ನೇಪಥ್ಯಕ್ಕೆ ಸೇರಿದ ಮೈಲ್ಲಾಕ್ ಚುನಾವಣಾ ಶಾಯಿ
ಚುನಾವಣೆ ಮುಗಿದ ಎಷ್ಟೋ ತಿಂಗಳವರೆಗೂ ಮಾಯವಾಗದೆ, ಮತದಾನದ ಮಹತ್ವವನ್ನೂ, ನಾಗರಿಕರ ಆದ್ಯ ಕರ್ತವ್ಯವನ್ನು ನೆನಪಿಸುತ್ತಿದ್ದ ಮೈಲ್ಲಾಕ್ ಶಾಯಿ ಇದೀಗ ನೇಪಥ್ಯಕ್ಕೆ ಸರಿಯುತ್ತಿದೆ.
ಮೈಸೂರು, ಏಪ್ರಿಲ್ 11 - ಮೈಲ್ಲಾಕ್ ಈ ಹೆಸರು ಯಾರಿಗೆ ತಾನೇ ತಿಳಿದಿಲ್ಲ? ಅಳಿಸಲಾಗದ ಶಾಯಿಯನ್ನು ನೀಡುತ್ತಿದ್ದ ಬಹುಹೆಸರಾಂತ ಮೈಸೂರು ಪೈಂಟ್ಸ್ ಆಂಡ್ ವಾರ್ನಿಶ್ ಸಂಸ್ಥೆ ಎಲ್ಲರಿಗೂ ಚಿರಪರಿಚಿತವೇ. ಇಲ್ಲಿನ ಚುನಾವಣಾ ಶಾಯಿಗೆ ಶತಮಾನಗಳ ಇತಿಹಾಸವುಂಟು. ಆದರೆ ಇನ್ನು ಮುಂದೆ ಈ ಶಾಯಿ ನೆನಪು ಮಾತ್ರ!
ಹೌದು , ದೇಶದ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ಮತದಾನ ಮುಗಿದ ನಂತರ ಮತದಾರರ ಕೈ ಬೆರಳಿಗೆ ಹಾಕಲಾಗುತ್ತಿದ್ದ ಅಳಿಸಲಾಗದ ಶಾಯಿಗೆ ಏಪ್ರಿಲ್ 9 ರ ಭಾನುವಾರ ನಡೆದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯೇ ಕೊನೆಯ ಚುನಾವಣೆ! ಏಕೆಂದರೆ ಮುಂದಿನ ದಿನಗಳಲ್ಲಿ ಅಳಿಸಲಾಗದ ಶಾಯಿಯ ಬದಲಾಗಿ ಮಾರ್ಕರ್ ಪೆನ್ನುಗಳನ್ನು ಬಳಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.[ಉಪಚುನಾವಣೆ ಮುಗೀತು, ಲೆಕ್ಕಾಚಾರ ಶುರುವಾಯ್ತು!]
ಶಾಯಿ ಬದಲಾಗಿ ಮಾರ್ಕರ್ ಪೆನ್ :
ಇಷ್ಟು ವರ್ಷಗಳ ಕಾಲ ದೇಶದ ಯಾವುದೇ ಭಾಗದಲ್ಲಿ ಚುನಾವಣೆಗಳು ನಡೆದರೂ ಅಲ್ಲಿ ಮೈಸೂರಿನ ಹೆಮ್ಮೆಯ ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಕಾರ್ಖಾನೆಯ ಅಳಿಸಲಾಗದ ಶಾಯಿ ಕಾಣಸಿಗುತ್ತಿತ್ತು. ಆದರೆ, ಇನ್ನು ಮುಂದೆ ಚುನಾವಣಾ ಆಯೋಗದ ಮನವಿ ಮೇರೆಗೆ ಅಳಿಸಲಾಗದ ಶಾಯಿಯ ಬದಲಾಗಿ ಮಾರ್ಕರ್ ಪೆನ್ನನ್ನು ಅಭಿವೃದ್ಧಿಪಡಿಸಲು ಮೈಲ್ಲಾಕ್ ಮುಂದಾಗಿದೆ.
ಮೈಲಾಕ್ ಹುಟ್ಟಿದ್ದು ಹೀಗೆ...
1936ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸಕ್ತಿಯಿಂದಾಗಿ ಮೈಲ್ಲಾಕ್ ಆರಂಭವಾಯಿತು. ಮೊದಲು ಬಣ್ಣಗಳ ತಯಾರಿಕೆಗೆ ಮಾತ್ರ ಸೀಮಿತವಾಗಿದ್ದ ಮೈಲ್ಲಾಕ್, 1956 ರಿಂದ ದೇಶದಾದ್ಯಂತ ನಡೆಯುವ ಸಾರ್ವತ್ರಿಕ ಹಾಗೂ ಉಪಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ನಂತರದ ದಿನಗಳಲ್ಲಿ ದೇಶದ ಹೊರಗೂ ಕೂಡ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿತು. ಮಲೇಷಿಯಾ, ಕಾಂಬೋಡಿಯ ಹಾಗೂ ನೇಪಾಳ ಇನ್ನಿತರ ದೇಶಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಮೈಲ್ಲಾಕ್ ಶಾಯಿ ಬಳಕೆಯಾಗುತ್ತಿದ್ದು, ಈಗಲೂ ಅದು ಮುಂದುವರಿದಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ವಿಶೇಷ ತಂತ್ರಜ್ಞಾನಹೊಂದಿದ ಪೆನ್
ಮುಂದಿನ ದಿನಗಳಲ್ಲಿ ಶಾಯಿ ಬಾಟಲಿಯ ಬದಲಾಗಿ ಅಳಿಸಲಾಗದ ಶಾಯಿಯನ್ನು ಒಳಗೊಂಡ ಮಾರ್ಕರ್ ಪೆನ್ನನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಲು ಮೈಲಾಕ್ ಸಿದ್ಧತೆ ನಡೆಸಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ನಂತರ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮಾರ್ಕರ್ ಪೆನ್ನನ್ನು ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಎ.ವೆಂಕಟೇಶ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.[ನಂಜನಗೂಡಲ್ಲಿ ಬೆಟ್ಟಿಂಗ್ ಜೋರು, ನಾವು ಗೆಲ್ಬೇಕು ಅಂತಾರೆ ಜನರು!]
ಉಪಚುನಾವಣೆಗೆ 1,100 ಬಾಟಲಿ ಶಾಯಿ
ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಅಳಿಸಲಾಗದ ಶಾಯಿಯ 1,100 ಬಾಟಲನ್ನು ಬಳಸಲಾಗಿದೆ. ಒಂದು ಬಾಟಲಿ ಇಂಕ್ ನಿಂದ ಸುಮಾರು 1.5 ಸಾವಿರ ಮತದಾರರಿಗೆ ಗುರುತು ಹಾಕಬಹುದಾಗಿತ್ತು. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಾಗಿ ಚುನಾವಣಾ ಆಯೋಗಕ್ಕೆ ಮಾ.15ರಂದು ತಲಾ 10 ಎಂಎಲ್ ಶಾಯಿಯುಳ್ಳ 1,100 ಬಾಟಲ್ ಗಳನ್ನು ಪೂರೈಸಲಾಗಿತ್ತು.
ಹೆಮ್ಮೆಯ ವಿದಾಯ
ಚುನಾವಣೆ ಮುಗಿದ ಎಷ್ಟೋ ತಿಂಗಳವರೆಗೂ ಮಾಯವಾಗದೆ, ಆಗಾಗ ಮತದಾನದ ಮಹತ್ವವನ್ನೂ, ನಾಗರಿಕರ ಆದ್ಯ ಕರ್ತವ್ಯವನ್ನು ನೆನಪಿಸುತ್ತಿದ್ದ ಈ ಶಾಯಿಗೆ ಈಗ ಹೆಮ್ಮೆಯ ವಿದಾಯ ಹೇಳಲಾಗುತ್ತಿದೆ[ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನ]