ಮೈಸೂರಲ್ಲಿ ಬೆಳೆಗೆ ಬಿದ್ದ ಬೆಂಕಿ, ರೈತನ ಹೊಟ್ಟೆಗೆ ತಣ್ಣೀರು
ಮೈಸೂರು,ಜನವರಿ,18: ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಲಕ್ಷಾಂತರ ರೂ ಮೌಲ್ಯದ ಹುಲ್ಲು ಭಸ್ಮವಾಗಿದೆ. ಹುಣಸೂರು ತಾಲೂಕಿನ ಧರ್ಮಾಪುರ ಜಿ.ಪಂ ವ್ಯಾಪ್ತಿಯ ನಂಜಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಕಣ್ಣೀರು ಸುರಿಸುವಂತಾಗಿದೆ.
ಗ್ರಾಮದ ಸಿದ್ದಶೆಟ್ಟಿ ಅವರು ಸುಮಾರು ಐದು ಎಕರೆಯಲ್ಲಿ ಭತ್ತದ ಕೃಷಿ ಮಾಡಿದ್ದರು. ಬೆಳೆ ಕೊಯ್ಲು ಮುಗಿಸಿ ಭತ್ತವನ್ನು ಬೇರ್ಪಡಿಸಿ ಹುಲ್ಲನ್ನು ಮೆದೆ ಮಾಡಲು ರಾಶಿಹಾಕಿದ್ದರು. ಆದರೆ ಅದು ಹೇಗೋ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಪರಿಣಾಮ ಹುಲ್ಲು ಹೊತ್ತಿ ಉರಿದಿದೆ.[ಹುಣಸೂರಿನ ಮೂರು ರಸ್ತೆಗಳಲ್ಲಿ ಮೆರವಣಿಗೆ ಬಂದ್]
ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಹರಸಾಹಸ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಬೆಂಕಿ ಬೇರೆ ರೈತರ ಹುಲ್ಲಿನ ಮೆದೆಗೆ ಆವರಿಸುವುದನ್ನು ತಪ್ಪಿಸಲಾಯಿತು. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬರುವಷ್ಟರಲ್ಲೇ ಹುಲ್ಲು ಉರಿದು ಭಸ್ಮವಾಗಿತ್ತು.[ಮಣ್ಣುಪಾಲಾದ ಹುಣಸೂರಿನ ಬೀಜೋತ್ಪಾದನಾ ಕೇಂದ್ರ]
ಕಣಕ್ಕೆ ನುಗ್ಗುವ ಕಾಡಾನೆಗಳಿಂದ ರೈತರಿಗೆ ಆತಂಕ
ಮೈಸೂರು,ಜನವರಿ,18: ಇದುವರೆಗೆ ಜಮೀನುಗಳಿಗೆ ಲಗ್ಗೆಯಿಟ್ಟು ಫಸಲನ್ನು ನಷ್ಟಪಡಿಸುತ್ತಿದ್ದ ಕಾಡಾನೆಗಳು ಇದೀಗ ರೈತರು ಕಟಾವು ಮಾಡಿ ಕಣದಲ್ಲಿಡುವ ಮೆದೆಯನ್ನೇ ನಾಶಗೊಳಿಸುತ್ತಿವೆ. ಬೇಸಿಗೆ ಆರಂಭಕ್ಕೆ ಮುನ್ನವೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರವನ್ನರಸಿ ಬರುತ್ತಿರುವ ಕಾಡಾನೆಗಳ ಉಪಟಳ ಹೆಚ್ಚಾಗಿದೆ.
ಹುಣಸೂರು ತಾಲೂಕಿನ ನಾಗರಹೊಳೆ ಕಾಡಂಚಿನ ಗ್ರಾಮಗಳಾದ ನೇರಳಕುಪ್ಪೆಯ ತಮ್ಮೇಗೌಡರು ಮತ್ತು ಕಾಳಬೋಚನಹಳ್ಳಿಯ ಮೈಲಾರಿಗೌಡ ರೈತರ ರಾಗಿ ಹಾಗೂ ಜೋಳ ಬೆಳೆ ನಾಶವಾಗಿದ್ದು, ಸಾವಿರಾರು ರೂ.ನಷ್ಟವಾಗಿದೆ.[ಮೈಸೂರು ರೈತರಿಗೆ ಯಾವುದೇ ಸೌಲಭ್ಯವಿಲ್ಲ, ಗೋಳು ಕೇಳೋರಿಲ್ಲ!]
ನೇರಳಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದಲೂ ಕಾಡಾನೆಗಳು ಎಲ್ಲೆಂದರಲ್ಲಿ ಸಂಚರಿಸುತ್ತಿದ್ದು, ಕೆ.ಜಿ.ಹೆಬ್ಬನಕುಪ್ಪೆ, ಬಿಲ್ಲೆನಹೊಸಹಳ್ಳಿ ಹಾಗೂ ಕಡೇಮನುಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀರತಮ್ಮನಹಳ್ಳಿ, ಕಡೇಮನುಗನಹಳ್ಳಿ, ಕಿಕ್ಕೇರಿಕಟ್ಟೆ ಗ್ರಾಮಗಳ ಜನರಿಗೆ ಸದಾ ತೊಂದರೆ ನೀಡುತ್ತಿವೆ.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]
ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಹಲವು ಸಂಕಷ್ಟಗಳ ನಡುವೆ ರೈತರು ತಮ್ಮ ಜಮೀನುಗಳಲ್ಲಿ ಜೋಳ, ತಂಬಾಕು, ಶುಂಠಿ, ಭತ್ತ, ರಾಗಿ ಸೇರಿದಂತೆ ಹಲವು ಬೆಳೆ ಬೆಳೆದಿದ್ದು, ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ನರೇಗಾ ವತಿಯಿಂದ ಸ್ಥಳೀಯರನ್ನು ರಾತ್ರಿ ಕಾವಲುಗಾರರನ್ನು ನೇಮಿಸಿದ್ದರೂ ಏನು ಪ್ರಯೋಜನವಾಗಲಿಲ್ಲ.