ಕುಂಭಮೇಳದಲ್ಲಿ ಭಕ್ತರಿಂದ ಪುಣ್ಯಸ್ನಾನ: ಯಾಗಶಾಲೆ ಪ್ರಧಾನ ಆಕರ್ಷಣೆ
ಮೈಸೂರು, ಫೆಬ್ರವರಿ 19:11ನೇ ತಿರುಮಕೂಡಲು ನರಸೀಪುರ ಕುಂಭಮೇಳ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ ನದಿ ಪಾತ್ರದಲ್ಲಿ ಚಂಡಿಕಾಹೋಮ ಪೂರ್ಣಾಹುತಿ ನಡೆಯಿತು.
ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು
ಕುಂಭಮೇಳದಲ್ಲಿ ಮಿಂದರೆ ಪಾಪಕರ್ಮಗಳು ಕಳೆಯುತ್ತವೆ ಎಂಬ ನಂಬಿಕೆ ಇದೆ. ಇದಕ್ಕಾಗಿಯೇ ಉತ್ತರ ಭಾರತದ ಪ್ರಯಾಗ ರಾಜ್ನಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಗಂಗಾ ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಇದೇ ಬಗೆಯಲ್ಲಿ ಪವಿತ್ರ ಸ್ನಾನ ಮಾಡಲೆಂದು ಜಿಲ್ಲಾಡಳಿತ ಇಲ್ಲಿ ವ್ಯವಸ್ಥೆ ಮಾಡಿತ್ತು. ಆದರೆ, ಮಿಂದೇಳುವವರ ಸಂಖ್ಯೆ ಕಡಿಮೆ ಇತ್ತು. ಬಂದಿದ್ದ ಜನರು ನೀರಿನಲ್ಲಿ ಇರಿಸಿದ್ದ ಮರಳಿನ ಮೂಟೆಯ ಸೇತುವೆ ಮೇಲೆ ಕುತೂಹಲದಿಂದ ನಡೆಯುತ್ತಾ ಕಾವೇರಿ, ಕಪಿಲಾ ಹಾಗೂ ಸ್ಫಟಿಕ ನದಿಗಳ ಸಂಗಮ ಕ್ಷೇತ್ರದಲ್ಲಿನ ನಡುಗಡ್ಡೆ ತಲುಪಿ ರೋಮಾಂಚನಗೊಂಡದ್ದು ಬಿಟ್ಟರೆ, ಹೆಚ್ಚಿನವರು ಪವಿತ್ರ ಸ್ನಾನದಲ್ಲಿ ಭಾಗಿಯಾಗಲಿಲ್ಲ.

ಬಹಳಷ್ಟು ಮಂದಿಗೆ ನೀರಿನೊಳಗೆ ನಿರ್ಮಿಸಲಾಗಿದ್ದ ಯಾಗಶಾಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳೇ ಪ್ರಧಾನ ಆಕರ್ಷಣೆಯಾಗಿತ್ತು. ನೀರಿನಲ್ಲಿ ಮೀಯುವವರಲ್ಲಿ ಭಕ್ತರಿಗಿಂತ ಹೆಚ್ಚಾಗಿ ಯುವಕರೇ ಇದ್ದರು. ಬಿಸಿಲಿನ ತಾಪಕ್ಕೆ ಕೆಲವರು ಮುಳುಗೆದ್ದರು. ಬಹುಪಾಲು ಸ್ಥಳೀಯರಲ್ಲಿ ಕುಂಭಮೇಳದ ಮಹತ್ವದ ಅರಿವಿನ ಕೊರತೆ ಇತ್ತು.
ಸಂಗಮ ಕ್ಷೇತ್ರಕ್ಕೆ ಹೋಗುವ ರಸ್ತೆ ತೀರಾ ಚಿಕ್ಕದಾಗಿದ್ದು, ಸಂಜೆಯ ನಂತರ ಸಂಚಾರ ದಟ್ಟಣೆ ಉಂಟಾಯಿತು. ಹೀಗಾಗಿ, ಇಡೀ ಪ್ರದೇಶದಲ್ಲಿ ಅಕ್ಷರಶಃ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪಟಾಕಿ ಸಿಡಿತದ ನಂತರ ಭಾರೀ ಪ್ರಮಾಣದಲ್ಲಿ ಪಟ್ಟಣದಲ್ಲಿ ಜನರು ಸಂಗಮ ಕ್ಷೇತ್ರದತ್ತ ಬಂದಿದ್ದು, ದಟ್ಟಣೆಗೆ ಕಾರಣವಾಯಿತು.

ಅಗ್ನಿ ಶಾಮಕದಳದಿಂದ ನದಿಯಲ್ಲಿ ಭಕ್ತರ ರಕ್ಷಣೆಗೆ ವಿಶೇಷ ತಂಡಗಳನ್ನು ನೇಮಿಸಲಾಗಿದೆ. ಮಂಡ್ಯ ,ಮೈಸೂರು, ಚಾಮರಾಜನಗರ ಜಿಲ್ಲೆಗಳ ಅಗ್ನಿ ಶಾಮಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾರ್ವಜನಿಕರ ರಕ್ಷಣೆಗಾಗಿ ಸುಮಾರು 125 ಸಿಬ್ಬಂದಿ, ಏಳು-ನಾಲ್ಕು ಮೋಟಾರ್ ಬೋಟ್, ಒಟ್ಟು ಏಳು ವಾಹನ, ಒಂದು ಟೋಹಿಂಗ್ ವೇಹಿಕಲ್, 12 ಅಡ್ವನ್ಸ್ ಫೋಮ್ ಸಿಲಿಂಡರ್, 100 ಲೈಫ್ ಜಾಕೆಟ್ ಅನ್ನು ಭದ್ರತೆಗಾಗಿ ಒದಗಿಸಲಾಗಿದೆ.












Click it and Unblock the Notifications