ಪ್ರತಾಪ್ ಸಿಂಹರನ್ನು ಅವಿವೇಕಿ ಸಂಸದ ಎಂದು ಕೂಗಿದ ರೈತರು
ಮೈಸೂರು, ಜುಲೈ 5: ಮೈಸೂರು ನಗರದಲ್ಲಿ ರೈತ ಮುಖಂಡರು ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಿವೇಕಿ ಸಂಸದ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.
ಮೈಸೂರು ನಗರದ ಜಿಲ್ಲಾ ಪಂಚಾಯತ್ ಸಂಭಾಂಗಣದ ಮುಂಭಾಗ ಸೋಮವಾರ ರೈತರ ಮುಖಂಡರು ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ರೈತ ಮುಖಂಡರೊಬ್ಬರು, "ಕೊಳ್ಳೇಗಾಲದಲ್ಲಿ ಧರಣಿ ಮಾಡಿ ನಾಲೆಗಳಿಗೆ ನೀರು ಬಿಡಿ ಅಂತ ಕೇಳಿಲ್ಲ ಅಂತ ಅಂದುಕೊಳ್ಳಬೇಡಿ, ಗೆದ್ದಿರುವ ಅವಿವೇಕಿಗಳಿಗೆ ಅದರ ಬಗ್ಗೆ ಮಾತನಾಡುವುದಕ್ಕೆ ಆಗುತ್ತಿಲ್ಲ,'' ಎಂದರು.

ರೈತರನ್ನು ಉಸ್ತುವಾರಿ ಸಚಿವ ಸೋಮಶೇಖರ್ ನಾನು ಸ್ವತಃ ನೀರು ಹರಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ ಹೇಳುತ್ತಿರುವಾಗಲೇ, ರೈತರು ಅವಿವೇಕಿ ಎಂದಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡು, "ಜನಪ್ರತಿನಿಧಿಗಳನ್ನು ಅವಿವೇಕಿಗಳು ಎನ್ನುತ್ತಾರೆ. ಇವರದು ಅವಿವೇಕಿತನದ ಮಾತುಗಳು,'' ಎಂದು ಸಚಿವರನ್ನು ಸ್ಥಳದಿಂದ ಕರೆದುಕೊಂಡ ಹೊರಟರು.
ಇದರಿಂದ ಆಕ್ರೋಶಗೊಂಡ ರೈತರು, "ಅನರ್ಹ ಸಂಸದ, ಅವಿವೇಕಿ, ನಾಲಾಯಾಕ್ ಹಾಗೂ ರೈತ ವಿರೋಧಿ ಸಂಸದ ಎಂದು ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಪ್ರಧಾನಿ ಬಳಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ ಇಲ್ಲ, ಪರಿಜ್ಞಾನ ಬೇಡವಾ ಇವನಿಗೆ,'' ಎಂದು ಕಿಡಿಕಾರಿದರು. ರೈತರನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದರು.












Click it and Unblock the Notifications