ಕನಿಷ್ಠ ಲಾರಿಯನ್ನಾದ್ರೂ ಉಳಿಸಿದರಲ್ಲ ಪುಣ್ಯಾತ್ಮ ಪೊಲೀಸರು!
ಮೈಸೂರು, ಜುಲೈ 24 : ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು, ನಂತರ ಮರಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಲಾರಿ ಮಾಲೀಕರು ನೀಡಿದ ದೂರಿನ ಅನ್ವಯ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೈಸೂರು ಹೊರವಲಯದಲ್ಲಿ ಬಿಳಿಕೆರೆ ಪೊಲೀಸರು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಬುಧವಾರ ಹಿಡಿದಿದ್ದರು. ಲಾರಿ ಚಾಲಕ ಯೋಗೇಶ್ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ನಂತರ ಲಾರಿಯಲ್ಲಿದ್ದ ಮರಳನ್ನು ಪೊಲೀಸರು ಮಾರಾಟ ಮಾಡಿದ್ದಾರೆ ಎಂಬುದು ಆರೋಪ. [ಮರಳು ಮಾಫಿಯಾ ಎಂದರೇನು, ಏನಿದರ ಮರ್ಮ]

ಜಾಮೀನಿನ ಮೇಲೆ ಹೊರಬಂದ ಲಾರಿ ಚಾಲಕ ಯೋಗೇಶ್ ತನ್ನ ಲಾರಿ ರಾಮಕೃಷ್ಣ ನಗರದ ಬಳಿ ಇರುವುದನ್ನು ಗಮನಿಸಿದ್ದಾರೆ. ಸ್ನೇಹಿತರೊಂದಿಗೆ ಅಲ್ಲಿಗೆ ತೆರಳಿದಾಗ ಒಂದು ಮನೆಯ ಮುಂಭಾಗ ಪೊಲೀಸರು ವಶಪಡಿಸಿಕೊಂಡ ಮರಳನ್ನು ಖಾಲಿ ಮಾಡಲಾಗಿತ್ತು. [ಮರಳು ಹಗರಣ ತನಿಖೆ ಸಿಐಡಿ ಹೆಗಲಿಗೆ]
ಇದನ್ನು ಗಮನಿಸಿದ ಯೋಗೇಶ್ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಬಿಳೆಕೆರೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಪೇದೆ ಭರತ್ ವಿರುದ್ಧ ದೂರು ನೀಡಿದರು. ವಶಪಡಿಸಿಕೊಂಡ ಲಾರಿಯಲ್ಲಿದ್ದ ಸುಮಾರು 44,000 ರೂ. ಮರಳನ್ನು ಪೊಲೀಸರು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡ ಎಸ್ಪಿ ಅಭಿನವ್ ಕಾರೆ ಅವರು ಇನ್ಸ್ಪೆಕ್ಟರ್ ಪುರುಷೋತ್ತಮ್ ಅವರನ್ನು ಅಮಾನತು ಮಾಡಿದ್ದಾರೆ ಮತ್ತು ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.












Click it and Unblock the Notifications