ದಸರಾ ಉದ್ಘಾಟನೆ: ಕಾರ್ನಾಡ್ ಬೇಡ, ಭೈರಪ್ಪ ಇರಲಿ
ಮೈಸೂರು, ಆ.1: 'ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ನಾಸ್ತಿಕರಾದ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಂದ ಉದ್ಘಾಟನೆ ಮಾಡಿಸಬಾರದು. ಅವರ ಬದಲು ನಮ್ಮ ಜಿಲ್ಲೆಯವರಾದ ಆಸ್ತಿಕ ಎಸ್ ಎಲ್ ಭೈರಪ್ಪ ಅವರಿಗೆ ಅವಕಾಶ ನೀಡಬೇಕು' ಎಂದು ಮಾಜಿ ಮೇಯರ್ ಸಂದೇಶ್ಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗಿರೀಶ್ ಕಾರ್ನಾಡ್ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬೆಂಬಲಿಸುತ್ತಾರೆ. ದೇಶದ ಸಂಸ್ಕೃತಿ, ಹಿಂದುತ್ವವನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ಇಂಥವರಿಂದ ಚಾಮುಂಡೇಶ್ವರಿ ದೇವಿಯ ಪೂಜೆ ಮಾಡಿಸಬೇಕೆ? ದಸರಾಕ್ಕೆ ಐತಿಹಾಸಿಕ ಮಹತ್ವದ ಜತೆಗೆ ಧಾರ್ಮಿಕ ಮಹತ್ವವೂ ಇದೆ ಹೀಗಿರುವಾಗ ಕಾರ್ನಾಡ್ ಅವರ ಆಯ್ಕೆ ಎಷ್ಟು ಸರಿ? ಎಂದು ಪ್ರಶ್ನಿಸಿದರು.
ನಮ್ಮ ಜಿಲ್ಲೆಯವರಾದ ಹಿರಿಯ ಸಾಹಿತಿ ಆಸ್ತಿಕ ಎಸ್.ಎಲ್.ಭೈರಪ್ಪನವರಿಂದಲೇ ದಸರಾ ಉದ್ಘಾಟಿಸಬಹುದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರು ಸ್ಥಳೀಯರಿಗೆ ಆದ್ಯತೆ ನೀಡಬಹುದಲ್ಲ ಎಂದು ಸಂದೇಶ್ ಹೇಳಿದರು. ಒಂದು ವೇಳೆ ಕಾರ್ನಾಡ್ ಅವರೇ ಉದ್ಘಾಟಿಸಬೇಕಾದರೆ 'ಇದುವರೆಗೆ ನಾಸ್ತಿಕನಾಗಿದ್ದೆ. ಇನ್ನು ಮುಂದೆ ಆಸ್ತಿಕನಾಗಿರುತ್ತೇನೆ' ಎಂದು ಘೋಷಿಸಿ ನಂತರ ದಸರಾ ಹಬ್ಬ ಉದ್ಘಾಟಿಸಲಿ ಎಂದು ಸಂದೇಶ್ಸ್ವಾಮಿ ತಿಳಿಸಿದರು. [ದಸರಾ ಉದ್ಘಾಟಿಸಲಿದ್ದಾರೆ ಗಿರೀಶ್ ಕಾರ್ನಾಡ್]

ಒಂದು ವೇಳೆ ಗಿರೀಶ್ ಕಾರ್ನಾಡ್ರಿಂದಲೇ ದಸರಾ ಹಬ್ಬಕ್ಕೆ ಚಾಲನೆ ನೀಡಲು ಮಂದಾದರೆ ನಮ್ಮ ಪಕ್ಷದ ಮುಖಂಡರು, ಸಾರ್ವಜನಿಕರೊಂದಿಗೆ ಚರ್ಚಿಸಿ ಹೋರಾಟ ರೂಪಿಸುವ ಕುರಿತು ನಿರ್ಧರಿಸುತ್ತೇವೆ ಎಂದು ಹೇಳಿದರು.
ಕಳೆದ ದಸರಾ ಮಹೋತ್ಸವದ ವೇಳೆ ರಸ್ತೆ ಗುಂಡಿ ಮುಚ್ಚಲು 19 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 7 ಕೋಟಿ ರೂ. ಮಾತ್ರ ಖರ್ಚಾಗಿತ್ತು. ಉಳಿದ ಹಣ ಏನಾಯಿತೆಂದು ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಸಂದೇಶ್ಸ್ವಾಮಿ ದೂರಿದರು. ಜೆಡಿಎಸ್ ಮುಖಂಡ ಎಸ್ಬಿಎಂ ಮಂಜು, ರಾಘವರೆಡ್ಡಿ, ರೂಪೇಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.[ಮೈಸೂರು ದಸರಾ 2013 ಮರೆಯದ ಚಿತ್ರಗಳು]
ಸೆ.25,2014ರಂದು ದಸರಾ ಮಹೋತ್ಸವ ಉದ್ಘಾಟಿಸುವಂತೆ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರಿಗೆ ಕರ್ನಾಟಕ ಸರ್ಕಾರ ಆಹ್ವಾನ ನೀಡಿದೆ.












Click it and Unblock the Notifications