ಮೈಸೂರು: ಸಾಲಕ್ಕೆ ಹೆದರಿ ನೇಣಿಗೆ ಶರಣಾದ ರೈತ
ಮೈಸೂರು, ಸೆಪ್ಟೆಂಬರ್ 25: ಸಾಲಕ್ಕೆ ಹೆದರಿ ರೈತನೊರ್ವ ದನದ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಕೆ.ಆರ್.ನಗರದ ಮುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯದಲ್ಲಿ ರೈತರೇಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ?
ಮುಂಜನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಮಳೆಯಾಗದ ಕಾರಣದಿಂದಾಗಿ ಕೃಷಿ ಕಾರ್ಯ ನೆನೆಗುದಿಗೆ ಬಿದ್ದಿತ್ತಲ್ಲದೆ ಮಾಡಿದ ಕೃಷಿಯೂ ಕೈ ಸೇರಿರಲಿಲ್ಲ.
ಈ ಬಾರಿ ಒಂದೂವರೆ ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆದಿದ್ದು, ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಬೆಳೆದ ರಾಗಿ ಬೆಳೆ ಸಂಪೂರ್ಣವಾಗಿ ಒಣಗಿತ್ತು. ಇದರಿಂದ ಫಸಲು ಬಂದರೆ ಸಾಲ ತೀರಿಸ ಬಹುದು ನಂಬಿದ್ದ ವೆಂಕಟೇಶ್ ಗೆ ಚಿಂತೆ ಆರಂಭವಾಗಿತ್ತು.
ಕೃಷಿಗಾಗಿ ಕೆ.ಆರ್.ನಗರದ ಕೆನರಾ ಬ್ಯಾಂಕಿನಲ್ಲಿ 50 ಸಾವಿರ ಬೆಳೆ ಸಾಲ ಹಾಗೂ ಹಲವರಿಂದ ಕೈಸಾಲ ಮಾಡಿದ್ದರು. ಆದರೆ ಬೆಳೆ ಒಣಗಿದ ಹಿನ್ನಲೆಯಲ್ಲಿ ಸಾಲ ತೀರಿಸುವುದು ಕಷ್ಟವಾಗಿತ್ತು. ಹೀಗಾಗಿ ಸಾಲವನ್ನು ತೀರಿಸಲಾಗದೆ ಮನೆಯವರಿಗೆ ತಿಳಿಯದಂತೆ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ರೈತ ವೆಂಕಟೇಶ್ ನ ಅಣ್ಣ ರಾಮಯ್ಯ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.