ತನ್ವೀರ್ ಸೇಠ್ ಜೊತೆ ನಾವಿದ್ದೇವೆ: ಕೈ ಶಾಸಕನಿಗೆ ಎಚ್ಡಿಕೆ ಅಭಯ
ಮೈಸೂರು, ಮಾರ್ಚ್ 5: ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮೈತ್ರಿ ಕುರಿತು ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಭಿನ್ನಮತದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ತನ್ವೀರ್ ಸೇಠ್ ಜೊತೆಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಕೈ ಶಾಸಕನಿಗೆ ಅಭಯ ನೀಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಾಸಕ ತನ್ವೀರ್ ಸೇಠ್ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.
"ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ. ಅದನ್ನೆಲ್ಲ ನಂಬುವುದಿಲ್ಲ. ಕಾಂಗ್ರೆಸ್ ನಾಯಕರು ಶಾಸಕ ತನ್ವೀರ್ ಸೇಠ್ ಮೇಲೆ ಅಸಮಾಧಾನಗೊಂಡಿರಬಹುದು. ಆದರೆ ತನ್ವೀರ್ ಸೇಠ್ ಅವರ ಜೊತೆಯಲ್ಲಿ ನಾವಿದ್ದೇವೆ. ಶಾಸಕ ತನ್ವೀರ್ ಸೇಠ್, ಈಗಿನ ಕೆಟ್ಟ ಶಕ್ತಿಗಳನ್ನು ದೂರವಿಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ'' ಎಂದರು.

"ಒಂದು ಕಡೆ, ಬಿಜೆಪಿಯನ್ನು ದೂರ ಇಡುತ್ತೇವೆ, ಮುಗಿಸುತ್ತೇವೆ ಎಂದು ಹೇಳುವ ಮಹಾನುಭಾವ, ಇನ್ನೊಂದೆಡೆ ಜೆಡಿಎಸ್ ನ ದೂರ ಇಟ್ಟು, ಜೆಡಿಎಸ್ ನೊಂದಿಗೆ ಕೈ ಜೋಡಿಸಬೇಡಿ ಎನ್ನುವ ವ್ಯಕ್ತಿ ಇದ್ದಾರೆ'' ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
"ಶಾಸಕ ತನ್ವೀರ್ ಸೇಠ್ ಸ್ಥಳೀಯವಾಗಿ ಬಿಜೆಪಿಯನ್ನು ದೂರವಿಡಬೇಕು ಎಂದು ಹೊರಟವರು. ಆದರೆ, ಅವರಿಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ. ತನ್ವೀರ್ ಸೇಠ್ ಅವರಿಗೆ ರಾಜಕೀಯವಾಗಿ ಅನಾನುಕೂಲವಾಗಿ, ತಬ್ಬಲಿಯಾದಾಗ ಅವರಿಗೆ ಸಂಪೂರ್ಣವಾಗಿ ರಕ್ಷಣೆ ಕೊಡುತ್ತೇವೆ'' ಅಂತ ಹೇಳಿದ್ದರು.
"ಈಗ ತನ್ವೀರ್ ಅವರಿಗೆ ಅದರ ಅವಶ್ಯಕತೆ ಇಲ್ಲ, ಅವರಿಗೆ ಅವರದೇ ಆದ ಶಕ್ತಿ ಇದೆ. ಅವರನ್ನು ಚುನಾವಣೆಯಲ್ಲಿ ಹಲವು ಬಾರಿ ಸೋಲಿಸಬೇಕು ಎಂದು ನಾವು ಪ್ರಯತ್ನಿಸಿದ್ದೇವೆ. ಜೊತೆಗೆ ಬೇರೆಯವರು ಪ್ರಯತ್ನಿಸಿ ವಿಫಲರಾಗಿದ್ದಾರೆ.''
"ತನ್ವೀರ್ ಅವರದೇ ವ್ಯಕ್ತಿತ್ವದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಟ್ಟಿದ್ದಾರೆ. ಒಂದು ವೇಳೆ ತನ್ವೀರ್ ಸೇಠ್ ಅವರಿಗೆ ಅನಾನುಕೂಲವಾದರೆ ಜೆಡಿಎಸ್ ಅವರ ಪರ ಇರಲಿದೆ'' ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಭಯ ನೀಡಿದರು.












Click it and Unblock the Notifications