ತಿಂಡಿ ತಿಂದ ಹಣ ಕೇಳಿದ್ದಕ್ಕೆ ಹಿಗ್ಗಾ ಮುಗ್ಗಾ ಥಳಿಸಿದ ಗ್ರಾಹಕ
ಮೈಸೂರು, ಮೇ31 : ವ್ಯಕ್ತಿಯೊಬ್ಬ ಬೇಕರಿಯಲ್ಲಿ ತಿಂದ ತಿಂಡಿಗೆ ಬೇಕರಿ ಸಿಬ್ಬಂದಿ ಹಣ ಕೇಳಿದ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ಇಲವಾಲದಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇಲವಾಲ ಬಸ್ ನಿಲ್ದಾಣದ ಬಳಿ ಮುಸ್ತಾಫ ಎಂಬುವವರು ಬೇಕ್ ಅಂಡ್ ಜಾಯ್' ಎಂಬ ಬೇಕರಿ ನಡೆಸುತ್ತಿದ್ದು, ಗ್ರಾಹಕನೊಬ್ಬ ಬೇಕರಿಯಲ್ಲಿ ತಿಂಡಿ ತಿಂದಿದ್ದಾನೆ. ನಂತರ ಅಲ್ಲಿಂದ ಹೊರಡುವಾಗ ಸಿಬ್ಬಂದಿಯು ತಿಂಡಿಯ ಹಣ ನೀಡುವಂತೆ ಕೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಗ್ರಾಹಕ ನಾನು ಯಾರು ಗೊತ್ತಾ, ನನ್ನ ಹತ್ತಿರವೇ ದುಡ್ಡು ಕೇಳುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಆತನ ಬೆಂಬಲಿಗರೂ ಕೂಡ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಬೇಕರಿಯಲ್ಲಿರುವ ಕೆಲ ವಸ್ತುಗಳನ್ನು ಒಡೆದು ಹಾಕಿದ್ದಾರೆ.

ನಾನು ಎಷ್ಟು ಬಾರಿ ಬೇಕಾದರೂ ಇಲ್ಲಿಗೆ ಬಂದು ತಿಂಡಿ ತಿನ್ನುತ್ತೇನೆ. ದುಡ್ಡು ಕೇಳಿದರೆ ನಿನಗೆ ಗ್ರಹಚಾರ ಬಿಡಿಸುತ್ತೇನೆ ಎಂದು ಮಾಲೀಕ ಮುಸ್ತಾಫ ಅವರಿಗೆ ಧಮ್ಕಿ ಹಾಕಿ ಹೊರ ನಡೆದಿದ್ದಾನೆ. ಈತ ನಡೆಸಿದ ರಾದ್ಧಾಂತವೆಲ್ಲ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬೇಕರಿ ಮಾಲೀಕ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರೇ ಖುದ್ದು ಆಸಕ್ತಿ ವಹಿಸಿ, ಬೇಕರಿ ಮಾಲೀಕರೊಂದಿಗೆ ಇಲವಾಲ ಪೊಲೀಸ್ ಠಾಣೆಗೆ ತೆರಳಿ, ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲು ನೆರವಾಗಿದ್ದಾರೆ.
ಸಿಸಿ ಟಿವಿಯ ಫುಟೇಜ್ ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಸದ್ಯ ದಾಳಿ ಮಾಡಿದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆಬೀಸಿದ್ದಾರೆ.












Click it and Unblock the Notifications