥ್ ನೀಡಿದೆ. ಮೈಸೂರಿನಲ್ಲೂ ಅಭಿಯಾನ ನಡೆಯಲಿದ್ದು, ಮಾ.15ರಿಂದ ಏಪ್ರಿಲ್ ಕೊನೆ ವಾರದವರೆಗೆ ನೋಟ್ ಬುಕ್ಗಳ ಸಂಗ್ರಹಿಸಲಾಗುತ್ತಿದೆ. ಈ ವರ್ಷ ಭಾರತದಾದ್ಯಂತ ನಗರ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಎಂಟು ಲಕ್ಷ ನೋಟ್ ಬುಕ್ ವಿತರಿಸುವ ದೊಡ್ಡ ಗುರಿ ಹೊಂದಿದೆ. ಆಸಕ್ತರು 7349246275 ಸಂಪರ್ಕಿಸಬಹುದು ಎಂದು ವೈಎಫ್ ಸಿ ರಾಜ್ಯ ಸಂಚಾಲಕಿ ಕವಿತಾ ಪ್ರೀತಿ ತಿಳಿಸಿದ್ದಾರೆ.












Click it and Unblock the Notifications