"ಆಪರೇಷನ್ ಕಮಲ' ಪುಸ್ತಕ ಓದಲು ಕಾಯುತ್ತಿದ್ದೇನೆ: ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 01: ಎಚ್.ವಿಶ್ವನಾಥ್ ಅವರ "ಆಪರೇಷನ್ ಪುಸ್ತಕ' ದ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವಿಶ್ವನಾಥ್ ದೊಡ್ಡ ಬರಹಗಾರ, ಅವರು ಆಪರೇಷನ್ ಕಮಲದ ಕುರಿತು ಪುಸ್ತಕ ಬರೆಯಲಿ ಬಿಡಿ. ನಾವು ಕೊಂಡು ಓದುತ್ತೇವೆ ಎಂದ ಅವರು, ಆಪರೇಷನ್ ಕಮಲದಲ್ಲಿ ಯಾರು ಎಷ್ಟು ದುಡ್ಡು ಪಡೆದರು ಎಂಬ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಲಿ ಎಂದು ಹೇಳಿದರು.
ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು : ಸಿದ್ದರಾಮಯ್ಯ
ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಇದೇ ರೀತಿಯ ಪರಿಸ್ಥಿತಿ ಆಗಬೇಕು. ಅದು ಯಾವುದೇ ಪಕ್ಷ ಆಗಿರಲಿ. ಆ ಪುಣ್ಮಾತ್ಮನೇ(ವಿಶ್ವನಾಥ್) ಆಪರೇಷನ್ ಕಮಲಕ್ಕೆ ಒಳಗಾಗಿದ್ದು, ಈಗ ಏನು ಬರೀತಾರಂತೆ ಎಂದು ಪ್ರಶ್ನಿಸಿದರು.
ಆಪರೇಷನ್ ಕಮಲಕ್ಕೆ ಕೊಟ್ಯಾಂತರ ರೂ, ಖರ್ಚು
ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
"ಸಂಪುಟಕ್ಕೆ 10+3, ಆ ಮೂರರಲ್ಲಿ ನಾನೂ ಇರಬಹುದು"; ವಿಶ್ವನಾಥ್ ಭರವಸೆ
ರಾಜ್ಯದಲ್ಲಿ ನಡೆದ ಆಪರೇಷನ್ ಕಮಲಕ್ಕೆ ಬಿಜೆಪಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದು, ಅಷ್ಟೊಂದು ಹಣವನ್ನು ಎಲ್ಲಿಂದ ತಂದರು? ಎಂದು ಪ್ರಶ್ನಿಸಿದ ಅವರು, ಸಚಿವೆ ನಿರ್ಮಲ ಸೀತಾರಾಮನ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಬಜೆಟ್ ನಲ್ಲಿ ಭರವಸೆ ನೀಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ರಾಜಕೀಯ
ದೇಶದಲ್ಲಿ ಎನ್ಪಿಆರ್, ಸಿಎಎ ಮತ್ತು ಎನ್ಆರ್ಸಿ ಜಾರಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುವುದು ನಿಶ್ಚಿತ. ಈ ಕಾಯ್ದೆಗಳ ವಿರುದ್ಧ ಜನರು ಹೋರಾಟ ನಡೆಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾರು ಕೂಡ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುವುದಿಲ್ಲ ಎಂದರು.
ಕಾಶ್ಮೀರದಲ್ಲಿ ನಿಷೇದಾಜ್ಞೆ ತೆರವುಗೊಳಿಸಿದ ನಂತರ ಅಲ್ಲಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮತ್ತೊಂದೆಡೆ ದೇಶದ ಆರ್ಥಿಕ ಪರಿಸ್ಥಿತಿ ಪತಾಳಕ್ಕೆ ಕುಸಿದಿದೆ. ಇದನ್ನು ಮುಚ್ಚಿಟ್ಟು ಹಿಂದುತ್ವದ ಹೆಸರಿನಲ್ಲಿ ಗೆಲುವು ಸಾಧಿಸಿಸಲು ಎನ್ಪಿಆರ್, ಸಿಎಎ ಮತ್ತು ಎನ್ಆರ್ಸಿ ಜಾರಿಗೆ ತರುತ್ತಿದ್ದಾರೆ ಎಂದು ಟೀಕಿಸಿದರು.
ಅನ್ನಭಾಗ್ಯ ಯೋಜನೆ ನಿಲ್ಲಿಸಲು ಹುನ್ನಾರ
ಬಡವರಿಗೋಸ್ಕರ ರೂಪಿಸಿದ ಅನ್ನಭಾಗ್ಯ ಯೋಜನೆಯನ್ನು ಮುಂದುವರೆಸುವ ಆಸಕ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲ. ಈ ಕಾರಣಕ್ಕೆ ಅಕ್ಕಿ ಕಡಿತ ಮಾಡುವ ಮಾತನ್ನು ಸಚಿವೆ ಶಶಿಕಲಾ ಜೊಲ್ಲೆ ಮೂಲಕ ಹೇಳಿಸಿದ್ದಾರೆ ಎಂದು ಆರೋಪಿಸಿದರು.
2 ಕೆ.ಜಿ. ಅಕ್ಕಿ ಕಡಿತದಿಂದ 2 ಸಾವಿರ ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಹೊಂದಿದ್ದಾರೆ. ಬಡವರ ಹೊಟ್ಟೆಗೆ ಹೊಡೆದು ಹಣ ಉಳಿತಾಯ ಮಾಡಬೇಕೇ?, ಈ ಹಣವನ್ನು ಯಾರಿಗೆ ನೀಡಲು ಅವರು ಚಿಂತನೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಗಾಂಧಿ ಕೊಂದವರಿಂದ ದೇಶಭಕ್ತಿ ಪಾಠ ಹೇಳಿಸಿಕೊಳ್ಳುವುದಿಲ್ಲ
ಗಾಂಧೀಜಿ ಕುರಿತು ಟೀಕೆ ಮಾಡುವ ಸಂಸದ ಅನಂತ್ ಕುಮಾರ್ ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಹಾಗೂ ಹಿಂದು ಮಹಾಸಭಾದ ಎಷ್ಟು ಜನ ಬಲಿದಾನವಾಗಿದ್ದಾರೆ ಎಂಬುದಕ್ಕೆ ಮೊದಲು ಉತ್ತರಿಸಲಿ. ಗೋಡ್ಸೆ, ಸಾರ್ವಕರ್ ಪೂರ್ವಜರಿಂದ ಗಾಂಧೀಜಿ ಬಗ್ಗೆ ಉತ್ತಮ ಮಾತುಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಅನಂತ ಕುಮಾರ್ ಹೆಗಡೆ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್. ಗೊಡ್ಸೆಯನ್ನು ಪೂಜಿಸುವವರಿಂದ ನಾವು ದೇಶಭಕ್ತಿಯ ಪಾಠ ಹೇಳಿಸಿಕೊಳ್ಳಬೇಕೇ? ಗಾಂಧಿಯನ್ನು ಹತ್ಯೆ ಮಾಡಿದ್ದು ದೇಶದ್ರೋಹನೋ ಅಥವಾ ದೇಶಭಕ್ತಿನೋ ಎಂಬುದಕ್ಕೆ ಅವರು ಉತ್ತರಿಸಲಿ ಎಂದರು.
ಭಾರತ ಸತ್ಯ, ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದಿದೆ
ಮಾಜಿ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಬಿಜೆಪಿಯವರೇ ನಿರ್ಮಾಣ ಮಾಡಿದ್ದಾರೆ. ಇದೇ ಪಟೇಲರು ಆರ್ಎಸ್ಎಸ್ ಅನ್ನು ಏಕೆ ನಿಷೇಧಿಸಿದರು ಎಂಬುದನ್ನು ಅವರು ತಿಳಿದುಕೊಳ್ಳಲಿ.
ಕ್ರೂರ ಮನೋಭಾವ ಇರುವವರಿಗೆ ಸತ್ಯ ಅಹಿಂಸೆ ಅರ್ಥವಾಗುವುದಿಲ್ಲ. ಜಗತ್ತಿನಲ್ಲಿ ರಕ್ತಪಾತ ಇಲ್ಲದೆ ಅಹಿಂಸೆ, ಸತ್ಯಾಗ್ರಹ ಮೂಲಕ ಸ್ವಾತಂತ್ರ್ಯ ಪಡೆದಿದ್ದರೆ ಅದು ಭಾರತ ಮಾತ್ರ. ಈ ವಿಚಾರ ಅವರಿಗೆ ಗೊತ್ತೇ? ಕನಿಷ್ಠ ಅವರ ಹಿರಿಯರಿಂದಾದರೂ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದರು.