ಹಾರಂಗಿ ಕಟ್ಟೇಪುರ ಗೊರೂರು ನಾಲೆಗೆ ನೀರು ಹರಿಸಲು ಒತ್ತಾಯ
ಮೈಸೂರು, ಜುಲೈ 24 : ಹಾರಂಗಿ, ಕಟ್ಟೇಪುರ ಮತ್ತು ಗೊರೂರು ನಾಲೆಗಳಿಗೆ ನೀರು ಹರಿಸಿ ಕರೆಕಟ್ಟೆಗಳನ್ನು ತುಂಬಿಸದ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡಿಸಿ ಶಾಸಕ ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.
ಜೂನ್ 1ರಿಂದ ತಮಿಳುನಾಡಿಗೆ 2.2ಟಿಎಂಸಿ ನೀರು ಹರಿಸಿದ ಕರ್ನಾಟಕ
ನಗರದ ಕಾಡಾ ಕಚೇರಿಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಹಾರಂಗಿ, ಕಟ್ಟೇಪುರ ಮತ್ತು ಗೊರೂರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಕೊಡಗು ಉಸ್ತುವಾರಿ ಸಚಿವ ಸೀತಾರಾಂ ಅವರ ನೇತೃತ್ವದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬುಧವಾರದಿಂದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಬಾರಿಯೂ ನೀರನ್ನು ತುಂಬಿಸದಿದ್ದರಿಂದ ಬೊರ್ ವೆಲ್ ಗಳು ಬತ್ತಿಹೋಗಿದೆ. ಆ ಕಾರಣದಿಂದ ರೈತರಿಗೆ ಬೆಳೆಗಳಿಗೆ ನೀರು ಕೊಡಲಾಗದಿದ್ದರೂ ಸಹ ಅವರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಲು ಸಮಿತಿ ಒತ್ತಾಯಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ತಮಿಳುನಾಡಿಗೆ ಮತ್ತೆ ಹರಿದ ಕಾವೇರಿ, ನದಿಗಿಳಿದು ರೈತರ ಪ್ರತಿಭಟನೆ
ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಇವರಿಗೆ ನಾಚಿಕೆಯಾಗಬೇಕು. ನಾವು ರೈತರ ಬೆಳೆಗಳಿಗೆ ನೀರು ಕೇಳುತ್ತಿಲ್ಲ. ನಮಗೂ ಅರ್ಥವಾಗುತ್ತದೆ. ಕೂಡಲೇ ಕುಡಿಯಲು, ಜಾನುವಾರುಗಳಿಗೆ ಅನುಕೂಲವಾಗುವಂತೆ ಕೆರೆಗಳಿಗೆ ನೀರು ತುಂಬಿಸಬೇಕು. ಎಲ್ಲಿಯವರೆಗೆ ನೀರು ಬಿಡುವುದಿಲ್ಲ. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುತ್ತೇವೆ ಎಂದರು.
ನಂಜನಗೂಡಿನಲ್ಲೂ ಬೀದಿಗಿಳಿದ ಅನ್ನದಾತ
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲೂ ರೈತರು ಪ್ರತಿಭಟನೆ ನಡೆಸಿದರು. ನೂರಾರು ರೈತರು ಮೊದಲು ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಂಜನಗೂಡಿನ ಕಪಿಲಾನದಿಯ ಸೇತುವೆ ಮೇಲ್ಭಾಗದಲ್ಲಿ ಬೆಳಗ್ಗಿನಿಂದಲೇ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಪರಿಣಾಮ ಮೈಸೂರು ನಂಜನಗೂಡು ನಡುವಿನ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.