ಕಮಿಷನ್ ಸರಕಾರ ಬೇಕಾ, ಮಿಷನ್ ಸರಕಾರ ಬೇಕಾ? : ಮೈಸೂರಿನಲ್ಲಿ ಮೋದಿ
ಮೈಸೂರು, ಫೆಬ್ರವರಿ 19 : "ನಾನು ಬೆಂಗಳೂರಿನಲ್ಲಿ ಕಾಂಗ್ರೆಸ್ ಸರಕಾರವನ್ನು 10 ಪರ್ಸೆಂಟ್ ಸರಕಾರವೆಂದು ಜರಿದ ನಂತರ ಹಲವರು ನನಗೆ ಫೋನ್ ಮಾಡಿದರು, ಸಂದೇಶ ಕಳಿಸಿದರು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು... ಅವರ ಆಕ್ರೋಶಕ್ಕೆ ಕಾರಣವೇನೆಂದರೆ, ಕಾಂಗ್ರೆಸ್ ಸರಕಾರ 10 ಪರ್ಸೆಂಟ್ ಸರಕಾರವಲ್ಲ, ಅದಕ್ಕೂ ಹೆಚ್ಚು ಲಂಚ ಪಡೆಯುವ ಸರಕಾರ!"
ಹೀಗೆಂದು ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಮತ್ತೆ ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಂಡವರು ಪ್ರಧಾನಿ ನರೇಂದ್ರ ಮೋದಿ. ರಾಜಸ್ತಾನದ ಉದಯಪುರ ಮತ್ತು ಮೈಸೂರು ನಡುವೆ ಸಂಚರಿಸಲಿರುವ 'ಹಮ್ ಸಫರ್ ಎಕ್ಸ್ ಪ್ರೆಸ್' ರೈಲಿಗೆ ಮೈಸೂರಿನಲ್ಲಿ ಚಾಲನೆ ನೀಡಿದ ನಂತರ ಸುದೀರ್ಘವಾದ ಭಾಷಣ ಮಾಡಿದ ಮೋದಿಯವರು ಸಿದ್ದರಾಮಯ್ಯ ಸರಕಾರವನ್ನು ತೀವ್ರವಾಗಿ ಟೀಕಿಸಿದರು.
ಇಂಥ ಸರಕಾರ ನಮಗೆ ಬೇಕಾ? ಇಂಥ ಕಮಿಷನ್ ಸರಕಾರವನ್ನು ಕರ್ನಾಟಕದ ನೆಲದಿಂದ ಕಿತ್ತೊಗೆಯಿರಿ. ನಮ್ಮದು ಕಮಿಷನ್ ಸರಕಾರವಲ್ಲ, ನಮ್ಮದು 'ಮಿಷನ್' ಸರಕಾರ. ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ 'ಮಿಷನ್' ಇಟ್ಟುಕೊಂಡು ಕೆಲಸ ಮಾಡಲಿರುವ ಸರಕಾರವಾಗಲಿದೆ ಎಂದು ಮಹಾರಾಜ ಕಾಲೇಜಿನಲ್ಲಿ ನೆರೆದಿದ್ದ ಲಕ್ಷಾಂತರ ಜನರಿಗೆ ಕರೆ ನೀಡಿದರು.

ಕಾಂಗ್ರೆಸ್ ಸರಕಾರಕ್ಕೆ ಇನ್ನೂ ಹೆಚ್ಚಿನ ಸಮಯ ನೀಡಿದರೆ ಕರ್ನಾಟಕವನ್ನು ಬರ್ಬಾದ್ ಮಾಡಿಯೇ ಅವರು ತೆರಳುತ್ತಾರೆ. ಆದ್ದರಿಂದ ಕರ್ನಾಟಕದಿಂದ ಕಾಂಗ್ರೆಸ್ ತೊಲಗಲೇಬೇಕು. ಇದು ವಿದ್ಯಾವಂತರಿರುವ, ಸಂಸ್ಕೃತಿಯ ಹರಿಕಾರರಾಗಿರುವ ಮೈಸೂರಿನ ಜನರಿಂದಲೇ, ಮೈಸೂರು ನೆಲದಿಂದಲೇ ಆರಂಭವಾಗಬೇಕು ಎಂದ ಅವರ ಮಾತಿಗೆ ಸಹಸ್ರಾರು ಜನರು ದನಿಗೂಡಿಸಿದರು.
In Pics: ಮೈಸೂರಿಗೆ ಆಗಮಿಸಿದ ನರೇಂದ್ರ ಮೋದಿ
ಮಾತುಮಾತಿನ ನಡುವೆ 'ಡೈರಿ ಗೇಟ್' ಹಗರಣವನ್ನು, ತಮ್ಮ ಆಂಗಿಕ ಅಭಿನಯದ ಮೂಲದ ವ್ಯಂಗ್ಯದ ಧಾಟಿಯಲ್ಲೇ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು, ಯಾರ್ಯಾರು ಯಾವ್ಯಾವ ಕೆಲಸಗಳಿಗಾಗಿ ಎಷ್ಟೆಷ್ಟು ಪಡೆದಿದ್ದಾರೆ ಎಂಬುದು ಡೈರಿಯಲ್ಲಿಯೇ ದಾಖಲಾಗುತ್ತದೆ. ಇಂಥವರಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವೆ ಎಂದು ಅವರು ಮೈಸೂರಿಗರನ್ನು ಪ್ರಶ್ನಿಸಿದರು.












Click it and Unblock the Notifications